ಮಂಚಿಯಲ್ಲಿ ಮೆಸ್ಕಾಂನಿಂದಲೇ ಅಕ್ರಮ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ: ನಾರಾಯಣ ಭಟ್ ಆರೋಪ
ಬಂಟ್ವಾಳ, ಮಾ. 26: ತಾಲೂಕಿನ ಮಂಚಿಯಲ್ಲಿ ಮೆಸ್ಕಾಂನಿಂದಲೇ ಅಕ್ರಮ ವಿದ್ಯುತ್ ಸಂಪರ್ಕಕ್ಕೆ ಕಲ್ಪಿಸಲಾಗಿದೆ ಎಂದು ಮಂಚಿ ಶ್ರೀಗೋಪಾಲಕೃಷ್ಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಆರೋಪಿಸಿದ್ದಾರೆ.
ಅವರು ಮಂಗಳವಾರ ಬಿ.ಸಿ.ರೋಡಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರ್ಮಿಕದತ್ತಿ ಇಲಾಖೆಗೊಳಪಟ್ಟ ಕೊಳ್ನಾಡು ಗ್ರಾಮದ ಮಂಚಿ ಶ್ರೀಗೋಪಾಲಕೃಷ್ಣ ದೇವಸ್ಥಾನದ ಕೃಷಿ ಭೂಮಿಗೆ ನೀರಿನ ಉಪಯೋಗಕ್ಕೆ ತೆರದ ಬಾವಿಗೆ ಎಂ.ಎಚ್.ಐ.ಪಿ 278 ಸಂಖ್ಯೆಯ ಸ್ಥಾವರ ಕಾರ್ಯಾಚರಿಸುತ್ತಿದ್ದು, ತೆರೆದ ಬಾವಿಯಲ್ಲಿ ನೀರಿನ ಕೊರತೆಯನ್ನು ಮನಗಂಡು ಪಕ್ಕದಲ್ಲಿರುವ ಕೊಳವೆ ಬಾವಿಗೆ ತೆರೆದ ಬಾವಿಯ ಸಂಪರ್ಕವನ್ನು ಸ್ಥಳಾಂತರಿಸುವಂತೆ ದೇವಳದ ವ್ಯವಸ್ಥಾಪನಾ ಸಮಿತಿ 2018ರ ಆ.25 ರಂದು ಮೆಸ್ಕಾಂನ ಸಾಲೆತ್ತೂರು ಶಾಖಾಧಿಕಾರಿಯವರಿಗೆ ಮನವಿ ಸಲ್ಲಿಸಿತ್ತು.
ಶಾಖಾಧಿಕಾರಿಗಳ ನಿರ್ದೇಶನದಂತೆ ಸ್ಥಾವರದ ಸ್ಥಳಾಂತರಕ್ಕೆ ಸಂಬಂಧಿಸಿ ಸೂಕ್ತ ಮೊತ್ತವನ್ನು ಪಾವತಿಸಿ, ನಿಯಮಾವಳಿಯಂತೆ ತೆರೆದ ಬಾವಿಯ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ಇದಾದ ಎರಡು ದಿನಗಳ ಬಳಿಕ ಅಚ್ಚರಿ ಎಂಬಂತೆ ತೆರೆದ ಬಾವಿಯಲ್ಲಿ ಸ್ಥಾವರಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿರುವುದು ವ್ಯವಸ್ಥಾಪನಾ ಸಮಿತಿಯ ಗಮನಕ್ಕೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಸಮಿತಿ ವತಿಯಿಂದ ವಿಟ್ಲ ವಲಯ ಮೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕರ ಗಮನಕ್ಕೆ ಲಿಖಿತವಾಗಿ ದೂರು ಅರ್ಜಿಯನ್ನು ನೀಡಲಾಗಿತು. ಆದರೆ, ಇವರಿಂದ ಯಾವುದೇ ಪ್ರತಿಕ್ರಯೆಯಾಗಲಿ, ಸ್ಪಂದನವಾಗಲಿ ಸಿಗದ ಹಿನ್ನಲೆಯಲ್ಲಿ ಜ. 24ರಂದು ಬಂಟ್ವಾಳ ಉಪವಿಭಾಗ ಮೆಸ್ಕಾಂನ ಹಿರಿಯ ಅಧಿಕಾರಿ ಹಾಗೂ ಮೆಸ್ಕಾಂನ ಅಧೀಕ್ಷಕ ಇಂಜಿನಿಯರ್ ಅವರಿಗೂ ಮನವಿ ಮಾಡಲಾಗಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂನ ಹಿರಿಯ ಅಧಿಕಾರಿಗಳು ಒಂದೇ ಸ್ಥಾವರ ಸಂಖ್ಯೆಯಲ್ಲಿ ಎರಡು ಪ್ರತ್ಯೇಕ ವಿದ್ಯುತ್ ಸಂಪರ್ಕವಿರುವುದು ಕಾನೂನುಬಾಹಿರವಾಗಿದ್ದು, ಸಂಸ್ಥೆಯ ನಿಯಾಮಾವಳಿಯಂತೆ ತಕ್ಷಣ ಕ್ರಮ ಕೈಗೊಂಡು ವರದಿ ಒಪ್ಪಿಸುವಂತೆ ವಿಟ್ಲ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಅವರಿಗೆ ಫೆ.11 ರಂದು ಆದೇಶ ನೀಡಿದ್ದರು ಎಂದು ಕೈಯೂರು ನಾರಾಯಣಭಟ್ ತಿಳಿಸಿದ್ದಾರೆ.
ಆದರೆ ವಿಟ್ಲವಲಯ ಸ.ಕಾ.ನಿ.ಇಂಜಿನಿಯರ್ ತಮ್ಮ ಮೇಲಾಧಿಕಾರಿಗಳ ಆದೇಶಕ್ಕೆ ಬೆಲೆ ನೀಡದೆ ದೇವಸ್ಥಾನಕ್ಕೆ ಸಂಬಂಧಪಡದ ವ್ಯಕ್ತಿಯೊಬ್ಬರೊಂದಿಗೆ ಶಾಮೀಲಾಗಿ ಆತ ನೀಡಿರುವ ಸುಳ್ಳು ಮಾಹಿತಿಯನ್ನು ಮಾನ್ಯ ಮಾಡಿ ವ್ಯವಸ್ಥಾಪನಾ ಸಮಿತಿಯನ್ನು ಕನಿಷ್ಠ ವಿಚಾರಿಸದೆ ಈ ಬಗ್ಗೆ ನ್ಯಾಯಾಲಯದಲ್ಲಿ ವ್ಯವಹರಿಸುವಂತೆ ಹಿಂಬರಹ ನೀಡಿದ್ದಲ್ಲದೆ ಎರಡು ಸಂಪರ್ಕವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲಾಗುವುದು ಎಂದು ಆದೇಶ ಹೊರಡಿಸಿರುತ್ತಾರೆಂದು ನಾರಾಯಣ ಭಟ್ ತಿಳಿಸಿದ್ದಾರೆ.
ಈ ಹಿಂಬರಹಕ್ಕೆ ಸಮಿತಿಯಿಂದ ಮತ್ತೆ ಕೊಳವೆ ಬಾವಿ ಸಂಪರ್ಕ ಉರ್ಜಿತಗೊಳಿಸಿ ತೆರೆದ ಬಾವಿಯಸಂಪರ್ಕ ಕಡಿತಗೊಳಿಸುವಂತೆ ಮನವಿ ಸಲ್ಲಿಸಿದಾಗ ಇದಕ್ಕೂ ವಿಟ್ಲ ಸ.ಕಾ.ನಿ.ಇಂಜಿನಿಯರ್ ತಮ್ಮ ಅಧಿಕಾರ ವ್ಯಾಪ್ತಿಯನ್ನೇ ಮೀರಿ ತೆರೆದಬಾವಿ ಸಂಪರ್ಕ ಕಡಿತಗೊಳಿಸಬೇಕಾದರೆ ನ್ಯಾಯಾಲಯದಿಂದಲೇ ನಿರ್ದೇಶನ ಕೊಡಿಸಬೇಕೆಂದು ಎರಡನೆ ಬಾರಿ ಕೂಡ ಹಿಂಬರಹ ನೀಡಿದ್ದಾರೆಂದು ವಿಟ್ಲ ಮೆಸ್ಕಾಂ ಸ.ಕಾ.ನಿ.ಇಂ.ರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇವಸ್ಥಾನ, ಮೆಸ್ಕಾಂ ಎರಡೂ ಸಂಸ್ಥೆ ಸರಕಾರದ ಅಧೀನದಲ್ಲಿದ್ದು, ವಿಟ್ಲ ಮೆಸ್ಕಾಂ ಸ.ಕಾ.ನಿ.ಇಂ. ಖಾಸಗಿ ವ್ಯಕ್ತಿಯೊಬ್ಬರೊಂದಿಗೆ ಶಾಮಿಲಾಗಿ ಎರಡೂ ಸಂಸ್ಥೆಗೂ ನಷ್ಟ ಉಂಟುಮಾಡುತ್ತಿದ್ದು, ತಕ್ಷಣ ಮೆಸ್ಕಾಂನ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ವಿಟ್ಲ ವಲಯ ಮೆಸ್ಕಾಂ ಸ.ಕಾ.ನಿ.ಇಂ. ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ದೇವಸ್ಥಾನದ ತೆರೆದ ಬಾವಿಯ ವಿದ್ಯುತ್ ಬಾವಿಯ ಸಂಪರ್ಕ ಕಡಿತಗೊಳಿಸಬೇಕು. ಇಲ್ಲದಿದ್ದಲ್ಲಿ ಲೋಕಾಯುಕ್ತರ ಮೋರೆ ಹೋಗಲಾಗುವುದು ಎಂದು ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಸೀತಾರಾಮ ಶೆಟ್ಟಿ, ವಿಠಲಪ್ರಭು, ವಕೀಲ ರವೀಂದ್ರ ಕುಕ್ಕಾಜೆ ಉಪಸ್ಥಿತರಿದ್ದರು.