ಕರಾವಳಿ ಕೈಮಗ್ಗದ ಸೀರೆಗಳಿಗೆ ಮತ್ತೆ ಮನ್ನಣೆಗೆ ಚರಕ ಸಂಸ್ಥೆ ಪ್ರಯತ್ನ
ಕದಿಕೆ ಟ್ರಸ್ಟ್ನಿಂದ ‘ಉಡುಪಿ ಸೀರೆ ಉಳಿಸಿ ಅಭಿಯಾನ’
ಉಡುಪಿ, ಮಾ. 26: ಕಾರ್ಕಳದ ಕದಿಕೆ ಟ್ರಸ್ಟ್ ಹಾಗೂ ಸಾಗರದ ಚರಕಾ ಮಹಿಳಾ ವಿವಿದ್ದೋದ್ದೇಶ ಸಹಕಾರಿ ಸೊಸೈಟಿಗಳು ಬೆಂಗಳೂರಿನ ದೇಸಿ ಸಂಸ್ಥೆಯೊಂದಿಗೆ ಸೇರಿ ಉಡುಪಿಯ ಪ್ರಸಿದ್ಧ ಕೈಮಗ್ಗದ ಸೀರೆಗಳನ್ನು ಉಳಿಸಲು ಹಾಗೂ ಅವುಗಳ ಉಪಯುಕ್ತತೆಯನ್ನು ಮನದಟ್ಟು ಮಾಡಲು ‘ಉಡುಪಿ ಸೀರೆ ಉಳಿಸಿ ಅಭಿಯಾನ’ವನ್ನು ಪ್ರಾರಂಭಿಸಲಾಗಿದೆ ಎಂದು ಖ್ಯಾತ ರಂಗಕರ್ಮಿ ಹಾಗೂ ಚರಕ ಸಂಸ್ಥೆಯ ಬಿ.ಪ್ರಸನ್ನ ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಸೀರೆ ತನ್ನ ಪ್ರಾದೇಶಿಕ ವೈಶಿಷ್ಟತೆಗಾಗಿ 2016ರಲ್ಲಿ ಜಿಯೋಗ್ರಾಫಿಕಲ್ ಇಂಡಿಕೇಶನ್ (ಜಿಐ) ಟ್ಯಾಗ್ನ್ನು ಪಡೆದಿದೆ ಎಂದವರು ತಿಳಿಸಿದರು.
ಉಡುಪಿ ಸೀರೆ ಕೈಮಗ್ಗದ ಬಟ್ಟೆ ಪರಿಸರ ಸ್ನೇಹಿಯಾಗಿದೆ ಹಾಗೂ ಯಂತ್ರೋತ್ಪನ್ನಗಳ ಹೋಲಿಕೆಯಲ್ಲಿ ಹಲವು ಪಟ್ಟು ಹೆಚ್ಚು ಉದ್ಯೋಗಗಳನ್ನು ಸೃಷ್ಟಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದವರು ನುಡಿದರು.
ಕಿನ್ನಿಗೋಳಿಯ ತಾಳಿಪಾಡಿ ಪ್ರಾಥಮಿಕ ನೇಕಾರರ ಸಹಕಾರಿ ಸಂಘದ ಮೂಲಕ ಕೈಮಗ್ಗದಲ್ಲೇ ನೈಸರ್ಗಿಕ ಬಣ್ಣದಿಂದ ತಯಾರಿಸಲಾದ ಉಡುಪಿ ಸೀರೆಯನ್ನು ಪ್ರಸನ್ನ ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೊಮ್ಮೆ ಸಾವಿರಾರು ನೇಕಾರರು ಉಡುಪಿ ಸೀರೆಗಳನ್ನು ನೇಯುತಿದ್ದರು. ಇದು ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಅತ್ಯಂತ ಜನಪ್ರಿಯವೂ ಆಗಿತ್ತು. ಆದರೆ ಕಳೆದ ಮೂರ್ನಾಲ್ಕು ದಶಕಗಳಿಂದ ವಿವಿಧ ಕಾರಣಗಳಿಂದ ಈ ನೇಕಾರರು ಕೈಮಗ್ಗದ ಕಾಯಕವನ್ನು ತೊರೆದು ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಮುಂದಾದರು. ಇದರಿಂದ ಈಗ ಹಿರಿಯ ತಲೆಮಾರಿನ ಕೇವಲ 40 ನೇಕಾರರು ಮಾತ್ರ ಉಡುಪಿ ಸೀರೆ ನೆಯ್ಗೆ ವೃತ್ತಿಯಲ್ಲಿದ್ದಾರೆ. ಹೀಗಾಗಿ ಈ ಭವ್ಯ ಪರಂಪರೆ ಕಣ್ಮರೆಯಾಗುವ ಅಪಾಯ ದೂರವೇನಿಲ್ಲ ಎಂದು ಪ್ರಸನ್ನ ಕಳವಳ ವ್ಯಕ್ತಪಡಿಸಿದರು.
ಈ ಅಪಾಯವನ್ನು ಅರಿತು ಸಾಗರ ತಾಲೂಕಿನ ಖ್ಯಾತ ಪರಿಸರ ಸ್ನೇಹಿ ಗ್ರಾಮೀಣ ಕೈಮಗ್ಗ ಸಂಸ್ಥೆಯಾದ ಚರಕ, ಪರಿಸರ ಸ್ನೇಹಿ ಗ್ರಾಮೋದ್ಯೋಗ, ಪಾರಂಪರಿಕ ಜ್ಞಾನ ಹಾಗೂ ಕುಶಲ ಕಲೆಗಳನ್ನು ಉಳಿಸುವ ಸಂಕಲ್ಪದೊಂದಿಗೆ ಪ್ರಾರಂಭಗೊಂಡ ಕಾರ್ಕಳದ ಕದಿಕೆ ಟ್ರಸ್ಟ್ನ ಸಹಯೋಗ ದೊಂದಿಗೆ ಉಡುಪಿ ಸೀರೆ ಉಳಿಸಿ ಅಭಿಯಾನವನ್ನು ಹಮ್ಮಿಕೊಂಡಿದೆ.ಇದಕ್ಕೆ ತಾಳಿಪಾಡಿ ಪ್ರಾಥಮಿಕ ನೇಕಾರ ಸಹಕಾರಿ ಸಂಘ ಕೈಜೋಡಿಸಿದೆ ಎಂದು ಪ್ರಸನ್ನ ವಿವರಿಸಿದರು.
ಪರಿಸರಕ್ಕೆ ಯಾವುದೇ ರೀತಿಯಲ್ಲಿ ಬಾಧಕವಾಗದ, ರಾಸಾಯನಿಕ ಬಣ್ಣಗಳನ್ನು ಬಳಸದೇ ಪರಿಸರ ಸ್ನೇಹಿ ನೈಸರ್ಗಿಕ ಬಣ್ಣಗಳನ್ನೇ ಬಳಸಿದ ಸೀರೆಯನ್ನು ತಯಾರಿಸುವುದಕ್ಕೆ ನಾವು ಆದ್ಯತೆಯನ್ನು ನೀಡುತ್ತೇವೆ. ಈ ನಿಟ್ಟಿನಲ್ಲಿ ಟ್ರಸ್ಟ್ ಈಗಾಗಲೇ ಎಂಟು ಮಂದಿ ಯುವಕರಿಗೆ ಇಂಥ ಸೀರೆ ನೆಯ್ಗೆಯಲ್ಲಿ ಪ್ರಾಥಮಿಕ ತರಬೇತಿಯನ್ನು ನೀಡುತ್ತಿದೆ ಎಂದು ಕದಿಕೆ ಟ್ರಸ್ಟ್ನ ಅಧ್ಯಕ್ಷೆ ಮಮತಾ ರೈ ತಿಳಿಸಿದರು.
ಸ್ವಾಭಾವಿಕ ಬಣ್ಣಗಳನ್ನು ಬಳಸಿದ 60 ಮತ್ತು 80ಕೌಂಟ್ನ ನೂಲಿನ ಉಡುಪಿ ಸೀರೆಗಳಿಗೆ ಈಗ ಉತ್ತಮ ಬೇಡಿಕೆಗಳಿವೆ. ಸಾಕಷ್ಟು ಶ್ರೀಮಂತ ಮಹಿಳೆಯರೂ ಇದನ್ನು ಖರೀದಿಸುತಿದ್ದಾರೆ. ಹೀಗಾಗಿ ಸ್ವಲ್ಪ ಪ್ರಯತ್ನ ಪಟ್ಟರೆ ನಾವು ಹಿಂದಿನ ಜನಪ್ರಿಯತೆ ಹಾಗೂ ಬೇಡಿಕೆಯನ್ನು ಉಡುಪಿ ಸೀರೆಗೆ ಮತ್ತೆ ಕೊಡಿಸಬಹುದು ಎಂಬ ವಿಶ್ವಾಸವಿದೆ ಎಂದು ಪ್ರಸನ್ನ ನುಡಿದರು.
ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವು ನೇಕಾರರ ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತಿದ್ದವು. ಈಗ ಅವೆಲ್ಲವೂ ನಷ್ಟ ದಲ್ಲಿದ್ದು, ವ್ಯವಹಾರವನ್ನೇ ನಿಲ್ಲಿಸಿವೆ. ಶೀಘ್ರವೇ ಚರಕ ಸೊಸೈಟಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನೇಕಾರರ ಪ್ರಾಥಮಿಕ ಸಹಕಾರಿ ಸಂಘದೊಂದಿಗೆ ಮಾತುಕತೆ ನಡೆಸಿ, ಅವು ಮತ್ತೆ ಉಡುಪಿ ಸೀರೆ ಉತ್ಪಾದನೆಗೆ ಮುಂದಾಗಲು ಪ್ರೋತ್ಸಾಹ ನೀಡುತ್ತೇವೆ ಎಂದರು.
ಉಡುಪಿ ಸೀರೆಯನ್ನು ರಾಜ್ಯದಲ್ಲಿ ಹಾಗೂ ದೇಶಾದ್ಯಂತ ಜನಪ್ರಿಯಗೊಳಿಸಲು ಕೆಲವು ಯೋಜನೆಗಳನ್ನು ನಾವು ಹಮ್ಮಿಕೊಳ್ಳಲಿದ್ದೇವೆ. ಉಡುಪಿ ಸೀರೆಯ ಜನಪ್ರಿಯತೆಗಾಗಿ ಕೆಲವು ಸಿನಿಮಾ ತಾರೆಯನ್ನು ಬಳಸಿಕೊಳ್ಳಲು ನಿರ್ಧರಿಸಿದ್ದೇವೆ. ಮುಂದಿನ ಮಾ.30ರಂದು ಬೆಂಗಳೂರಿನಲ್ಲಿ ನಬಾರ್ಡ್ನ ಜೊತೆ ಸೇರಿ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಿದ್ದೇವೆ. ದೇಶಿಯ ವಸ್ತುಗಳನ್ನು ಮುಂಚೂಣಿಗೆ ತರುವ ಕೆಲಸದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.
ಅಲ್ಲದೇ ಶೀಘ್ರವೇ ಮಣಿಪಾಲದಲ್ಲಿ ಒಂದು ಮಾರಾಟ ಮೇಳವನ್ನು ಆಯೋಜಿಸಲು ನಿರ್ಧರಿಸಿದ್ದೇವೆ. ಇದರೊಂದಿಗೆ ಉಡುಪಿ ಸೀರೆಯ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸಲು, ನೇಕಾರರಿಗೆ ಪ್ರೋತ್ಸಾಹ, ಮನ್ನಣೆ ಹಾಗೂ ಸೂಕ್ತ ಸಂಭಾವನೆ ದೊರಕಿಸಿಕೊಡಲು ಪ್ರಯತ್ನ ನಡೆಸಿದ್ದೇವೆ. ಯುವಕ, ಯುವತಿ ಯರಿಗೆ ಉಡುಪಿ ಸೀರೆ ನೆಯ್ಗೆ ತರಬೇತಿ, ಮಾರುಕಟ್ಟೆ ರೂಪಿಸುವ ಪ್ರಯತ್ನವೂ ನಡೆಯುತ್ತಿದೆ ಎಂದು ಮಮತಾ ರೈ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕದಿಕೆ ಟ್ರಸ್ಟ್ನ ಕಾರ್ಯದರ್ಶಿ ಚಿಕ್ಕಪ್ಪ ಶೆಟ್ಟಿ, ಖಂಜಾಚಿ ಶ್ರೀಕುಮಾರ್, ತಾಳಿಪಾಡಿ ನೇಕಾರರ ಸೊಸೈಟಿಯ ಕಾರ್ಯ ನಿರ್ವಹಣಾಧಿಕಾರಿ ಮಾಧವ ಶೆಟ್ಟಿಗಾರ್, ಕಲಾವಿದ ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು.