ಮಣಿಪಾಲ: ಬ್ಲೂ ಮೇಪಲ್ ಕೈಪಿಡಿ ಬಿಡುಗಡೆ
ಉಡುಪಿ, ಮಾ. 26: ಮಣಿಪಾಲದ ಮಾಹೆ, ಕಸ್ತೂರ್ಬಾ ಮೆಡಿಕಲ್ ಕಾಲೇಜು ಹಾಗೂ ಕಸ್ತೂರ್ಬಾ ಆಸ್ಪತ್ರೆಯ ಸಹಯೋಗದೊಂದಿಗೆ ಅಭಿವೃದ್ಧಿ ಪಡಿಸಿದ ವೈದ್ಯಕೀಯ ಚಿಕಿತ್ಸೆ ನಿಷ್ಪಲವಾದಾಗ ರೋಗಿಗೆ ನೀಡಬಹುದಾದ ಜೀವರಕ್ಷಕಗಳ ಕುರಿತಾದ ಮಾರ್ಗದರ್ಶಿ ಸೂತ್ರಗಳನ್ನು ಒಳಗೊಂಡ ಬ್ಲೂಮೇಪಲ್ ಕೈಪಿಡಿಯನ್ನು ನಿಮ್ಹಾನ್ಸ್ನ ನಿರ್ದೇಶಕರು ಹಾಗೂ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಗವರ್ನರ್ ಆಗಿರುವ ಡಾ. ಬಿ.ಎನ್. ಗಂಗಾಧರ ಬಿಡುಗಡೆಗೊಳಿಸಿದರು.
ಬ್ಲೂ ಮೇಪಲ್ ಕೈಪಿಡಿಯಲ್ಲಿ ಮಾರ್ಗದರ್ಶಿ ಸೂತ್ರಗಳ ಸಂಕಲನವಿದೆ. ಬದುಕು ಕೊನೆಗೊಳ್ಳುವ ಮುನ್ನ, ನಿಮಗೆ ಒದಗಿಸುವ ವೈದ್ಯಕೀಯ ಚಿಕಿತ್ಸೆಯ ಆಯ್ಕೆಯನ್ನು ಅರ್ಥಮಾಡಿಕೊಳ್ಳಿ ಮತ್ತು ಮೌಲ್ಯಮಾಪನ ಮಾಡಿ. ಜೀವ ರಕ್ಷಕ ಚಿಕಿತ್ಸೆಯನ್ನು ಸೀಮಿತಗೊಳಿಸುವುದಕ್ಕೆ ಹಾಗೂ ಲೈಫ್ ಕೇರ್ ಬೆಂಬಲವನ್ನು ಕೊನೆಗೊಳಿಸುವುದಕ್ಕೆ ವ್ಯವಸ್ಥಿತ ಕ್ರಿಯಾ ಯೋಜನೆಯನ್ನು ಬ್ಲೂ ಮೇಪಲ್ ಮೂಲಕ ರೂಪಿಸಲಾಗಿದೆ ಎಂದವರು ನುಡಿದರು.
ಇದನ್ನು ಕಳೆದ ವರ್ಷದ ಮಾರ್ಚ್ನಲ್ಲಿ ಸುಪ್ರೀಂಕೋರ್ಟ್ ನೀಡಿದ ‘ಘನತೆ ಯೊಂದಿಗೆ ಬದುಕುವ ಮತ್ತು ಸಾಯುವ ಹಕ್ಕು’ ಎಂಬ ತೀರ್ಪಿನ ನೀತಿ ಮತ್ತು ತತ್ವಗಳಿಗೆ ಪೂರಕವಾಗಿ ರೂಪಿಸಲಾಗಿದೆ.ಸಂವಹನ ಕೊರತೆ ಹಾಗೂ ಅಸಮರ್ಪಕ ಚಿಕಿತ್ಸೆಯಿಂದ ವೈದ್ಯಕೀಯ ಸಂಬಂಧಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಸಾರ್ವಜನಿಕರಿಗೆ ವೈದ್ಯರ ಮೇಲೆ ಋಣಾತ್ಮಕ ಅಭಿಪ್ರಾಯ ಮೂಡಿಸುತ್ತದೆ ಎಂದು ಡಾ.ಗಂಗಾಧರ್ ತಿಳಿಸಿದರು.
ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಕರುಣಾಶ್ರಯದ ವೈದ್ಯಕೀಯ ಅಧೀಕ್ಷಕ ಡಾ. ನಾಗೇಶ್ ಸಿಂಹ, ಮಾಹೆಯ ಸಹ ಉಪಕುಲಪತಿ ಡಾ. ಪೂರ್ಣಿಮಾ ಬಾಳಿಗಾ, ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಪ್ರಗ್ನಾ ರಾವ್ ಅತಿಥಿ ಗಳಾಗಿದ್ದರು.
ಕಸ್ತೂರ್ಬಾ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ. ಮುತ್ತಣ್ಣ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ, ಉಪ ವೈದ್ಯಕೀಯ ಅಧೀಕ್ಷಕ ಡಾ.ಪದ್ಮರಾಜ್ ಹೆಗ್ಡೆ, ಔಷಧಿ ವಿಭಾಗದ ಮುಖ್ಯಸ್ಥ ಡಾ.ನವೀನ್ ಸಲಿನ್ಸ್ ಉಪಸ್ಥಿತರಿದ್ದರು.