ಕಳವು ಪ್ರಕರಣ: ಸೊತ್ತು ಸಹಿತ ಇಬ್ಬರು ಆರೋಪಿಗಳು ಸೆರೆ
ಬಂಟ್ವಾಳ, ಮಾ. 26: ಪುತ್ತೂರಿನಿಂದ ಕಳವುಗೈದ ಸೊತ್ತುಗಳ ಸಹಿತ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಮಾಣಿ ಜಂಕ್ಷನ್ ನಲ್ಲಿ ಮಂಗಳವಾರ ನಡೆದಿದೆ.
ಇಲ್ಲಿನ ನಿವಾಸಿಗಳಾದ ಮುಹಮ್ಮದ್ ಸಿಹಾನ್ ಹಾಗೂ ಜೋಯ್ಸನ್ ಪೊಲೀಸರ ವಶದಲ್ಲಿರುವ ಆರೋಪಿಗಳು.
ಘಟನೆ ವಿವರ: ಇಂದು ಬೆಳಗ್ಗೆ ವಿಟ್ಲ ಠಾಣೆ ಪೊಲೀಸರು ಮಾಣಿ ಜಂಕ್ಷನ್ ನಲ್ಲಿ ಗಸ್ತು ಕರ್ತವ್ಯದಲ್ಲಿದ್ದ ವೇಳೆ ಇಬ್ಬರು ವ್ಯಕ್ತಿಗಳು ಗೋಣಿಚೀಲದೊಂದಿಗೆ ಅನುಮಾನಾಸ್ಪದವಾಗಿ ನಿಂತಿದ್ದರು. ಈ ಬಗ್ಗೆ ವಿಚಾರಿಸಿದಾಗ ಇವರಿಬ್ಬರು ಸಮರ್ಪಕವಾದ ಉತ್ತರವನ್ನು ನೀಡದೇ ಇದ್ದು, ಬಳಿಕ ಗೋಣಿ ಚೀಲವನ್ನು ಪರಿಶೀಲನೆ ನಡೆಸಿದಾಗ 2 ಹಳೆಯ ಪಂಪ್ ಗಳು, ಆಟೊ ರಿಕ್ಷಾದ ಡಿಸ್ಕ್, ಪಾಲಿಥಿನ್ ಚೀಲ ಇತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸೊತ್ತುಗಳನ್ನು ಪುತ್ತೂರು ಕಡೆಯಿಂದ ಕಳವು ಮಾಡಿ ಬಂದಿರುವುದಾಗಿ ಆರೋಪಿಗಳು ಮಾಹಿತಿ ನೀಡಿದ್ದು, ಇವುಗಳ ಮೌಲ್ಯ ಸುಮಾರು 2 ಸಾವಿರ ರೂ. ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.