ಕಡೇಶಿವಾಲಯ: ಮುಸುಕುದಾರಿ ತಂಡದಿಂದ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ
ಬಂಟ್ವಾಳ, ಮಾ. 27: ವ್ಯಕ್ತಿಯೊಬ್ಬರಿಗೆ ಮುಸುಕುದಾರಿ ತಂಡವೊಂದು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬಂಟ್ವಾಳ ತಾಲೂಕಿನ ಕಡೇಶಿವಾಲಯ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಇಲ್ಲಿನ ಕಡೇಶಿವಾಲಯದ ಭಂಡಾರಿಬೆಟ್ಟು ನಿವಾಸಿ ಅಬ್ದುಲ್ ಲತೀಫ್ (50) ಹಲ್ಲೆಗೊಳಗಾಗಿದ್ದು, ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ
ಲತೀಫ್ ಅವರು ಮಂಗಳವಾರ ರಾತ್ರಿ ಭಂಡಾರಿ ಬೆಟ್ಟುವಿನಲ್ಲಿರುವ ತನ್ನ ಅಣ್ಣನ ಮನೆಯಿಂದ ನಡೆದುಕೊಂಡು ಹೋಗುವಾಗ ಮುಸುಕುದಾರಿ ತಂಡವೊಂದು ಅಡ್ಡಗಟ್ಟಿದೆ. ಬಳಿಕ ನಿರ್ಜನ ಪ್ರದೇಶದಕ್ಕೆ ಕರೆದುಕೊಂಡು ಹೋಗಿ ದೊಣ್ಣೆ ಹಾಗೂ ಇನ್ನಿತರ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಘಟನೆಯಿಂದ ಲತೀಫ್ ಅವರ ತಲೆ, ಮುಖ, ಬೆನ್ನು ಹಾಗೂ ಕಾಲುಗಳಿಗೆ ಗಂಭೀರವಾದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೂರುದಾರರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ದೂರುದಾರರು ಬಂಟ್ವಾಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವೃತ್ತಿಯಲ್ಲಿ ಕೂಲಿ ಕಾರ್ಮಿಕರಾಗಿರುವ ಲತೀಫ್ ಅವರ ಮೇಲೆ ತಿಂಗಳ ಹಿಂದೆ ರಥಬೀದಿ ಎಂಬಲ್ಲಿ ತಂಡವೊಂದು ಹಲ್ಲೆ ಮಾಡಿತ್ತು. ಇದೇ ತಂಡ ಮತ್ತೆ ಹಲ್ಲೆ ನಡೆಸಿರಬಹುದೆಂದು ದೂರುದಾರರು ಶಂಕಿಸಿದ್ದಾರೆ.
ಘಟನೆಗೆ ಸ್ಪಷ್ಟ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.