ಕುಂದಾಪುರ: ಮಾ. 30ರಂದು ಹುಬ್ಬುರ್ರಸೂಲ್ ಬುರ್ದಾ ಮಜ್ಲಿಸ್
ಉಡುಪಿ, ಮಾ. 27: ಸುನ್ನಿ ಸಂಘಟನೆಗಳ ಮುಖಂಡ ಹಾಗೂ ಕುಂದಾಪುರ ಇಮಾಮ್ ಬೂಸೀರಿ ತಝ್ಕಿಯ್ಯ ಗಾರ್ಡನ್ ಇದರ ಶಿಲ್ಪಿ ಅಸ್ಸಯ್ಯಿದ್ ಜಅಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ಸಾರಥ್ಯದಲ್ಲಿ 11ನೇ ವಾರ್ಷಿಕ ಹುಬ್ಬುರ್ರಸೂಲ್ ಬುರ್ದಾ ಮಜ್ಲಿಸ್ ಕಾರ್ಯಕ್ರಮವನ್ನು ಮಾ. 30ರಂದು ಸಂಜೆ 4ಗಂಟೆಗೆ ಕುಂದಾಪುರ ಮೂಡುಗೋಪಾಡಿ ರಿಫಾಯಿಯ್ಯ ಮಸೀದಿ ಬಳಿ ಆಯೋಜಿಸಲಾಗಿದೆ.
ಪುಣ್ಯ ಸ್ಥಳಗಳಿಂದ ತರಲಾದ 11 ಪತಾಕೆಗಳನ್ನು 11 ಸಾದಾತು ಹಾಗೂ ಉಲಮಾಗಳಿಂದ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಅಸ್ಸಯ್ಯಿದ್ ತ್ವಾಹಾ ತಂಙಳ್ ಆರಿಫ್ ಸಅದಿ ಮತ್ತು ತಂಡದಿಂದ ಬುರ್ದಾ ಆಲಾಪನೆ, ಕವಾಲಿ ಮತ್ತು ನಅತೇ ಶರೀಫ್ ನಡೆಯಲಿದೆ ಎಂದು ಐಬಿಟಿ ಗಾರ್ಡನ್ ಉಪಾಧ್ಯಕ್ಷ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಸುದ್ದಿಗೋಷ್ಟಿಯಲ್ಲಿಂದು ತಿಳಿಸಿದ್ದಾರೆ.
ರಾತ್ರಿ 8ಗಂಟೆಗೆ ಹುಬ್ಬುರ್ರಸೂಲ್ ಸಮಾವೇಶದದಲ್ಲಿ ಚಿಂತಕ ಡಾ.ಎ.ಪಿ. ಅಬ್ದುಲ್ ಹಕೀಮ್ ಅಝ್ಹರಿ ಪ್ರಭಾಷಣ ಮಾಡಲಿರುವರು. ವಿದ್ವಾಂಸರಾದ ಡಾ.ಎಮ್ಮೆಸ್ಸೆಮ್ ಅಬ್ದುರ್ರಶೀದ್ ಸಖಾಫಿ ಝೈನಿ, ನೌಫಲ್ ಸಖಾಫಿ ಕಳಸ ಭಾಗವಹಿಸಲಿರುವರು. ಅಸ್ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್ ಕೊಯಿಲಾಂಡಿ ಸಮಾರೋಪ ದುವಾ ನೇತೃತ್ವ ವಹಿಸಲಿರುವರು.
ಅಸ್ಸಯ್ಯಿದ್ ಜಅಫರ್ ಅಸ್ಸಖಾಫ್ ತಂಙಳ್ ಅಧ್ಯಕ್ಷತೆ ವಹಿಸಲಿರುವರು. ಕರ್ನಾಟಕ ಉಲಮಾ ಒಕ್ಕೂಟದ ಅಧ್ಯಕ್ಷ ಹಾಗೂ ಉಡುಪಿ, ಚಿಕ್ಕಮಗಳೂರು ಹಾಸನ ಜಿಲ್ಲೆ ಸೇರಿದಂತೆ 200ಕ್ಕೂ ಅಧಿಕ ಮೊಹಲ್ಲಾಗಳ ಖಾಝಿ ತಾಜುಲ್ ಫುಖಹಾಅ ಶೈಖುನಾ ಬೇಕಲ ಇಬ್ರಾಹಿಮ್ ಮುಸ್ಲಿಯಾರ್ ಅವರಿಗೆ ಇಮಾಮ್ ಬೂಸೀರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಸುದ್ದಿಗೋಷ್ಠಿಯಲ್ಲಿ ಅಸ್ಸಯ್ಯಿದ್ ಜಅಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ, ಐಬಿಟಿ ಗಾರ್ಡನ್ ಪ್ರಧಾನ ಕಾರ್ಯದರ್ಶಿ ನಾಸಿರ್ ಮೂಡು ಗೋಪಾಡಿ, ಕಾರ್ಯದರ್ಶಿ ಹಂಝತ್ ಹೆಜಮಾಡಿ, ಎಸ್ವೈಎಸ್ ಜಿಲ್ಲಾ ಕೋಶಾಧಿಕಾರಿ ಹಾಜಿ ಕೆ.ಮೊಯಿದಿನ್ ಗುಡ್ವಿಲ್ ಉಪಸ್ಥಿತರಿದ್ದರು.