ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಸೈದ್ಧಾಂತಿಕ ಹೋರಾಟ: ಬಂಡಾಯ ಅಭ್ಯರ್ಥಿ ಅಮೃತ್ ಶೆಣೈ
ಉಡುಪಿ, ಮಾ.27: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿರುವ ಕಾಂಗ್ರೆಸ್ ಹೈಕಮಾಂಡ್ನ ತಪ್ಪು ನಿರ್ಧಾರದ ವಿರುದ್ಧ ನನ್ನ ಸೈದ್ದಾಂತಿಕ ಹೋರಾಟವೇ ಹೊರತು ನನಗೆ ಟಿಕೆಟ್ ಸಿಕ್ಕಿಲ್ಲ ಎಂಬ ಸ್ವಾರ್ಥದಿಂದ ಸ್ಪರ್ಧಿಸುತ್ತಿಲ್ಲ ಎಂದು ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಮೃತ್ ಶೆಣೈ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಟಿಕೆಟ್ಗಾಗಿ ಲಾಬಿ ಮಾಡಿ ಗೊತ್ತಿಲ್ಲ. ಪಕ್ಷದಲ್ಲಿ ಯಾರಿಗೂ ಟಿಕೆಟ್ ಕೊಟ್ಟರೂ ಅವರ ಪರ ನಾನು ಕೆಲಸ ಮಾಡುತ್ತಿದ್ದೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ರುವ ನನ್ನಂತಹ ಸಕ್ರಿಯ ಕಾರ್ಯಕರ್ತರ ಗಮನಕ್ಕೆ ತಾರದೆ ಮತ್ತು ಯಾವುದೇ ಸಲಹೆ ಪಡೆಯದೆ ಈ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿರುವುದು ಸರಿಯಲ್ಲ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ನಾಲ್ಕು ಬಾರಿ ವಿಧಾನಸಭೆ ಸ್ಪರ್ಧಿಸಿರುವ, ಒಂದು ಬಾರಿ ಶಾಸಕ ಹಾಗೂ ಮಂತ್ರಿಯಾಗಿದ್ದ ಪ್ರಮೋದ್ ಮಧ್ವರಾಜ್, ಟಿಕೆಟ್ಗಾಗಿ ಜೆಡಿಎಸ್ ಪಕ್ಷಕ್ಕೆ ಹೋಗಿರುವುದು ದುರಾದೃಷ್ಟಕರ. ಕಾಂಗ್ರೆಸ್ ಹೈಕಮಾಂಡ್ನ ತಪ್ಪು ನಿರ್ಧಾರವನ್ನು ಬಹಿರಂಗವಾಗಿ ಖಂಡಿಸಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಈ ತಪ್ಪುಗಳನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಅವರು ತಿಳಿಸಿದರು.
ಸಾಮಾಜಿಕ ಸಾಮರಸ್ಯಕ್ಕೆ ಆದ್ಯತೆ
ಇಲ್ಲಿನ ಜನ ಕೇವಲ ಅಭಿವೃದ್ಧಿ ನೋಡಿ ಮತ ಹಾಕುವುದಿಲ್ಲ. ಇಂದು ದೇಶದಲ್ಲಿ ಸೈದ್ಧಾಂತಿಕ ಹೋರಾಟ ಮತ್ತು ಧಾರ್ಮಿಕ ವಿಚಾರಗಳ ಬಗ್ಗೆ ಚರ್ಚೆ ಗಳು ನಡೆಯುತ್ತಿವೆ. ಆದುದರಿಂದ ನಾನು ಸಂಸದನಾದರೆ ಸಾಮಾಜಿಕ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಹಿಂಸೆಗೆ ಒಳಗಾಗುವ ಅಲ್ಪ ಸಂಖ್ಯಾತರು, ದಲಿತರ ಜೊತೆಗೆ ನಿಲ್ಲುತ್ತೇನೆ ಎಂದು ಅಮೃತ್ ಶೆಣೈ ಹೇಳಿದರು.
ಡಿಜಿಟಲ್ ಇಂಡಿಯಾ ಹೇಳುವ ಸರಕಾರಕ್ಕೆ ಈವರೆಗೆ ನಾಪತ್ತೆಯಾದ ಒಂದು ಬೋಟು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಮೀನುಗಾರರ ಸಮಸ್ಯೆ, ಮರಳು ಸಮಸ್ಯೆ ಸೇರಿದಂತೆ ಕ್ಷೇತ್ರದ ಸಮಸ್ಯೆಗಳ ನೈಜ ಧ್ವನಿಯಾಗಿ ನಾನು ಸಂಸತ್ತಿನಲ್ಲಿ ಹೋರಾಟ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಎಂಟೂ ಕ್ಷೇತ್ರದಲ್ಲಿ ಓಡಾಡಿ ದ್ದೇನೆ. ಜನರಿಗೆ ನಾನು ಹೊಸ ಆಯ್ಕೆಯಾಗಿದ್ದೇನೆ. ಇಲ್ಲಿ ಕಾಂಗ್ರೆಸ್ ಚಿಹ್ನೆ ಇಲ್ಲದ ಕಾರಣ ಕಾಂಗ್ರೆಸ್ನ ಮತಗಳು ನನಗೆ ಬರುವ ಸಾಧ್ಯತೆ ಇದೆ ಎಂದು ಶೆಣೈ ಅಭಿಪ್ರಾಯ ಪಟ್ಟರು.
ಎಐಸಿಸಿ ಸ್ಥಾನಕ್ಕೆ ರಾಜೀನಾಮೆ
ಯಾವುದೇ ಕಾರಣಕ್ಕೂ ನಾಮಪತ್ರ ವಾಪಾಸ್ಸು ತೆಗೆದುಕೊಳ್ಳುವುದಿಲ್ಲ. ಎಐಸಿಸಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಈಗಾಗಲೇ ನಿರ್ಧಾರ ಮಾಡಿ ದ್ದೇನೆ ಎಂದು ಅಮೃತ್ ಶೆಣೈ ಸ್ಪಷ್ಟ ಪಡಿಸಿದರು.
ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಸಹಕಾರ ಕೊಡಬೇಕೆಂಬುದು ಕಾಂಗ್ರೆಸ್ ಪಕ್ಷದ ನಿರ್ಣಯವನ್ನು ಒಪ್ಪದಿರುವುದರಿಂದ ನನ್ನದು ಪಕ್ಷ ವಿರೋಧಿ ಚಟುವಟಿಕೆ ಆಗುತ್ತದೆ. ನಾನು ಮಾಡುತ್ತಿರುವುದು ತಾಂತ್ರಿಕವಾಗಿ ತಪ್ಪಾಗಿದ್ದರೂ ಇಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಇಲ್ಲದಿರುವುದರಿಂದ ನಾನು ಮಾಡುತ್ತಿರುವುದು ನೈತಿಕವಾಗಿ ಸರಿಯಾಗಿದೆ ಎಂದರು.
ಪ್ರಮೋದ್ ಮಧ್ವರಾಜ್ ಉಡುಪಿ ಚಿಕ್ಕಮಗಳೂರು ಸ್ಥಾನವನ್ನು ಕಾಂಗ್ರೆಸ್ಗೆ ವಾಪಾಸ್ಸು ತರಿಸುವ ಪ್ರಯತ್ನ ಮಾಡುವುದು ಬಿಟ್ಟು ಜೆಡಿಎಸ್ ಪಕ್ಷಕ್ಕೆ ಸೇರಿ ಚುನಾವಣೆ ಸ್ಪರ್ಧಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಾನು ಯಾವುದೇ ಆಮಿಷಕ್ಕೆ ಬಲಿ ಯಾಗುವ ವ್ಯಕ್ತಿ ಅಲ್ಲ. ನಾಮಪತ್ರ ಹಾಕುವ ಮೊದಲು ಪ್ರಮೋದ್ ನನ್ನನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾನಸಿಕ ತಜ್ಞ ಡಾ.ಪಿ.ವಿ.ಭಂಡಾರಿ, ಸಾಮಾಜಿಕ ಕಾರ್ಯಕರ್ತರಾದ ಜಯಶ್ರೀ ಭಟ್, ಯಜ್ಞೇಶ್ ಆಚಾರ್ಯ ಉಪಸ್ಥಿತರಿದ್ದರು.
ಸಾರ್ವಜನಿಕರಿಂದ ದೇಣಿಗೆ ಸಂಗ್ರಹ
ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಆ ಹಿನ್ನೆಲೆಯಲ್ಲಿ ಮಾ. 28ರಂದು ಉಡುಪಿ ನಗರ ಮತ್ತು ಮಣಿಪಾಲದಲ್ಲಿ ಪಾದಯಾತ್ರೆ ನಡೆಸಿ ದೇಣಿಗೆ ಸಂಗ್ರಹಿಸಲಾಗುವುದು. ಜನರು ದೇಣಿಗೆ ನೀಡಿದಷ್ಟು ಮಾತ್ರ ಚುನಾವಣೆಯಲ್ಲಿ ಖರ್ಚು ಮಾಡುತ್ತೇನೆ. ಮುಂದೆ ಚಿಕ್ಕಮಗಳೂರಿನಲ್ಲೂ ದೇಣಿಗೆ ಸಂಗ್ರಹಿಸಲು ಉದ್ದೇಶಿಸಲಾಗಿದೆ ಎಂದು ಅಮೃತ್ ಶೆಣೈ ತಿಳಿಸಿದರು.