ಕಪ್ಪು ಉಡುಪಿನಲ್ಲಿ ಮಹಿಳೆಯರು: ಶೇ. 33 ರಾಜಕೀಯ ಮೀಸಲಾತಿಗಾಗಿ ವಿನೂತನ ಪ್ರತಿಭಟನೆ
ಮಂಗಳೂರು, ಮಾ.27: ರಾಜಕೀಯದಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿಯನ್ನು ಒದಗಿಸಬೇಕು ಎಂದು ಆಗ್ರಹಿಸಿ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ವತಿಯಿಂದ ಇಂದು ಮಹಿಳೆಯರು ಕಪ್ಪು ಉಡುಪಿನಲ್ಲಿ ವಿನೂತನ ರೀತಿಯ ಪ್ರತಿಭಟನೆ ನಡೆಸಿದರು.
ನಗರದ ವೆನ್ಲಾಕ್ ಆಸ್ಪತ್ರೆ ಎದುರು ಫುಟ್ಪಾತ್ನಲ್ಲಿ ಮಹಿಳೆಯರಿಗೆ ಮೀಸಲಾತಿಗೆ ಒತ್ತಾಯಿಸಿ ಭಿತ್ತಿಚಿತ್ರಗಳನ್ನು ಹಿಡಿದು ಕಪ್ಪು ಉಡುಪಿನಲ್ಲಿ ಮಹಿಳೆಯರು ತಮ್ಮ ಬೇಡಿಕೆಗಾಗಿ ಆಗ್ರಹಿಸಿದರು.
ಪ್ರತಿಭಟನೆಗೆ ಮಹಿಳಾ ಸಂಘಗಳ ಒಕ್ಕೂಟದ ಅಧ್ಯಕ್ಷೆ ಚಂಚಲಾಕ್ಷಿ ಚಾಲನೆ ನೀಡಿ, ಮಹಿಳೆಯರಿಗೆ ಹೆಚ್ಚಿನ ಗೌರವ ಒದಗಿಸುವುದು, ಸಮಾನತೆಗೆ ಅವಕಾಶ, ನಿರ್ಣಾಯ ನಿರ್ಧಾರ ಪ್ರಕಟಿಸಲು ಅವಕಾಶ, ಹೆಣ್ಣಿನ ಮೇಲೆ ಆಉತ್ತಿರುವ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಲು ರಾಜಕೀಯದಲ್ಲಿ ಮಹಿಳೆಯರಿಗೆ ಶೇ. 33 ಪ್ರಾತಿನಿಧ್ಯ ಅತ್ಯಗತ್ಯ ಎಂದರು.
ಶೇ. 33ರ ಮೀಸಲಾತಿ ಪ್ರಕಾರ ಲೋಕಸಭೆಯ 544 ಸ್ಥಾನಗಳಲ್ಲಿ 188 ಮಹಿಳೆಯರಿಗೆ ಮೀಸಲಿಡಬೇಕು. 28 ರಾಜ್ಯಗಳ 4109 ವಿಧಾನಸಭಾ ಪ್ರತಿನಿಧಿಗಳಲ್ಲಿ 1370 ಮಹಿಳೆಯರಿರಬೇಕು. ಆದರೆ 2014ರ ಚುನಾವಣೆಯಲ್ಲಿ ಲೋಕಸಭೆಯಲ್ಲಿ 544 ಸಂಸದರಲ್ಲಿ ಮಹಿಳೆಯರ ಸಂಖ್ಯೆ 62 ಮಾತ್ರ. ಇದು ಒಟ್ಟು ಸಂಖ್ಯೆಯ ಶೇ. 12.15. ರಾಜ್ಯ ವಿಧಾನಸಭೆಗಳಲ್ಲೂ ಈ ಸಂಖ್ಯೆ ಕಡಿಮೆ. ಹಾಗಾಗಿ ಮಹಿಳಾ ಮೀಸಲಾತಿಯನ್ನು ಘೋಷಿಸುವುದು ಅಗತ್ಯ ಎಂದು ಅವರು ಹೇಳಿದರು.
ಪ್ರತಿಭಟನೆಯಲ್ಲಿ ವಿವಿಧ ಮಹಿಳಾ ಸಂಘಟನೆಗಳ ನಾಯಕಿಯರಾದ ಮರ್ಲಿನ್ ಮಾರ್ಟಿಸ್, ಆಶಾಲತಾ ಸುವರ್ಣ, ಚಂದ್ರಕಲಾ ನಂದಾವರ, ಬಿ.ಎಂ. ರೋಹಿಣಿ, ಸಿಸ್ಟರ್ ಅನ್ನ ಮರಿಯಾ, ಮಂಜುಳಾ ಸುನಿಲ್, ಸಾಜಿದಾ, ಜೊಹರಾ, ತುಕರಾಮ ಎಕ್ಕಾರು ಮೊದಲಾದವರು ಭಾಗವಹಿಸಿದ್ದರು.
ಹಿತಾ ರಿಸೋರ್ಸ್ ಸೆಟಂರ್ನ ನಿರ್ದೇಶಕರಾದ ವಾಣಿ ಪೆರಿಯೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುಲಾಬಿ ಬಿಳಿಮಲೆ ಕಾರ್ಯಕ್ರಮ ನಿರ್ವಹಿಸಿದರು.