ಪರ್ಯಾಯ ಪಲಿಮಾರುಶ್ರೀಗಳಿಂದ ಶಿಷ್ಯ ಸ್ವೀಕಾರಕ್ಕೆ ನಿರ್ಧಾರ
ಮೇ12ಕ್ಕೆ ಶೈಲೇಶ್ ಉಪಾಧ್ಯಾಯಗೆ ಸನ್ಯಾಸತ್ವ ದೀಕ್ಷೆ
ಉಡುಪಿ, ಮಾ. 27: ಉಡುಪಿಯ ಅಷ್ಟಮಠಗಳಲ್ಲಿ ಒಂದಾಗ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು ತನ್ನ ಉತ್ತರಾಧಿಕಾರಿ ಗಾಗಿ ಶಿಷ್ಯತ್ವ ಸ್ವೀಕಾರಕ್ಕೆ ನಿರ್ಧರಿಸಿದ್ದು, ಇದಕ್ಕಾಗಿ ಮಲ್ಪೆ ಸಮೀಪದ ಕೊಡವೂರು ಕಂಬಳಕಟ್ಟೆಯ ಸುರೇಂದ್ರ ಉಪಾಧ್ಯಾಯ ಹಾಗೂ ಲಕ್ಷ್ಮೀ ಸುರೇಂದ್ರ ಉಪಾಧ್ಯಾಯ ದಂಪತಿಯ ಹಿರಿಯ ಪುತ್ರ ಶೈಲೇಶ್ ಉಪಾಧ್ಯಾಯ ಎಂಬವರನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿದ್ದಾರೆ.
ಶ್ರೀಕೃಷ್ಣ ಮಠದಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯವನ್ನು ಪ್ರಕಟಿಸಿದರು. 20ರ ಹರೆಯದ ಶೈಲೇಶ್, ಪಲಿಮಾರಿನ ಯೋಗ ದೀಪಿಕಾ ಗುರುಕುಲದಲ್ಲಿ ವೇದ, ವೇದಾಂತ ಅಧ್ಯಯನದ ಮೂರು ವರ್ಷ ಗಳನ್ನು ಪೂರೈಸಿದ್ದು, ಇನ್ನು ಮುಂದಿನ ಸಂಪೂರ್ಣ ಅಧ್ಯಯನವನ್ನು ತಮ್ಮ ಬಳಿ ಮುಂದುವರಿಸಲಿದ್ದಾರೆ ಎಂದು ಪರ್ಯಾಯಶ್ರೀಗಳು ತಿಳಿಸಿದರು.
ಶಿಷ್ಯ ಸ್ವೀಕಾರ ಸಮಾರಂಭ ಮುಂದಿನ ಮೇ 9ರಿಂದ 12ರವರೆಗೆ ನಡೆಯಲಿದ್ದು, ಮೇ9ರಿಂದ 11ರವರೆಗೆ ಸನ್ಯಾಸತ್ವದ ಪೂರ್ವಭಾವಿ ಕಾರ್ಯಕ್ರಮಗಳು, ಹೋಮಹವನ ಹಾಗೂ ಇತರ ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆಯಲಿದ್ದು, ಮೇ 12ರ ಬೆಳಗ್ಗೆ 11:45ರಿಂದ 12 ರ ನಡುವೆ ಪಲಿಮಾರು ಮಠದ ಪೀಠಕ್ಕೆ ಉತ್ತರಾಧಿಕಾರಿಯಾಗಿ ಪಟ್ಟಾಭಿಷೇಕ ನಡೆಯಲಿದೆ ಎಂದು ವಿವರಿಸಿದರು.
ತಮ್ಮ ಗುರುಗಳಾದ ಶ್ರೀವಿದ್ಯಾಮಾನ್ಯತೀರ್ಥರು ನೀಡಿದ ಎರಡು ಭಾಗ್ಯ ವೆಂದರೆ, ಒಂದು ಸನ್ಯಾಸತ್ವ, ಇನ್ನೊಂದು ಶ್ರೀಕೃಷ್ಣ , ಶ್ರೀರಾಮ ದೇವರ ಪೂಜೆಯೊಂದಿಗೆ ಪಾಠಪ್ರವಚನ. ಇದು ನಿರಂತರವಾಗಿ ಬೆಳೆಯಬೇಕು ಹಾಗೂ ಜ್ಞಾನಾರ್ಜನೆಯಾಗಬೇಕು. ಸನ್ಯಾಸತ್ವ ಎಂದರೆ ಕೇವಲ ಕಷಾಯ ವಸ್ತ್ರ ಬದಲಾವಣೆಯಲ್ಲ, ಮಾನಸಿಕ ಪಕ್ವತೆಯೊಂದಿಗೆ ಪೂರ್ಣ ವಿರಕ್ತಿ ಭಾವ. ಇದು ಇದ್ದಲ್ಲಿ ಮಾತ್ರ ಸನ್ಯಾಸಕ್ಕೆ ಅರ್ಥವಿದೆ.ಇಂತಹ ಸನ್ಯಾಸದಿಂದಲೇ ಭಗವಂತನ್ನು ಒಲಿಸಿಕೊಳ್ಳಲು ಸಾಧ್ಯ ಎಂದರು.
ಈ ನಿಟ್ಟಿನಲ್ಲಿ ಪಲಿಮಾರಿನ ನಮ್ಮ ಯೋಗದೀಪಿಕಾ ವಿದ್ಯಾಪೀಠದಲ್ಲಿ ಅಧ್ಯಯನ ಮಾಡುತ್ತಿರುವ ವಟು ದೊರಕಿದ್ದಾನೆ. ಮೊದಲಿನಿಂದಲೂ ಆಧ್ಯಾತ್ಮಿಕ ಒಲವಿನೊಂದಿಗೆ, ನಿಷ್ಠೆ ಶುದ್ಧ ಸದಾಚಾರದಿಂದ ಕೂಡಿದ ಹಾಗೂ ವಿಶೇಷವಾಗಿ ಸನ್ಯಾಸದ ಬಗ್ಗೆ ಆಸಕ್ತಿಯಿದ್ದ ಶೈಲೇಶ ಉಪಾಧ್ಯಾಯ ಎಂಬ ವಿದ್ಯಾರ್ಥಿಯನ್ನು ಗುರುತಿಸಿ ಅವನ ತಂದೆ ತಾಯಿಗಳನ್ನು ಸಂಪರ್ಕಿಸಿ, ಸಿದ್ಧ ಜ್ಯೋತಿಷಿಗಳ ಬಳಿ ವಟುವಿನ ಜಾತಕದ ಚಿಂತನೆಯನ್ನು ನಡೆಸಿ ಅವರ ಕುಟುಂಬದ ಸದಸ್ಯರ ಸಂಪೂರ್ಣ ಸಮ್ಮತಿಯೊಂದಿಗೆ ಶೈಲೇಶ ಉಪಾಧ್ಯಾಯ ಎಂಬ ವಟುವನ್ನು ನಮ್ಮ ಉತ್ತರಾಧಿಕಾರಿಯನ್ನಾಗಿ ಸ್ವೀಕರಿಸಲು ನಿರ್ಧರಿಸಿದ್ದೇವೆ ಎಂದು ಪಲಿಮಾರುಶ್ರೀ ನುಡಿದರು.
ಯಾರಿಗೇ ಆಗಲಿ ಸನ್ಯಾಸತ್ವವನ್ನು ಬಲವಂತವಾಗಿ ಕೊಡಲಾಗದು. ಇದಕ್ಕೆ ಆತನಲ್ಲಿ ಸಹಜವಾದ ಸನ್ಯಾಸತ್ವದ ಆಸಕ್ತಿಯೂ ಇರಬೇಕು. ಹೀಗಾಗಿ ವಟು ಹಾಗೂ ಆತನ ಹೆತ್ತವರರು ಮಂಗಳವಾರ ರಾತ್ರಿ ಬಂದು ತಮ್ಮ ಕುಟುಂಬದ ಕುಡಿಯ ಸನ್ಯಾಸಾಶ್ರಮ ಸ್ವೀಕಾರದ ನಿರ್ಧಾರಕ್ಕೆ ತಮ್ಮ ಒಪ್ಪಿಗೆಯನ್ನೂ ಸೂಚಿಸಿದ ಬಳಿಕವೇ ಉತ್ತರಾಧಿಕಾರಿಯ ನೇಮಕದ ನಿರ್ಧಾರವನ್ನು ಪ್ರಕಟಿಸಲಾಗಿದೆ ಎಂದರು.
ಪಲಿಮಾರು ಮಠದ 32ನೇ ಪೀಠಾಧಿಪತಿ
63ರ ಹರೆಯದ ಶ್ರೀವಿದ್ಯಾಧೀಶತೀರ್ಥರು, 2018ರ ಜ.18 ರಂದು ಶ್ರೀಕೃಷ್ಣನ ಪೂಜೆಯ ಅಧಿಕಾರದ ಪರ್ಯಾಯ ಪೀಠವನ್ನು ಎರಡನೇ ಬಾರಿಗೆ ಏರಿದ್ದು, 2020ರ ಜ.17ರವರೆಗೆ ಇದರಲ್ಲಿ ಮುಂದುವರಿಯಲಿದ್ದಾರೆ. ಕಟೀಲು ಸಮೀಪ ಶಿಬರೂರಿನಲ್ಲಿ 1956ರಲ್ಲಿ ಜನಿಸಿದ ಪಲಿಮಾರುಶ್ರೀಗಳು 1974ರಲ್ಲಿ ಶ್ರೀವಿದ್ಯಾಮಾನ್ಯತೀರ್ಥರ ಉತ್ತರಾಧಿಕಾರಿಯಾಗಿ ಸನ್ಯಾಸತ್ವ ಸ್ವೀಕರಿಸಿದ್ದರು.
ಶ್ರೀಮಧ್ವರಿಂದ ಪ್ರಾರಂಭಗೊಂಡ ಪಲಿಮಾರು ಮಠಕ್ಕೆ ಶ್ರೀಹೃಷಿಕೇಶತೀರ್ಥರು ಪ್ರಥಮ ಪೀಠಾಧಿಪತಿಗಳು. ಈ ಪರಂಪರೆಯಲ್ಲಿ ಶ್ರೀವಿದ್ಯಾಮಾನ್ಯರು 32ನೇ ಪೀಠಾಧಿಪತಿಗಳು. ಕೆಲ ಸಮಯದಿಂದ ತನ್ನ ಉತ್ತರಾಧಿಕಾರಿ ಸ್ಥಾನಕ್ಕೆ ಸೂಕ್ತ ವ್ಯಕ್ತಿಯ ಹುಡುಕಾಟದಲ್ಲಿದ್ದ ಶ್ರೀಗಳಿಗೆ, ಪಲಿಮಾರಿನ ತಮ್ಮದೇ ಮಠಕ್ಕೆ ಸೇರಿದ ಶ್ರೀಯೋಗ ದೀಪಿಕಾ ವಿದ್ಯಾಪೀಠದಲ್ಲಿದ್ದ ವಿದ್ಯಾರ್ಥಿಯೊಬ್ಬನಲ್ಲಿ ಅಂಥ ಎಲ್ಲಾ ಗುಣಲಕ್ಷಣಗಳು ಕಂಡುಬಂದಿರುವುದು ಸಂತಸ ತಂದಿದೆ ಎಂದರು.
ಶ್ರೀಕೃಷ್ಣನ ಪೂಜೆ ನನ್ನ ಆಸೆ: ಶೈಲೇಶ ಉಪಾಧ್ಯಾಯ
‘ಶ್ರೀಕೃಷ್ಣನ ಪೂಜೆ ಮಾಡಬೇಕೆನ್ನುವುದು ನನ್ನ ಆಸೆ ಹಾಗೂ ದೇವರನ್ನು ಒಲಿಸಿಕೊಳ್ಳಬೇಕು ಎನ್ನುವುದು ನನ್ನ ಬಯಕೆ.’ ಹೀಗೆಂದವರು ಪಲಿಮಾರು ಮಠಕ್ಕೆ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವ ಉಡುಪಿ ಸಮೀಪದ ಕೊಡವೂರು ಕಂಬಳಕಟ್ಟದ ಸುರೇಂದ್ರ ಉಪಾಧ್ಯಾಯ ಹಾಗೂ ಲಕ್ಷ್ಮಿ ಉಪಾಧ್ಯಾಯ ದಂಪತಿಯ ಹಿರಿಯ ಪುತ್ರ 20ರ ಹರೆಯದ ಶೈಲೇಶ್.
ವಿದ್ಯೋದಯ ಹಾಗೂ ಇಲ್ಲಿನ ಸಂಸ್ಕೃತ ಪ್ರೌಢ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಮುಗಿಸಿದ ಬಳಿಕ ತನಗೆ ಆಧ್ಯಾತ್ಮದಲ್ಲಿ ಹೆಚ್ಚಿನ ಆಸಕ್ತಿ ಮೂಡಿತು. ಹೀಗಾಗಿ ತಾನು ಪಲಿಮಾರಿನ ಯೋಗದೀಪಿಕಾ ವಿದ್ಯಾಪೀಠದಲ್ಲಿ ವೇದ, ವೇದಾಂತ ಅಧ್ಯಯನಕ್ಕೆ ಮುಂದಾದೆ. ಇತ್ತೀಚೆಗೆ ಪಲಿಮಾರು ಮಠಕ್ಕೆ ಉತ್ತರಾಧಿಕಾರಿಯ ಹುಡುಕಾಟದ ವಿಷಯ ತಿಳಿದು ಸ್ವಾಮೀಜಿಯವರಲ್ಲಿ ನನ್ನ ಬಯಕೆಯನ್ನು ತೋಡಿಕೊಂಡಿದ್ದೆ ಎಂದು ಶೈಲೇಶ್ ವಿವರಿಸಿದರು.
ಸ್ವಾಮೀಜಿ ನನ್ನ ಜಾತ, ಜನ್ಮಕುಂಡಲಿಗಳನ್ನು ಮೂವರು ಸುಪ್ರಸಿದ್ಧ ಜ್ಯೋತಿಷಿಗಳಲ್ಲಿ ತೋರಿಸಿ ಅವರಿಂದ ಒಪ್ಪಿಗೆ ಪಡೆದ ಬಳಿಕ, ಹೆತ್ತವರಿಗೂ ತಿಳಿಸಿದರು. ಮೊದಲು ಅವರು ಒಪ್ಪದಿದ್ದರೂ, ನಾನು ನನ್ನ ನಿರ್ಧಾರದಲ್ಲಿ ಅಚಲನಾಗಿದ್ದ ಕಾರಣ ಕೊನೆಗೆ ಒಪ್ಪಿಕೊಂಡರು. ನಾನು ಸನ್ಯಾಸತ್ವದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡಿದ್ದೇನೆ ಎಂದರು.
ಸುರೇಂದ್ರ ಉಪಾಧ್ಯಾಯರು ಪಡುಬಿದ್ರಿ, ಎರ್ಮಾಳ್, ಪಾವಂಜೆ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ತಂತ್ರಿಗಳು. ಇವರಿಗೆ ಇಬ್ಬರು ಪುತ್ರರಿದ್ದು, ಶೈಲೇಶ್ ಹಿರಿಯ ಮಗ. ಕಿರಿಯ ಮಗ ವಿಶ್ವೇಶ ಉಪಾಧ್ಯಾಯ ಮುನಿಯಾಲು ಆಯುರ್ವೇದ ಕಾಲೇಜಿನಲ್ಲಿ ಬಿಎಎಂಎಸ್ ಅಧ್ಯಯನ ನಿರತರಾಗಿದ್ದಾರೆ. ಈಗ ಯೋಗ ದೀಪಿಕಾದಲ್ಲಿ ಅಧ್ಯಯನ ನಿರತ ಶೈಲೇಶ್ ಸನ್ಯಾಸ ಸ್ವೀಕಾರದ ಬಳಿಕ ಪಲಿಮಾರು ಶ್ರೀಗಳಲ್ಲಿ ಅಧ್ಯಯನ ಮುಂದುವರಿಸಲಿದ್ದಾರೆ.
ನಾಲ್ಕು ಮಠಗಳಿಗೆ ಉತ್ತರಾಧಿಕಾರಿಗಳಿಲ್ಲ; ಶಿರೂರು ಮಠಕ್ಕೆ ಯತಿಗಳೇ ಇಲ್ಲ
ಶ್ರೀಮಧ್ವಾಚಾರ್ಯರು ಎಂಟು ಶತಮಾನಗಳ ಹಿಂದೆ ಸ್ಥಾಪಿಸಿದ ಶ್ರೀಕೃಷ್ಣ ನ ಪೂಜೆಗೆಂದು ಎಂಟು ಶಿಷ್ಯರನ್ನು ನೇಮಿಸಿ ಅವರಿಗೆ ಎಂಟು ಪ್ರತ್ಯೇಕ ಮಠ ಗಳನ್ನು ಸ್ಥಾಪಿಸಿದ್ದರು. ಅಂದಿನಿಂದ ಪ್ರಾರಂಭವಾದ ಈ ಪರಂಪರೆ ಈಗಲೂ ಮುಂದುವರಿದಿದೆ. ಸದ್ಯಕ್ಕೆ ನಾಲ್ಕು ಮಠಗಳಿಗೆ ಉತ್ತರಾಧಿಕಾರಿಗಳಿಲ್ಲ. ಅಲ್ಲದೇ ಕಳೆದ ವರ್ಷ ಶ್ರೀಲಕ್ಷ್ಮೀವರ ತೀರ್ಥರ ಅಕಾಲಿನ ನಿಧನದ ಬಲಿಕ ಶೀರೂರು ಮಠಕ್ಕೆ ಇನ್ನೂ ಯತಿಗಳೇ ನೇಮಕಗೊಂಡಿಲ್ಲ.
ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥರು, ಸೋದೆ ಮಠದ ಶ್ರೀವಿಶ್ವವಲ್ಲಭತೀರ್ಥರು, ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು ಹಾಗೂ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥರು ಇನ್ನೂ ತಮ್ಮ ಉತ್ತರಾಧಿಕಾರಿಗಳನ್ನು ಆಯ್ಕೆ ಮಾಡಿಲ್ಲ.
ಕೇವಲ ಪೇಜಾವರ ಮಠದ ಶ್ರೀವಿಶ್ವೇಶತೀರ್ಥರು, ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥರನ್ನು ಹಾಗೂ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥರು, ಶ್ರೀಈಶಪ್ರಿಯತೀರ್ಥರನ್ನು ತಮ್ಮ ಶಿಷ್ಯರಾಗಿ ಸ್ವೀಕರಿಸಿದ್ದಾರೆ.