ಪರಿಶ್ರಮದಿಂದ ಕಲೆಯಲ್ಲಿ ಸಾಧನೆ ಮಾಡಲು ಸಾಧ್ಯ: ರಾಜಗೋಪಾಲ್
ಉಡುಪಿ, ಮಾ. 27: ನಟನ ಕಲೆ ಎಂಬುದು ನಿರಂತರ ಕಲಿಕೆಯ ಪ್ರಕ್ರಿಯೆ ಯಾಗಿದೆ. ಪರಿಶ್ರಮ ಪಟ್ಟರೆ ಮಾತ್ರ ಕಲೆಯಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಹಿರಿಯ ರಂಗ ನಟ ಎನ್.ರಾಜಗೋಪಾಲ್ ಬಲ್ಲಾಳ್ ಹೇಳಿದ್ದಾರೆ.
ಉಡುಪಿ ರಂಗಭೂಮಿ ವತಿಯಿಂದ ಜೇಸಿಐ ಕಲ್ಯಾಣಪುರ ಸಹಭಾಗಿತ್ವದಲ್ಲಿ ಉಡುಪಿ ಎಂಜಿಎಂ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮಂಗಳವಾರ ಆಯೋಜಿಸಲಾದ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತಿದ್ದರು.
ಮುಖ್ಯ ಅತಿಥಿಗಳಾಗಿ ರಂಗಭೂಮಿ ಗೌರವಾಧ್ಯಕ್ಷ ಡಾ.ಎಚ್.ಶಾಂತಾ ರಾಮ್, ಲಾವಣ್ಯ ಬೈಂದೂರು ವ್ಯವಸ್ಥಾಪಕ ಗಣೇಶ್ ಕಾರಂತ್, ಜೇಸಿಐ ಕಲ್ಯಾಣಪುರ ಅಧ್ಯಕ್ಷ ಆಶಾ ಅಲೆನ್ ವಾಜ್, ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಪ್ರಾಂಶುಪಾಲ ಡಾ.ಸುಕನ್ಯಾ ಮೇರಿ, ಎಂಜಿಎಂ ಕಾಲೇಜಿನ ಪ್ರಾಂಶು ಪಾಲ ಡಾ.ಎಂ.ಜಿ.ವಿಜಯ ಉಪಸ್ಥಿತರಿದ್ದರು
ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು. ರಂಗ ನಟ ವಿವೇಕಾನಂದ ರಂಗ ಸಂದೇಶ ವಾಚಿಸಿದರು. ಜೊತೆ ಕಾರ್ಯದರ್ಶಿ ರವಿರಾಜ್ ಎಚ್.ಪಿ. ಸನ್ಮಾನಿತರ ಪರಿಚಯ ಮಾಡಿದರು. ಉಪಾಧ್ಯಕ್ಷ ನಂದ ಕುಮಾರ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ಕಾರ್ಯ ಕ್ರಮ ನಿರೂಪಿಸಿದರು. ಬಳಿಕ ಸರ್ವಂ ಬೆಂಗಳೂರು ತಂಡದಿಂದ ಹೇ ಸಿರಿ ನಾಟಕ ಪ್ರದರ್ಶನಗೊಂಡಿತು.