ಬಜೆ ನದಿಯಲ್ಲಿ ಮುಳುಗಿ ಬಾಲಕಿ ಸಹಿತ ಇಬ್ಬರು ಮೃತ್ಯು
ಹಿರಿಯಡ್ಕ, ಮಾ.27: ಬಜೆ ಅಣೆಕಟ್ಟೆಯ ಸ್ವರ್ಣ ನದಿ ಹಿನ್ನೀರಿನಲ್ಲಿ ಬಟ್ಟೆ ಒಗೆಯುತಿದ್ದ ಬಾಲಕಿ ಸೇರಿದಂತೆ ಇಬ್ಬರು ಅಕಸ್ಮಿಕವಾಗಿ ನೀರಿಗೆ ಬಿದ್ದು ಮೃತ ಪಟ್ಟ ಘಟನೆ ಇಂದು ಸಂಜೆ ನಡೆದಿದೆ.
ಮೃತರನ್ನು ಕುಕ್ಕೆಹಳ್ಳಿಯ ಕೃಷ್ಣ ಎಂಬವರ ಪತ್ನಿ ಪುಷ್ಪಾ (47) ಹಾಗೂ ನೆರೆಮನೆಯ ಮಂಜುನಾಥ್ ಮತ್ತು ಸುಜಾತ ದಂಪತಿ ಪುತ್ರಿ ಅಶ್ವಿನಿ (13) ಎಂದು ಗುರುತಿಸಲಾಗಿದೆ.
ಪುಷ್ಪಾ ನೆರೆಮನೆಯ ಅಶ್ವಿನಿಯನ್ನು ಕರೆದುಕೊಂಡು ಬಜೆ ಅಣೆಕಟ್ಟಿನ ಹಿನ್ನೀರಿನಲ್ಲಿ ಬಟ್ಟೆ ಒಗೆಯಲು ಹೋಗಿದ್ದರು. ಅಲ್ಲಿ ಬಟ್ಟೆ ಒಗೆಯುತ್ತಿದ್ದ ವೇಳೆ ನೀರಿನಲ್ಲಿ ಆಡುತ್ತಿದ್ದ ಅಶ್ವಿನಿ ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿದರೆನ್ನಲಾಗಿದೆ. ಆಕೆಯನ್ನು ರಕ್ಷಿಸಲು ನೀರಿಗೆ ಇಳಿದ ಪುಷ್ಪಾ ಕೂಡ ನೀರು ಪಾಲಾದರು. ಈ ಬಗ್ಗೆ ಮಾಹಿತಿ ತಿಳಿದು ನೀರಿಗೆ ಹಾರಿದ ಸ್ಥಳೀಯರು ಇಬ್ಬರನ್ನು ಮೇಲಕ್ಕೆತ್ತಿ ಮಣಿಪಾಲ ಆಸ್ಪತ್ರೆಗೆ ಸಾಗಿಸಿದರು.
ಆದರೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟರೆಂದು ತಿಳಿದು ಬಂದಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.