ದ.ಕ. ಕ್ಷೇತ್ರದಲ್ಲಿ 2,495 ವಿವಿಪ್ಯಾಟ್ ಬಳಕೆ: ಡಿಸಿ ಸಸಿಕಾಂತ್ ಸೆಂಥಿಲ್
ಮಂಗಳೂರು, ಮಾ. 27: ದ.ಕ. ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ 2,495 ವಿವಿಪ್ಯಾಟ್ಗಳನ್ನು ಬಳಸಲಾವುದು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಚುನಾವಣೆ ನಡೆಸಲು ಇವಿಎಂ/ ವಿವಿ ಪ್ಯಾಟ್ಗಳ ಪ್ರಥಮ ಹಂತದ ಪರಿಶೀಲನೆ ನಡೆಸಿ, 1,861 ಮತಗಟ್ಟೆಗಳಿಗೆ 2,236 ಸಿಯು, 2,236 ಬಿಯು ಮತ್ತು 2,495 ವಿವಿಪ್ಯಾಟ್ ಯಂತ್ರಗಳನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮಕ್ಷಮದಲ್ಲಿ ಮಿಶ್ರಣ ಮಾಡಿ, ಮಾ.21ರಂದು ಜಿಲ್ಲೆಯ ಸಹಾಯಕ ಚುನಾವಣಾಧಿಕಾರಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಹೇಳಿದರು.
ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಜ.16ರಂದು ಅಂತಿಮವಾಗಿ ಪ್ರಕಟಿಸಿದ ಮತದಾರರ ಪಟ್ಟಿಯಲ್ಲಿ ಒಟ್ಟು 16,97417 ಮಂದಿ ಮತದಾರರಿದ್ದರೆ, ಚುನಾವಣೆ ಹಿನ್ನೆಲೆಯಲ್ಲಿ ನಡೆದ ನಾಮಪತ್ರ ಸೇರ್ಪಡೆ ವೇಳೆ ಮತದಾರರ ಸಂಖ್ಯೆ 26,605 ಹೆಚ್ಚಳವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಸ್. ಹೇಳಿದರು.
ಮಾ.16ರ ವರೆಗೆ ಸ್ವೀಕೃತ ಹಕ್ಕು ಮತ್ತು ಆಕ್ಷೇಪಗಳ ಪೈಕಿ ಹೊಸ ಮತದಾರರ ಸೇರ್ಪಡೆ ಬಳಿಕ ಮತದಾರರ ಸಂಖ್ಯೆ 17,24,022ಕ್ಕೆ ಹೆಚ್ಚಿದೆ. ಹೊಸ ಮತದಾರರಿಗೆ ಶೀಘ್ರ ವೋಟರ್ ಐಡಿ ಮುದ್ರಿಸಿ ವಿತರಿಸಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 1,861 ಮತಗಟ್ಟೆಗಳಿದ್ದು, ಅದರಲ್ಲಿ 640 ಕ್ಲಿಷ್ಟಕರ ಮತ್ತು 1,221 ಸಾಮಾನ್ಯ ಇವೆ. ಕ್ಲಿಷ್ಟಕರ ಮತಗಟ್ಟೆಗಳಿಗೆ ಮೈಕ್ರೊ ವೀಕ್ಷಕರು ಮತ್ತು ವೀಡಿಯೊ ಕ್ಯಾಮೆರಾಗಳನ್ನು ನಿಯೋಜಿಸಿ, ಆಯೋಗದ ನಿರ್ದೇಶನದಂತೆ ಮುಕ್ತ ಹಾಗೂ ಶಾಂತಿಯುತ ಮತದಾನ ದೃಢಪಡಿಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ನೀತಿ ಸಂಹಿತೆ ಉಲ್ಲಂಘನೆ: ಚುನಾವಣಾ ಪ್ರಕ್ರಿಯೆ ಪ್ರಾರಂಭವಾದ ದಿನಾಂಕದಿಂದ ನಾಮಪತ್ರ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ವರೆಗೆ ಒಟ್ಟು 8.73 ಲಕ್ಷ ರೂ. ಮುಟ್ಟುಗೋಲು ಹಾಕಿ, ದಾಖಲೆ ಕೊಟ್ಟ ಹಿನ್ನೆಲೆಯಲ್ಲಿ ಮರಳಿಸಲಾಗಿದೆ. ಒಟ್ಟು 77.77 ಲಕ್ಷ ರೂ. ಮೊತ್ತದ 53,805 ಲೀ. ಮದ್ಯ, 73.31 ಲಕ್ಷ ರೂ. ಮೊತ್ತದ ಸ್ಕೂಟರ್-1, ಲಾರಿ-2, ಭಿತ್ತಿಪತ್ರ- 220, ಮಾರುತಿ ಕಾರು-2, ಟ್ರಕ್-1, ಟ್ಯಾಂಕರ್-1 ವಶಪಡಿಸಿಕೊಳ್ಳಲಾಗಿದೆ. 266 ಅಬಕಾರಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.
ಜಿಲ್ಲೆಯಲ್ಲಿ ನೀಡಲಾದ 11,631 ಆಯುಧ ಪರವಾನಿಗೆಗಳ ಪೈಕಿ 11,551 ಆಯುಧಗಳನ್ನು ಸಂಬಂಧಪಟ್ಟ ಆಯಾ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇಡಲಾಗಿದೆ. ಉಳಿದ ಆಯುಧಗಳನ್ನು ಕೆಲವರು ಕಾಡುಪ್ರಾಣಿಗಳಿಂದ ರಕ್ಷಣೆ ಹಾಗೂ ಇತರ ಕಾರಣಗಳಿಂದ ಹಿಂದಿರುಗಿಸಿಲ್ಲ. ಒಂಬತ್ತು ಆಯುಧಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ವೋಟರ್ಸ್ ಸ್ಲಿಪ್ ದಾಖಲೆ ಅಲ್ಲ: ಏ.18ರಂದು ನಡೆಯುವ ಚುನಾವಣೆಗೆ ಮತದಾರರಿಗೆ ನೀಡಿರುವ ಭಾವಚಿತ್ರ ಇರುವ ಗುರುತಿನ ಚೀಟಿ ಹಾಜರಿಪಡಿಸಿ, ಮತದಾನ ಮಾಡಬೇಕಿದೆ. ಇದನ್ನು ಕಳೆದುಕೊಂಡವರು ಆಯೋಗ ನಿಗದಿಪಡಿಸಿರುವ 11ರಲ್ಲಿ ಯಾವುದಾದರೂ ಒಂದು ದಾಖಲೆ ಹಾಜರುಪಡಿಸಿ ಮತದಾನ ಮಾಡಬಹುದು. ಚುನಾವಣೆಗೆ ಮುನ್ನ ವಿತರಿಸುವ ವೋಟರ್ಸ್ ಸ್ಲಿಪ್ ಮತದಾನ ಮಾಡಲು ಅಗತ್ಯ ದಾಖಲೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಸಹಾಯವಾಣಿ: ಚುನಾವಣೆ ಬಗ್ಗೆ ಮಾಹಿತಿ ಪಡೆಯಲು, ದೂರು ದಾಖಲಿಸಲು 1950 ಟೋಲ್ಫ್ರೀ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಅದರಲ್ಲಿ 2,062 ಕರೆಗಳನ್ನು ಸ್ವೀಕರಿಸಲಾಗಿದೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಸಿ-ವಿಜಿಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದು, ದೂರು ದಾಖಲಿಸಬಹುದು. ಒಟ್ಟು 23 ದೂರು ದಾಖಲಾಗಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ವೆಂಕಟಾಚಲಪತಿ, ಅಧಿಕಾರಿಗಳಾದ ಪ್ರಮೀಳಾ, ಪ್ರಸನ್ನ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
‘ನೋಟಾ ಹಾಕಬಹುದು’
ಮತದಾನ ವೇಳೆ ನೋಟಾ ಚಲಾವಣೆ ಮಾಡುವುದು ಸಂವಿಧಾನ ಬದ್ಧ ಹಕ್ಕು. ಅದನ್ನು ಚಲಾಯಿಸಬಹುದು. ಈ ಬಗ್ಗೆ ಚುನಾವಣಾ ಆಯೋಗದಿಂದ ಯಾವುದೇ ಹೊಸ ನಿರ್ದೇಶನ ಬಂದಿಲ್ಲ ಎಂದು ಪ್ರಶ್ನೆಗೆ ಉತ್ತರವಾಗಿ ಚುನಾವಣಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.