ಶ್ರೀನಿವಾಸ ಕಾಲೇಜಿನಲ್ಲಿ ಯುವ ಮತದಾರರ ಜಾಗೃತಿ ಕಾರ್ಯಕ್ರಮ
ಮಂಗಳೂರು, ಮಾ.28: ರಾಜಕೀಯಕ್ಕೂ ನಮಗೂ ಸಂಬಂಧವಿಲ್ಲ ಎಂದು ಯಾರೂ ಮತದಾನದ ಪ್ರಕ್ರಿಯೆಯಿಂದ ದೂರ ಉಳಿಯಬಾರದು. ಉತ್ತಮ ಸರಕಾರದ ನಿರ್ಮಾಣದಲ್ಲಿ ಪ್ರಜೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ತಪ್ಪದೆ ಮತ ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಕರೆ ನೀಡಿದರು.
ಶ್ರೀನಿವಾಸ ವಿಶ್ವವಿದ್ಯಾನಿಲಯ ಮಂಗಳೂರು, ದ.ಕ.ಜಿಲ್ಲಾಡಳಿತ, ದ.ಕ. ಜಿಲ್ಲಾ ಸ್ವೀಪ್ ಸಮಿತಿ, ಮಂಗಳೂರು ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಗುರುವರ ಪಾಂಡೇಶ್ವರದಲ್ಲಿರುವ ಶ್ರೀನಿವಾಸ ಕಾಲೇಜ್ನಲ್ಲಿ ನಡೆದ ಯುವ ಮತದಾರರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿಗೆ ಯುವ ಸಮೂಹದ ಮತದಾನ ಮುಖ್ಯವಾಗಿದೆ. ಹಾಗಾಗಿ ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡಬೇಕು ಮತ್ತು ಪ್ರಜಾಪ್ರಭುತ್ವದ ಹಬ್ಬವನ್ನು ಜತೆಗೂಡಿ ಆಚರಿಸಬೇಕು. 18 ವರ್ಷ ಮೇಲ್ಪಟ್ಟಿದ್ದು, ಮತದಾನಕ್ಕೆ ನೋಂದಣಿ ಮಾಡದೆ ಇದ್ದಲ್ಲಿ ತಕ್ಷಣ ನೋಂದಣಿ ಮಾಡಬೇಕು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಹಕ್ಕು ಚಲಾಯಿಸುವಲ್ಲಿ ಯಾರೂ ಹಿಂದೆ ಸರಿಯಬಾರದು. ಮತದಾನದ ಜಾಗೃತಿ ಎಲ್ಲೆಡೆ ಆಗಬೇಕು. ಚುನಾವಣಾ ಆಯೋಗವು ಇಂದು ಅತ್ಯಂತ ಶಿಸ್ತುಬದ್ಧವಾಗಿ ಚುನಾವಣೆಯನ್ನು ನಡೆಸುತ್ತಿದ್ದು, ಮತದಾನ ಜಾಗೃತಿಗೂ ಆದ್ಯತೆ ನೀಡುತ್ತಿದೆ ಎಂದು ಸಸಿಕಾಂತ್ ಸೆಂಥಿಲ್ ಹೇಳಿದರು.
ದ.ಕ.ಜಿಪಂ ಸಿಇಒ ಡಾ.ಸೆಲ್ವಮಣಿ ಮಾತನಾಡಿ, ಮತದಾನ ಮಾಡುವುದು ಎಲ್ಲರ ಹಕ್ಕಾಗಿದೆ. ಅದನ್ನು ಯಾವ ಕಾರಣಕ್ಕೂ ವ್ಯರ್ಥಗೊಳಿಸಬಾರದು. ಪ್ರಾಪ್ತರಾದ ಯುವಕರು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಹಾಗೂ ಈಗಾಗಲೇ ನೋಂದಣಿ ಮಾಡಿಕೊಂಡವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೆ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು ಎಂದರು.
ಚುನಾವಣೆಯ ಬಗ್ಗೆ ಯಾವುದೇ ಸಂಶಯಗಳಿದ್ದಲ್ಲಿ 1950 ಸಹಾಯವಾಣಿಗೆ ಕರೆ ಮಾಡಬಹುದು. ಸ್ಥಳೀಯ ಬೂತ್ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಎನ್ಎಸ್ವಿಪಿ ಹಾಗೂ ಚುನಾವಣಾ ವೆಬ್ಸೈಟ್ ಅಥವಾ ಚುನಾವಣಾ ಆ್ಯಪ್ ಮೂಲಕ ಹೆಚ್ಚಿನ ಮಾಹಿಗಳನ್ನು ಪಡೆದುಕೊಳ್ಳಬಹುದು ಎಂದು ಡಾ. ಸೆಲ್ವಮಣಿ ತಿಳಿಸಿದರು.
ಶೀನಿವಾಸ ವಿಶ್ವವಿದ್ಯಾನಿಲಯದ ಕುಲಪತಿ ಎ.ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು. ಶ್ರೀನಿವಾಸ್ ವಿವಿಯ ಸಹ ಕುಲಪತಿ ಶ್ರೀನಿವಾಸ್ ರಾವ್, ಸ್ಮಾರ್ಟ್ ಸಿಟಿ ಲಿಮಿಟೆಡ್ ಹಾಗೂ ಮನಪಾ ಪ್ರಭಾರ ಆಯುಕ್ತ ಬಿ.ಎಸ್. ನಾರಾಯಣಪ್ಪಉಪಸ್ಥಿತರಿದ್ದರು. ಶ್ರೀನಿವಾಸ ವಿವಿ ಉಪ ಕುಲಪತಿ ಪಿ.ಎಸ್.ಐತಾಳ್ ಸ್ವಾಗತಿಸಿದರು.
ವಿವಿ ಪ್ಯಾಟ್ ಪ್ರಾತ್ಯಕ್ಷಿಕೆ
ವಿದ್ಯಾರ್ಥಿಗಳಿಗಾಗಿ ಮತಗಟ್ಟೆ, ಮತದಾನ ಯಂತ್ರ ಹಾಗೂ ವಿವಿ ಪ್ಯಾಟ್ ಬಗ್ಗೆ ಪ್ರಾತ್ಯಕ್ಷಿಕೆಯು ನಡೆಯಿತು. ಚುನಾವಣಾ ಅಧಿಕಾರಿಗಳು ಮತದಾನ ಮಾಡುವ ಹಾಗೂ ವಿವಿ ಪ್ಯಾಟ್ ಉಪಯೋಗದ ಬಗ್ಗೆ ಮಾಹಿತಿ ನೀಡಿದರು.