ಉಡುಪಿ ಜಿಲ್ಲೆಯಲ್ಲಿ ಯಕ್ಷಗಾನ, ಬೀದಿನಾಟಕ ಮೂಲಕ ಮತದಾನ ಅರಿವು
ಉಡುಪಿ, ಮಾ.28: ‘ಹೇ ಇವತ್ತು ನಿಂಗೆ ಕೂಲಿ ಕೆಲಸಕ್ಕೆ ರಜೆ’ ಎಂದ ಧನಿಗಳ ಮಾತಿನಿಂದ ಕಳವಳಗೊಂಡ ಮನೆ ಕೆಲಸದಾಳು ಸಿದ್ದ, ‘ಬುದ್ದೀ.. ಇವತ್ತು ಕೂಲಿ ಇಲ್ಲ ಅಂದ್ರೆ ನಾನು ನನ್ನ ಕುಟುಂಬದ ಹೊಟ್ಟೆಗೆ ತಣ್ಣೀರು ಬಟ್ಟೆನೇ ಗತಿ’ ಎಂದ. ಇದಕ್ಕೆ ಉತ್ತರಿಸಿದ ಧನಿ, ‘ಏ..ಸಿದ್ದ, ಇವತ್ತು ಮತದಾನದ ದಿನ, ಕೂಲಿ ಕೆಲಸಕ್ಕೆ ಮಾತ್ರ ರಜೆ. ನೀನು ಓಟು ಹಾಕಿಬಾ, ಎಷ್ಟು ಹೊತ್ತಾದರೂ ಸರಿ ಬಾ... ಇಂದಿನ ಕೂಲಿ ಕೊಡುತ್ತೇನೆ. ಆದರೆ ಮತದಾನ ಮಾತ್ರ ತಪ್ಪಿಬೇಡ.’ ಎನ್ನುತ್ತಾನೆ.
ಇದು ಉಡುಪಿ ಜಿಲ್ಲೆಯಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿ ಹಮ್ಮಿಕೊಂಡಿರುವ ಬೀದಿ ನಾಟಕದ ಒಂದು ಪ್ರಸಂಗ. ಇದು ಉಡುಪಿ ಜಿಲ್ಲೆಯಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿ ಹಮ್ಮಿಕೊಂಡಿರುವ ಬೀದಿ ನಾಟಕದ ಒಂದು ಪ್ರಸಂಗ. ಜಿಲ್ಲೆಯಲ್ಲಿ ಈ ಹಿಂದೆ ನಡೆದ ಚುನಾವಣೆಗಳಲ್ಲಿ ಅತೀ ಕಡಿಮೆ ಮತದಾನ ನಡೆದ ಮತಗಟ್ಟೆಗಳನ್ನು ಗುರುತಿಸಿರುವ ಜಿಲ್ಲಾ ಸ್ವೀಪ್ ಸಮಿತಿ, ಈ ಪ್ರದೇಶ ಗಳಲ್ಲಿ ಯಕ್ಷಗಾನ ಮತ್ತು ಬೀದಿ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಈ ಬಾರಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಕ್ರಮ ಕೈಗೊಂಡಿದೆ.
ಕೂಲಿ ಕಾರ್ಮಿಕ ಮಾತ್ರವಲ್ಲದೇ, ಮತದಾನ ದಿನದಂದು ರಜೆ ಮಾಡಿ ಪ್ರವಾಸಕ್ಕೆ ಹೋಗುವ ನೌಕರರು, ರಜೆ ಎಂದು ದಿನವಿಡೀ ಕ್ರಿಕೆಟ್ ಆಟವಾಡುವ ಯುವಕರಿಗೆ, ಚುನಾವಣೆಯಲ್ಲಿ ರಾಜಕೀಯ ಅ್ಯರ್ಥಿಗಳು ನೀಡುವ ಹಣ, ಮದ್ಯದ ಆಮಿಷಕ್ಕೆ ಒಳಗಾಗಿ , ಮತದಾನ ಮಾಡುವ ಇಚ್ಛೆ ಇದ್ದರೂ ಕುಡಿತದ ಅಮಲಿನಲ್ಲಿ ಮತದಾನ ಮಾಡದೇ ಮತ ವಂಚಿತನಾಗುವ ಕುಡುಕನಿಗೆ ಅರಿವು ಮೂಡಿಸುವ ಪ್ರಸಂಗಗಳನ್ನು ಆಡಿ, ಎಲ್ಲಾ ವರ್ಗದ ಜನರನ್ನು ಯಕ್ಷಗಾನ ಮತ್ತು ಬೀದಿನಾಟಕಗಳ ಮೂಲಕ ತಲುಪಿ ಅವರಲ್ಲಿ ಅರಿವು ಮೂಡಿಸುವ ಪ್ರಯತ್ನ ವನ್ನು ನಡೆಸಲಾಗುತ್ತಿದೆ.
ಸುರತ್ಕಲ್ನ ಕರಾವಳಿ ಜಾನಪದ ಕಲಾವೇದಿಕೆಯ ಮೂಲಕ ಬೀದಿನಾಟಕ ಏರ್ಪಡಿಸಲಾಗುತ್ತಿದ್ದು, ಈ ತಂಡವು ಸಾರ್ವಜನಿಕವಾಗಿ ಅತೀ ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ಹಾಗೂ ಕಳೆದ ಬಾರಿ ಕಡಿಮೆ ಮತ ಪ್ರಮಾಣ ದಾಖಲಾದ ಪ್ರದೇಶದಲ್ಲಿ ಬೀದಿನಾಟಕವನ್ನು ಪ್ರದರ್ಶಿಸಲಿದೆ. ಬೀದಿನಾಟಕ ದಲ್ಲಿ ಮತದಾನ ಕುರಿತು ಜಾಗೃತಿ ಮಾತ್ರವಲ್ಲದೇ ಮತದಾರರ ಸಹಾಯವಾಣಿ ಯ ಬಗ್ಗೆ, ಜಿಲ್ಲಾಡಳಿತದಿಂದ ಮತದಾರರಿಗೆ ಕಲ್ಪಿಸಿರುವ ಸೌಲ್ಯಗಳ ಬಗ್ಗೆ ಸಹ ಮಾಹಿತಿ ನೀಡಲಾಗುತ್ತದೆ. ಕರಾವಳಿ ಜಾನಪದ ಕಲಾವೇದಿಕೆಯ ಗಿರೀಶ್ ನಾವಡ ಬೀದಿನಾಟಕ ರಚಿಸಿದ್ದು, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಸಿಂಧೂ ಬಿ ರೂಪೇಶ್ ಪ್ರಾಯೋಗಿಕವಾಗಿ ಬೀದಿನಾಟಕ ವೀಕ್ಷಿಸಿ, ಪ್ರದರ್ಶನಕ್ಕೆ ಅನುಮತಿ ನೀಡಿದ್ದಾರೆ.
ಮತದಾನಕ್ಕೆ ಮನ್ನಣೆ ನೀಡಿದ ರಾಜ: ಸಮೃದ್ದಿಪುರದ ಮಹಾರಾಜ ರತ್ನವರ್ಮ ಮಕ್ಕಳಿಲ್ಲದ ಕಾರಣ ತನ್ನ ಸಾಮ್ರಾಜ್ಯಕ್ಕೆ ಸೂಕ್ತ ನಾಯಕನ ಆಯ್ಕೆಗಾಗಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಪ್ರಜೆಗಳಿಂದಲೇ ಅರ್ಹರನ್ನು ಆಯ್ಕೆ ಮಾಡುವ ಉದ್ದೇಶದಿಂದ ಮತದಾನ ನಡೆಸುತ್ತಾನೆ. ಈ ಮೂಲಕ ಸಮರ್ಥ ನಾಯಕನ ಆಯ್ಕೆ ಮಾಡುವ ಅವಕಾವನ್ನು ಪ್ರಜೆಗಳಿಗೇ ನೀಡುತ್ತಾನೆ.
ಇದು ಉಡುಪಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಸಿದ್ದಪಡಿಸಿರುವ ಯಕ್ಷಗಾನ ಕಥಾಪ್ರಸಂಗ. ಈ ಯಕ್ಷಗಾನದಲ್ಲಿ ಮತದಾನ ಮಾಡುವ ಬಗ್ಗೆ ಮಾತ್ರವಲ್ಲದೇ, ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಅರ್ಹರನ್ನು ಆಯ್ಕೆಮಾಡುವ ಬಗ್ಗೆ ಮಹಾರಾಜನ ಮೂಲಕ ಜನತೆಗೆ ಸಂದೇಶಗಳನ್ನು ಸಹ ನೀಡಲಾಗುತ್ತದೆ. ಕರಾವಳಿಯಲ್ಲಿ ಯಕ್ಷಗಾನ ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿರುವ ಜೊತೆಗೆ, ಅತ್ಯಂತ ಹೆಚ್ಚು ಜನಪ್ರಿಯತೆಯನ್ನೂ ಪಡೆದಿದೆ. ಹೀಗಾಗಿ ಯಕ್ಷಗಾನದ ಮೂಲಕ ಕಡ್ಡಾಯ ಮತದಾನಕ್ಕೆ ಸಂಬಂಧಿಸಿದಂತೆ ನೀಡುವ ಸಂದೇಶಗಳು ಶ್ರೀವಾಗಿ ಸಾರ್ವಜನಿಕರಿಗೆ ತಲುಪುವ ಸಾಧ್ಯತೆ ಇರುವುದರಿಂದ ಜಿಲ್ಲಾ ಸ್ವೀಪ್ ಸಮಿತಿ ಇದನ್ನು ಆಯ್ಕೆ ಮಾಡಿದೆ.
ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ವಿಭಾಗದ ನಿವೃತ್ತ ಅಧಿಕಾರಿ ನಾಗೇಶ್ ಶಾನುಬಾಗ್ ಸ್ವೀಪ್ಗಾಗಿ ಯಕ್ಷಗಾನ ಪ್ರಸಂಗವನ್ನು ರಚಿಸಿದ್ದು, ಕೋಟದ ಕಲಾಪೀಠ ತಂಡದ ಕಲಾವಿದರು ಕಾರ್ಯಕ್ರಮ ಪ್ರಸ್ತುತ ಪಡಿಸುತಿದ್ದಾರೆ.