ಬಿಜೆಪಿಯನ್ನು ಸೋಲಿಸದಿದ್ದರೆ ಪ್ರಜಾಪ್ರಭುತ್ವಕ್ಕೆ ಆಪತ್ತು: ಹರೀಶ್ ಕುಮಾರ್
ದ.ಕ.ಜಿಲ್ಲಾ ಕಾಂಗ್ರೆಸ್ ಸಭೆ
ಮಂಗಳೂರು, ಮಾ.28: ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಮನೆ, ಕಚೇರಿಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ದಾಳಿಯ ಹಿಂದೆ ಬಿಜೆಪಿಯ ಕೈವಾಡವಿದೆ. ಪ್ರಜಾಪ್ರಭುತ್ವದ ಮಾರಕ ಕೆಲಸಗಳನ್ನು ಮಾಡುತ್ತಿರುವ ಬಿಜೆಪಿಯನ್ನು ಸೋಲಿಸದಿದ್ದಲ್ಲಿ ಪ್ರಜಾಪ್ರಭುತ್ವಕ್ಕೆ ಆಪತ್ತು ಬರಬಹುದು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು.
ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಜಿಲ್ಲಾ ಪದಾಧಿಕಾರಿಗಳ ಹಾಗೂ ಕಾರ್ಯಕಾರಿಣಿ ಸಮಿತಿ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ನಮ್ಮ ಬೂತ್, ನಮ್ಮ ಹೊಣೆ’ ಎಂಬ ಧ್ಯೇಯದೊಂದಿಗೆ ಎಲ್ಲರೂ ತಮ್ಮ-ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕು. ಕಾಂಗ್ರೆಸ್ ಬಿಲ್ಲವ ಸಮಾಜಕ್ಕೆ 2 ಲೋಕಸಭಾ ಕ್ಷೇತ್ರದಲ್ಲಿ ಪ್ರಾತಿನಿಧ್ಯ ನೀಡಿದೆ. ಬಿಜೆಪಿ 28 ಕ್ಷೇತ್ರದಲ್ಲಿ ಯಾವುದೇ ಬಿಲ್ಲವ ಅಭ್ಯರ್ಥಿಗೆ ಪ್ರಾತಿನಿಧ್ಯ ನೀಡಿಲ್ಲ. ಕಾಂಗ್ರೆಸ್ ಪಕ್ಷವು ನನ್ನನ್ನು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಮಾಡಿದ್ದಲ್ಲದೆ ಜಯಾಮಾಲ ಅವರನ್ನು ವಿಧಾನ ಪರಿಷತ್ತಿನ ಸಭಾನಾಯಕಿಯಾಗಿ ಮಾಡಿ, ಮಂತ್ರಿ ಸ್ಥಾನವನ್ನು ಒದಗಿಸಿ ಕೊಟ್ಟಿರುವುದನ್ನು ಗಮನಿಸಬೇಕಿದೆ ಎಂದರು.
ದ.ಕ. ಜಿಲ್ಲಾ ಜಂಟಿ ಚುನಾವಣಾ ಸಮಿತಿಯ ಅಧ್ಯಕ್ಷ ಬಿ.ರಮಾನಾಥ ರೈ, ಅಭ್ಯರ್ಥಿ ಮಿಥುನ್ ರೈ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕರಾರದ ಕೆ.ಎಸ್. ಮುಹಮ್ಮದ್ ಮಸೂದ್, ಜೆ.ಆರ್. ಲೋಬೋ, ಮೊಯ್ದಿನ್ ಬಾವ, ಕಣಚೂರು ಮೋನು, ರಾಜಶೇಖರ್ ಕೋಟ್ಯಾನ್, ಶಾಲೆಟ್ ಪಿಂಟೋ, ಎಂ.ಎಸ್. ಮುಹಮ್ಮದ್, ಭರತ್ ಮುಂಡೋಡಿ, ಪುರುಷೋತ್ತಮ ಚಿತ್ರಾಪುರ, ಕವಿತಾ ಸನಿಲ್, ನವೀನ್ ಡಿಸೋಜ, ಪ್ರಸಾದ್ರಾಜ್ ಕಾಂಚನ್, ಪದ್ಮನಾಭ ನರಿಂಗಾನ, ಸಂತೋಷ್ ಕುಮಾರ್ ಶೆಟ್ಟಿ, ನೀರಜ್ಪಾಲ್, ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.