ಕಣಚೂರು ಸಂಸ್ಥೆಯಲ್ಲಿ ರಾಜ್ಯಮಟ್ಟದ ಕಾರ್ಯಾಗಾರ
ಕೊಣಾಜೆ: ಕಣಚೂರು ಶಿಕ್ಷಣ ಸಂಸ್ಥೆಯ ಕಣಚೂರು ಕಾಲೇಜ್ ಆಫ್ ನರ್ಸಿಂಗ್ ಸಯನ್ಸಸ್ ಇದರ ಆಶ್ರಯದಲ್ಲಿ 'ಸಂಶೋಧನಾ ವಿಧಾನಶಾಸ್ತ್ರ ಸವಾಲು ಗಳು ಹಾಗೂ ಇತ್ತೀಚಿನ ಅವಕಾಶಗಳು' ಎಂಬ ವಿಷಯದಲ್ಲಿ ಎರಡು ದಿನಗಳ ಕಾಲ ನಡೆಯುವ ರಾಜ್ಯಮಟ್ಟದ ಕಾರ್ಯಾಗಾರದ ಉದ್ಘಾಟನೆ ಗುರುವಾರ ನಡೆಯಿತು.
ಕಾರ್ಯಕ್ರಮವನ್ನು ನಿಟ್ಟೆ ನರ್ಸಿಂಗ್ ಕಾಲೇಜಿನ ಮುಖ್ಯಸ್ಥರಾದ ಫಾತಿಮ ಡಿಸಿಲ್ವಾ ಅವರು ಉದ್ಘಾಟಿಸಿ ಮಾತನಾಡಿ, ಇಂದು ಸಂಶೋಧನೆ ಕ್ಷೇತ್ರವು ವಿಸ್ತರಿಸುತ್ತಿದ್ದು, ಹಲವಾರು ಅವಕಾಶಗಳನ್ನು ತೆರದಿಟ್ಟಿದೆ. ಆರೋಗ್ಯಕ್ಕೆ ಸಂಬಂಧಪಟ್ಟಂತೆ ನರ್ಸಿಂಗ್ ಕ್ಷೇತ್ರವು ಬಹಳ ಪ್ರಮುಖ ಕ್ಷೇತ್ರವಾಗಿದೆ. ಆರೋಗ್ಯ ಸೇವೆಯಲ್ಲಿ ಬಹಳ ಮುಖ್ಯ ಪಾತ್ರವಹಿಸುವ ನರ್ಸಿಂಗ್ನಲ್ಲಿಯೂ ಸಂಶೋಧನಾ ಪ್ರವೃತ್ತಿ ಹೆಚ್ಚೆಚ್ಚು ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ದಾದಿಯರು ಕೂಡಾ ನಿರಂತರವಾದ ಓದಿನೊಂದಿಗೆ ಜ್ಞಾನದ ಅರಿವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಅಬ್ದುಲ್ ರಹಿಮಾನ್ ಅವರು, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತಹ ವಿಷಯದಲ್ಲಿ ನಡೆಯುವ ಇಂತಹ ಕಾರ್ಯಾಗಾರಗಳು ಪರಿಣಾಮಕಾರಿಯಾಗಿದ್ದು ಇಂತಹ ಕಾರ್ಯಕ್ರಮದ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ಜೆನೆಟ್ ಮಿರಾಂಡ, ಮೆಡಿಕಲ್ ಸುಪರಿಡೆಂಟ್ ಡಾ.ದೇವಿಪ್ರಸಾದ್ ಶೆಟ್ಟಿ, ಡಾ.ಮಹಮ್ಮದ್ ಸುಹೈಲ್, ಡಾ.ಕಿರಣ್, ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿ ಮಾಲತಿ ಮೊದಲಾದವರು ಉಪಸ್ಥಿತರಿದ್ದರು.
ಕಣಚೂರು ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ರೆನಿಲ್ಡಾ ಶಾಂತಿ ಲೋಬೋ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.