ತಲಪಾಡಿ: ಹಿರಿಯ ಅರ್ಚಕ ಬಂಗಾರು ಭಟ್ರು ನಿಧನ
ಯು.ಟಿ.ಫರೀದ್, ಖಾದರ್ ಗೆ ಆಶೀರ್ವದಿಸಿದ್ದ ಅರ್ಚಕ
ತಲಪಾಡಿ: ತಲಪಾಡಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಮುಖ್ಯ ಅರ್ಚಕರಾದ 'ಬಂಗಾರು ಭಟ್ರು' ಎಂದೇ ಖ್ಯಾತರಾಗಿದ್ದ ವೇದಮೂರ್ತಿ ಬಾಲಕೃಷ್ಣ ಭಟ್ ಗುರುವಾರ ರಾತ್ರಿ ನಿಧನರಾದರು.
ಕಳೆದ 50 ವರ್ಷಗಳಿಂದ ತಲಪಾಡಿ ದೇವಸ್ಥಾನದ ಅರ್ಚಕರಾಗಿ, ಪೂಜೆ ಪುರಸ್ಕಾರಗಳಲ್ಲಿ ತೊಡಗಿಸಿಕೊಂಡಿದ್ದ ಅವರು ಸರ್ವಧರ್ಮದ ಜನರ ಗೌರವಕ್ಕೆ ಪಾತ್ರರಾಗಿದ್ದರು.
ಮೃತರು ಮಾಜಿ ಶಾಸಕ ದಿವಂಗತ ಯು.ಟಿ.ಫರೀದ್ ರಿಗೆ ಆತ್ಮೀಯರಾಗಿದ್ದುಕೊಂಡು ಪ್ರತಿ ಚುನಾವಣೆಯ ಸಂದರ್ಭದಲ್ಲಿ ಕೂಡಾ ಆಶೀರ್ವದಿಸುತ್ತಿದ್ದರು. ನಂತರ ಶಾಸಕರು, ಸಚಿವರೂ ಆದ ಯು.ಟಿ.ಖಾದರ್ ಅವರಿಗೆ ಕೂಡಾ ಆಶೀರ್ವಾದ ನೀಡುತ್ತಿದ್ದುದು ಸ್ಮರಣೀಯ.
ಯು.ಟಿ.ಖಾದರ್ ಅವರು ವೇದಮೂರ್ತಿ ಬಾಲಕೃಷ್ಣ ಭಟ್ ಅವರ ಮನವಿಯ ಮೇರೆಗೆ ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವನ್ನು ಸಂಪರ್ಕಿಸುವ ತಲಪಾಡಿ ಮುಖ್ಯ ರಸ್ತೆಯಿಂದ ಪಂಜಳಕ್ಕೆ ಹಾದು ಹೋಗುವ ರಸ್ತೆಗೆ 3 ಕೋಟಿ ರೂ. ವೆಚ್ಚದ ಕಾಂಕ್ರಿಟೀಕರಣ ಮಾಡಿಕೊಟ್ಟಿದ್ದರು. ಇದರಿಂದಾಗಿ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನುಕೂಲವಾಗಿದೆ.
ವೇದಮೂರ್ತಿ ಬಾಲಕೃಷ್ಣ ಭಟ್ ಅವರ ನಿಧನದ ಸುದ್ದಿ ತಿಳಿದ ಸಚಿವ ಯು.ಟಿ.ಖಾದರ್ ಅವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿ, ಕುಟುಂಬಕ್ಕೆ ಸಾಂತ್ವಾನ ಹೇಳಿದರು. ದೇವಸ್ಥಾನದ ಕಿರಿಯ ಅರ್ಚಕ ಶ್ರೀ ಗಣೇಶ್ ಭಟ್ ಅವರು ವೇದಮೂರ್ತಿ ಬಾಲಕೃಷ್ಣ ಭಟ್ ಅವರ ಪುತ್ರ.