ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 12 ಮಂದಿ ಸ್ಪರ್ಧಾಕಣದಲ್ಲಿ
ಇಬ್ಬರಿಂದ ನಾಮಪತ್ರ ಹಿಂದೆಗೆತ
ಮಣಿಪಾಲ, ಮಾ. 29: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಎ.18ರಂದು ನಡೆಯುವ ಚುನಾವಣೆಯಲ್ಲಿ ಅಂತಿಮವಾಗಿ ಒಟ್ಟು 12 ಮಂದಿ ಸ್ಪರ್ಧಾಕಣದಲ್ಲಿ ಉಳಿದುಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಕ್ಷೇತ್ರದ ಚುನಾವಣಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಸಂಜೆ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ರಾಜಸ್ತಾನ ಮೂಲದ ಐಎಎಸ್ ಅಧಿಕಾರಿ ಕೃಷ್ಣ ಕುನಾಲ್ ಅವರ ಉಪಸ್ಥಿತಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಈ ಕ್ಷೇತ್ರದಿಂದ ಸ್ಪರ್ಧಿಸಲು ಒಟ್ಟು 14 ಮಂದಿ ನಾಮಪತ್ರ ಸಲ್ಲಿಸಿದ್ದು, ಪರಿಶೀಲನೆಯ ವೇಳೆ ಎಲ್ಲರ ನಾಮಪತ್ರಗಳು ಕ್ರಮಬದ್ಧವಾಗಿದ್ದವು. ನಾಮಪತ್ರ ಗಳನ್ನು ಹಿಂದೆಗೆದುಕೊಳ್ಳಲು ಎರಡು ದಿನಗಳ ಕಾಲಾವಕಾಶ ನೀಡ ಲಾಗಿದ್ದು, ಈ ವೇಳೆ ಇಬ್ಬರು ತಮ್ಮ ನಾಮಪತ್ರಗಳನ್ನು ಹಿಂದಕ್ಕೆ ಪಡೆದರು ಎಂದು ಅವರು ವಿವರಿಸಿದರು.
ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಗಣಪತಿ ಶೆಟ್ಟಿಗಾರ್ ಹಾಗೂ ಸುಧೀರ್ ಕಾಂಚನ್ ಅವರು ತಮ್ಮ ನಾಮಪತ್ರಗಳನ್ನು ವಾಪಾಸು ಪಡೆದಿದ್ದಾರೆ. ಇದರಿಂದ ಅಂತಿಮವಾಗಿ 12 ಮಂದಿ ಸ್ಪರ್ಧಾಕಣದಲ್ಲಿ ಉಳಿದುಕೊಂಡಿದ್ದು, ಅಭ್ಯರ್ಥಿಗಳು ಹಾಗೂ ಅವರ ಚುನಾವಣಾ ಏಜೆಂಟರ ಸಭೆ ನಡೆಸಿ ಅಭ್ಯರ್ಥಿಗಳಿಗೆ ಚಿಹ್ನೆಗಳ ಹಂಚಿಕೆಯನ್ನು ಮಾಡಲಾಯಿತು. ಅಭ್ಯರ್ಥಿಗಳು, ಅವರ ರಾಜಕೀಯ ಪಕ್ಷಗಳು ಹಾಗೂ ಸ್ಪರ್ಧೆಗೆ ನೀಡಲಾದ ಚಿಹ್ನೆಗಳ ವಿವರ ಹೀಗಿದೆ.
1.ಪಿ.ಪರಮೇಶ್ವರ, ಬಹುಜನ ಸಮಾಜ ಪಾರ್ಟಿ (ಆನೆ), 2.ಪ್ರಮೋದ್ ಮಧ್ವರಾಜ್, ಜಾತ್ಯತೀತ ಜನತಾದಳ (ತಲೆ ಮೇಲೆ ಹೊರಹೊತ್ತ ಮಹಿಳೆ), 3.ಶೋಭಾ ಕರಂದ್ಲಾಜೆ, ಬಿಜೆಪಿ (ಕಮಲ), 4.ಪಿ.ಗೌತಮ್ ಪ್ರಭು, ಶಿವಸೇನೆ (ಬಿಲ್ಲು ಮತ್ತು ಬಾಣ), 5.ಎಂ.ಕೆ.ದಯಾನಂದ, ಪ್ರೌಟಿಸ್ಟ್ ಸರ್ವ ಸಮಾಜ (ಟ್ರಾಕ್ಟರ್ ಓಡಿಸುವ ರೈತ), 6.ವಿಜಯಕುಮಾರ್, ಸಿಪಿಐ(ಎಂಎಲ್) ರೆಡ್ಸ್ಟಾರ್ (ಗರಗಸ). 7.ಸುರೇಶ್ ಕುಂದರ್, ಉತ್ತಮ ಪ್ರಜಾಕೀಯ ಪಾರ್ಟಿ (ಅಟೋರಿಕ್ಷಾ), 8.ಶೇಖರ ಹಾವಂಜೆ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ (ಕಪ್ ಮತ್ತು ಸಾಸರ್), 9.ಅಬ್ದುಲ್ ರೆಹಮಾನ್, ಪಕ್ಷೇತರ (ಕಬ್ಬು ರೈತ), 10.ಅಮೃತ್ ಶೆಣೈ ಪಿ., ಪಕ್ಷೇತರ (ವಜ್ರ),11.ಎಂ.ಕೆ.ಗಣೇಶ್, ಪಕ್ಷೇತರ (ಸೀಟಿ-ವ್ಹಿಸಲ್), 12.ಕೆ.ಸಿ.ಪ್ರಕಾಶ್, ಪಕ್ಷೇತರ (ಗ್ಯಾಸ್ ಸಿಲಿಂಡರ್).
ಸ್ಪರ್ಧೆಯಲ್ಲಿ ಉಳಿದಿರುವ ಅಭ್ಯರ್ಥಿಗಳ ವಿವರಗಳನ್ನೊಳಗೊಂಡ ನಮೂನೆ 7ಎಯನ್ನು ಇಂದು ಪ್ರಕಟಿಸಲಾಗಿದ್ದು, ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ. ಅವರಿಂದ ಅನುಮೋದನೆಗೊಂಡ ತಕ್ಷಣ ಬ್ಯಾಲೆಟ್ ಯುನಿಟ್ಗೆ ಅಳವಡಿಸುವ ಹಾಗೂ ಟೆಂಡರ್ ಮತಕ್ಕೆ ಅಗತ್ಯವಿರುವ ಮತಪತ್ರ ಗಳನ್ನು ಸರಕಾರಿ ಮುದ್ರಣಾಲಯದಲ್ಲಿ ಮುದ್ರಿಸಲಾಗುವುದು ಎಂದರು.
ಈ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 548 ಪುರುಷ ಹಾಗೂ 7 ಮಂದಿ ಮಹಿಳೆಯರು ಸೇರಿ ಒಟ್ಟು 555 ಸೇವಾ ಮತದಾರರಿದ್ದಾರೆ. ಈ ಸೇವಾ ಮತದಾರ ರಿಗೆ ಸಂಬಂಧಿಸಿದ ಅಂಚೆ ಮತಪತ್ರವನ್ನು ನಿಗದಿತ ನಮೂನೆಯಲ್ಲಿ ಇಟಿಬಿಪಿ ತಂತ್ರಾಂಶದ ಮೂಲಕ ಕಳುಹಿಸಲಾಗುತ್ತದೆ. ಅಲ್ಲದೇ ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿ, ಸಿಬ್ಬಂದಿಗಳಿಗೆ ನೀಡಲು ಅಂಚೆ ಮತಪತ್ರವನ್ನು ಪ್ರತ್ಯೇಕವಾಗಿ ಮುದ್ರಿಸಿ ನೀಡಲಾಗುತ್ತದೆ ಎಂದು ಹೆಪ್ಸಿಬಾ ರಾಣಿ ತಿಳಿಸಿದ್ದಾರೆ.
ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.