ಜೂನ್ನಿಂದ ದಿ ಭಾರತ್ ಅಕಾಡೆಮಿ ಕಾರ್ಯಾರಂಭ
ಮಂಗಳೂರು : ಇಎಲ್ಸಿ, ಸಿಎಫ್ಎಎಲ್ ಮತ್ತು ಭಾರತ್ ಗ್ರೂಪ್ ಸಹಭಾಗಿತ್ವದಲ್ಲಿ ನಗರದ ಬಿಜೈ ಬಳಿಯ ಬ್ಲೂಬೆರಿ ಹಿಲ್ಸ್ನಲ್ಲಿ ನಿರ್ಮಾಣವಾಗಿರುವ ದಿ ಭಾರತ್ ಅಕಾಡೆಮಿ ಜೂನ್ನಿಂದ ಕಾರ್ಯಾರಂಭಿಸಲಿದೆ ಎಂದು ಭಾರತ್ ಅಕಾಡೆಮಿಯ ಆನಂದ್ ಪೈ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, 4 ಎಕರೆ ವಿಶಾಲವಾದ ಪ್ರದೇಶದಲ್ಲಿ ಈ ಅಕಾಡೆಮಿ ತಲೆ ಎತ್ತಲಿದೆ ಎಂದರು.
ಆರಂಭದಲ್ಲಿ 1ರಿಂದ 3ನೆವರೆಗೆ ತರಗತಿಗಳು ಆರಂಭವಾಗಲಿದ್ದು, ಪ್ರತಿ ತರಗತಿಯಲ್ಲಿ 1:15ರ ಪ್ರಮಾಣದಲ್ಲಿ ಶಿಕ್ಷಕ ವಿದ್ಯಾಥಿಗಳು ಇರಲಿದ್ದಾರೆ. ಐಸಿಎಸ್ಸಿ ಹಾಗೂ ಐಜಿಸಿಎಸ್ಇ ಪಠ್ಯಕ್ರಮದಲ್ಲಿ ಶಿಕ್ಷಣವನ್ನು ಇಲ್ಲಿ ಬೋಧಿಸಲಾಗುವುದು. ಗುಣಮಟ್ಟದ ಕಲಿಕೆಗೆ ಇಎಲ್ಸಿ ಮತ್ತು ಸಿಎಫ್ಎಎಲ್ನ ಸಾಮರ್ಥ್ಯ ಆಧಾರಿತ ಕಲಿಕೆ ಸಹಕಾರಿಯಾಗಲಿದೆ. ಇಲ್ಲಿ ಜೀವನ ಕೌಶಲ್ಯ ತರಬೇತಿಗಾಗಿ ಲರ್ನಿಂಗ್ ಲ್ಯಾಬ್ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದು ಅವರು ಹೇಳಿದರು.
ಪ್ರಕೃತಿಯೊಂದಿಗೆ ಸಹಭಾಗಿತ್ವವಾಗುವ ವಿನ್ಯಾಸವಿರುವ ತರಗತಿಗಳು, ವಿದ್ಯಾರ್ಥಿ ಕೇಂದ್ರಿತ ಕಲಿಕೆಯ ವಿಧಾನಗಳು ಅನುಭವ ಆಧಾರಿತ ಕಲಿಕೆಯ ವಿಧಾನ ಈ ಅಕಾಡೆಮಿಯ ವಿಶೇಷತೆಗಳು ಎಂದು ಅವರು ಹೇಳಿದರು.
ಏನಿದು ಲರ್ನಿಂಗ್ ಲ್ಯಾಬ್ ?
ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಭಾರತ್ ಅಕಾಡೆಮಿಯಲ್ಲಿ ಕೌಶಲ್ಯ ತರಬೇತಿಗಾಗಿ ಲರ್ನಿಂಗ್ ಲ್ಯಾಬ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಇಲ್ಲಿ ಹಲವಾರು ವೃತ್ತಿಪರರು, ನಿಪುಣರನ್ನು ಆಹ್ವಾನಿಸಿ ಅವರಿಂದ ವಿದ್ಯಾರ್ಥಿಗಳಿಗೆ ಕೌಲ್ಯದ ತರಬೇತಿ ನೀಡಲಾಗುವುದು. ಪಠ್ಯ ತರಗತಿಗಳ ಬಳಿಕ ಪ್ರತಿ ದಿನ ಈ ಲ್ಯಾಬ್ನಲ್ಲಿ ತರಬೇತಿ ನಡೆಯಲಿದೆ. ಇದರ ಜತೆ ಈಜು, ಚೆಸ್, ಬ್ಯಾಡ್ಮಿಂಟನ್, ಶಾಸ್ತ್ರೀಯ ನೃತ್ಯ, ಸಂಗೀತ ತರಬೇತಿಯನ್ನೂ ನೀಡಲಾಗುವುದು ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ವಿಜಯ ಮೊರಾಸ್, ಸುಧೀರ್ ಪೈ, ಡಾ. ವಿದ್ಯಾ ಪೈ, ಶ್ರೇಯಾ ಪೈ ಉಪಸ್ಥಿತರಿದ್ದರು.