ಪಿ. ಗಣೇಶ್ ಭಟ್ ಮೂಡುಬಿದಿರೆ ನಿಧನ
ಮೂಡುಬಿದಿರೆ: ಜೌಷಧಿ ವರ್ತಕ, ಮೆಡಿಕಲ್ ಸೆಂಟರ್ ಮಾಲಕರಾಗಿದ್ದ ಪಿ. ಗಣೇಶ್ ಭಟ್ (58) ಹೃದಯಾಘಾತದಿಂದ ಶುಕ್ರವಾರ ನಿಧನ ಹೊಂದಿದರು. ಗುರುವಾರ ತಡರಾತ್ರಿ ಅಸ್ವಸ್ಥರಾದ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವರು ಅಸುನೀಗಿದರು. ಅವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ತಮ್ಮ ಹಿರಿಯರ ಪಿ. ಲಕ್ಷ್ಮಣ ಭಟ್ ಆಯುರ್ವೇದ ಔಷದಾಲಯವನ್ನು ನಡೆಸಿದ್ದ ತಂದೆ ದಿ.ಪಿ.ಕೃಷ್ಣ ಭಟ್ ಅವರ ಜತೆಗೂಡಿ ಔಷದಾಲಯದ ಜತೆಗಿದ್ದ ಗಣೇಶ್ ಭಟ್ ಕಳೆದ ಮೂರೂವರೆ ದಶಕಗಳಿಂದ ಮೆಡಿಕಲ್ ಸೆಂಟರ್ ಸ್ಥಾಪಿಸಿ ಮುನ್ನಡೆಸಿದ್ದರು.
ಕೊಡುಗೈದಾನಿಯಾಗಿ, ಸಂಸ್ಕೃತ ಕಾಳಜಿಯೊಂದಿಗೆ ಅವರು ಗುರುತಿಸಿಕೊಂಡಿದ್ದರು. ಮೃತರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಶುಕ್ರವಾರ ಅಪರಾಹ್ನ ಅಂತ್ಯಕ್ರಿಯೆ ವೇಳೆಗೆ ಮೂಡುಬಿದಿರೆಯ ಎಲ್ಲ ಔಷದ ವ್ಯಾಪಾರಿಗಳು ತಮ್ಮ ವ್ಯವಹಾರವನ್ನು ಸ್ಥಗಿತಗೊಳಿಸಿ ಗೌರವ ಸಂತಾಪ ಸೂಚಿಸಿದರು.
ದ.ಕ ಜಿಲ್ಲಾ ಎಡಿಶನಲ್ ಡ್ರಗ್ ಕಂಟ್ರೋಲರ್ ಶಂಕರ ನಾಯಕ್, ದ.ಕ ಜಿಲ್ಲಾ ಡ್ರಗ್ ಕೆಮಿಸ್ಟ್ ಎಸೋಸಿಯೇಶನ್ನ ಅಧ್ಯಕ್ಷ ಶ್ರೀಧರ ಕಾಮತ್, ಕಾರ್ಯದರ್ಶಿ ಗಣೇಶ ಕಾಮತ್ ಮತ್ತಿತರರು, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಕೆ. ಅಮರನಾಥ ಶೆಟ್ಟಿ, ಕೆ. ಅಭಯಚಂದ್ರ, ಡಾ. ಎಂ. ಮೋಹನ ಆಳ್ವ ಸೇರಿದಂತೆ ಭಾರೀ ಸಂಖ್ಯೆಯಲ್ಲಿ ಗಣ್ಯರು ಮೃತರ 'ರಾಧಾಕೃಷ್ಣ' ನಿವಾಸಕ್ಕೆ ತೆರಳಿ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.