ಬಾಲಕನ ತುಂಡರಿಸಿದ ಕೈಜೋಡಿಸಿದ ಕೆಎಂಸಿ ವೈದ್ಯರು
ಮಣಿಪಾಲ, ಮಾ. 29: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮೂಳೆ ವಿಭಾಗ ದ ವೈದ್ಯರ ತಂಡ, 18 ವರ್ಷ ವಯಸ್ಸಿನ ಹುಡುಗನ ತುಂಡಾದ ಕೈಯನ್ನು ಯಶಸ್ವಿಯಾಗಿ ಮರುಜೋಡಿಸಿದ್ದಾರೆ.
ರೋಗಿ, ಕಳೆದ ಫೆ.27ರಂದು ಕತ್ತರಿಸಿದ ಕೈಯನ್ನು ಚರ್ಮದ ತುದಿಯಲ್ಲಿ ನೇತು ಹಾಕಿಕೊಂಡಿದ್ದ ಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದಿದ್ದರು. ಬೆಳಗ್ಗೆ 8:30ರ ಸುಮಾರಿಗೆ ಅವರು ಕೆಲಸ ಮಾಡುತ್ತಿದ್ದಾಗ ಯಾಂತ್ರಿಕ ಗರಗಸದಿಂದ ಈ ಅಪಘಾತ ಸಂಭವಿಸಿದೆ. ಇನ್ನೆರಡು ಆಸ್ಪತ್ರೆಗಳಿಗೆ ಹೋದ ಬಳಿಕ ಅಪರಾಹ್ನದ ಸುಮಾರಿಗೆ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆತರಲಾಗಿತ್ತು. ಅದಾಗಲೇ ಸಾಕಷ್ಟು ಪ್ರಮಾಣದ ಅಂಗಾಂಶ ನಷ್ಟವಾಗಿತ್ತು ಹಾಗೂ ಆತ ತೀವ್ರವಾದ ಆಘಾತದ ಸ್ಥಿತಿಯಲ್ಲಿದ್ದರು. ಆದರೆ ತಕ್ಷಣವೇ ಒದಗಿಸಲಾದ ರಕ್ತ ಮರುಪೂರಣಾ ವ್ಯವಸ್ಥೆಯಿಂದ ಆತ ಚೇತರಿಸಿಕೊಂಡಿದ್ದರು ಎಂದು ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊದಲು ರೋಗಿಯ ಸಂಬಂಧಿಕರಿಗೆ ಚಿಕಿತ್ಸೆಯ ಕುರಿತು ಸಮಗ್ರ ಮಾಹಿತಿ ಒದಗಿಸಲಾಯಿತು. ಕೈ ಮರುಪೂರಣದ ಸಾಧ್ಯತೆಗಳು ಹಾಗೂ ಅದರಲ್ಲಿರುವ ಅಪಾಯಗಳ ಕುರಿತು ವಿವರಿಸಿ ಅವರಿಂದ ಒಪ್ಪಿಗೆಯನ್ನು ಪಡೆದುಕೊಳ್ಳಲಾಗಿತ್ತು. ಬಳಿಕ ಡಾ. ಜಯಕೃಷ್ಣನ್ ಕೆ.ಎನ್., ಡಾ. ಕೀರ್ತನ್ ಮತ್ತು ಡಾ. ಚೈತನ್ ಅವರು ಡಾ. ಅಶ್ವಥ್ ಆಚಾರ್ಯ ಮತ್ತು ಪ್ರಾಧ್ಯಾಪಕ ಡಾ.ಎಸ್.ಪಿ. ಮೊಹಂತಿ ಅವರ ಮಾರ್ಗದರ್ಶನದಲ್ಲಿ ಈ ಭಾಗವನ್ನು ಯಶಸ್ವಿಯಾಗಿ ಮರು ಜೋಡಿಸಿ ಸರಿಪಡಿಸಲಾಯಿತು.
ಈ ಯಶಸ್ವೀ ಶಸ್ತ್ರಚಿಕಿತ್ಸೆಗೆ ಅರಿವಳಿಕೆ ಬೆಂಬಲವನ್ನು ಡಾ. ನಿಶಾ ಸಾರಾ ಜೇಕಬ್ ಮತ್ತು ಡಾ.ಶ್ವೇತಾ ಸಿನ್ಹಾ ಒದಗಿಸಿದರು. ಮಣಿಕಟ್ಟಿನ ಮೇಲೆ ಮೃದು ಅಂಗಾಂಶದ ದೋಷವನ್ನು ಮೂರು ದಿನಗಳ ನಂತರ ಕಿಬ್ಬೊಟ್ಟೆಯ ಫ್ಲಾಪಿನಿಂದ ಮುಚ್ಚಲಾಗಿದ್ದು, ಇದರ ಪರಿಣಾಮ ಮೂರು ವಾರಗಳ ನಂತರ ಹೊಟ್ಟೆಗೆ ಅಂಟಿಕೊಂಡಿದ್ದ ಕೈಯನ್ನು ನಿಧಾನವಾಗಿ ಬೇರ್ಪಡಿಸಲಾಯಿತು. ರೋಗಿ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಿದ್ದು, ಅವರಿಗೆ ಪುನರ್ವಸತಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮರುಪೂರಣ ಶಸ್ತ್ರಚಿಕಿತ್ಸೆ ಮಣಿಕಟ್ಟಿನ ಮಟ್ಟ ಮತ್ತು ಅದರ ಮೇಲಿನ ತುದಿ ಗಳನ್ನು ಪ್ರತಿನಿಧಿಸುತ್ತದೆ. ಇಂಥ ಶಸ್ತ್ರಚಿಕಿತ್ಸೆಯ ಯಶಸ್ಸು ಗಾಯದ ಸಮಯದಿಂದ ಕತ್ತರಿಸಲ್ಪಟ್ಟ ಭಾಗವನ್ನು ಮರುಸೇರ್ಪಡಿಸುವ ಸಮಯದ ಮೇಲೆ ನಿರ್ಧಾರ ವಾಗುತ್ತದೆ. ಸಾಧಾರಣವಾಗಿ ಗಾಯಗೊಂಡ ಸಮಯದಿಂದ 6 ಗಂಟೆಗಳು ನಿರ್ಣಾಯಕ ಅವಧಿಯಾಗಿರುತ್ತವೆ. ನಿರ್ಣಾಯಕ ಅವಧಿಯ ಒಳಗೆ ಬೇರ್ಪಟ್ಟ ಭಾಗವನ್ನು ಜೋಡಿಸದಿದ್ದರೆ, ರಕ್ತ ಪೂರೈಕೆಯ ಕೊರತೆಯನ್ನು ಉಳಿಸಿ ಕೊಳ್ಳಲಾಗದೇ ಅಂಗಾಂಶಗಳ ಸಾವು ಸಂಭವಿಸುತ್ತದೆ. ಒಂದು ವೇಳೆ ಬೇರ್ಪಟ್ಟ ಭಾಗವನ್ನು ಚೆನ್ನಾಗಿ ಸಂರಕ್ಷಿಸಲಾಗಿದ್ದರೆ ನಿರ್ಣಾಯಕ ಅವಧಿಯ ಮಿತಿಯನ್ನು ಕೆಲವು ಗಂಟೆಗಳವರೆಗೆ ವಿಸ್ತರಿಸಬಹುದಾಗಿದೆ ಎಂದು ವೈದ್ಯರು ವಿವರಿಸಿದ್ದಾರೆ.
ಕಠಿಣವಾದ ಈ ಶಸ್ತ್ರಚಿಕಿತ್ಸೆಯನ್ನು ನಡೆಸಿದ ಡಾ.ಜಯಕೃಷ್ಣನ್ ಕೆ.ಎನ್. ಅವರು ಕೆಎಂಸಿ ಮೂಳೆ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಅವರು ಕೈ ಮತ್ತು ಸೂಕ್ಷ್ಮ ಶಸ್ತ್ರಚಿಕಿತ್ಸೆಯಲ್ಲಿ ವಿಶ್ವದ ಗಣ್ಯ ಸಂಸ್ಥೆ ಎನಿಸಿದ ಸಿಂಗಾಪುರ ದ ನೇಷನಲ್ ವಿವಿ ಆಸ್ಪತ್ರೆಯಲ್ಲಿ ಕೈ ಮತ್ತು ಸೂಕ್ಷ್ಮ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಕೈ ಮತ್ತು ಮರುಪೂರಣ ಶಸ್ತ್ರಚಿಕಿತ್ಸೆಯಲ್ಲಿ ತರಬೇತಿಯನ್ನು ಪಡೆದಿದ್ದಾರೆ ಎಂದು ಡಾ.ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.