ಮತದಾನ ಕೇಂದ್ರದಲ್ಲಿ ಅನುಚಿತ ವರ್ತನೆ ಅಪರಾಧ: ಡಿಸಿ ಸಸಿಕಾಂತ್
ಮಂಗಳೂರು, ಮಾ. 29: ಮತದಾನ ಕೇಂದ್ರಗಳಲ್ಲಿ ಅಥವಾ ಅವುಗಳ ಸಮೀಪದಲ್ಲಿ ಅನುಚಿತವಾಗಿ ನಡೆದುಕೊಳ್ಳುವುದು ಅಪರಾಧವಾಗಿದ್ದು, ಅಂತಹ ಘಟನೆಗಳು ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಚ್ಚರಿಕೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಚುನಾವಣಾ ವಿಚಾರಕ್ಕೆ ಸಂಬಂಧಿಸಿದಂತೆ ವರ್ಗಗಳ ನಡುವೆ ಹಗೆತನ ಬೆಳೆಸುವುದು, ಪ್ರಚೋದಿಸುವಂತಿಲ್ಲ. ಕಿರುಹೊತ್ತಿಗೆಗಳು, ಭಿತ್ತಿಪತ್ರಗಳು ಮುಂತಾದವುಗಳ ಮುದ್ರಣದ ಮೇಲೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದರು.
ಮತದಾನ ಕೇಂದ್ರಗಳಲ್ಲಿ ಅಥವಾ ಅವುಗಳ ಸಮೀಪದಲ್ಲಿ ಮತ ಕೋರಿಕೆಯನ್ನು ನಿಷೇಧಿಸಲಾಗಿದೆ. ಚುನಾವಣೆಯಲ್ಲಿ ವಾಹನಗಳನ್ನು ಕಾನೂನು ಬಾಹಿರವಾಗಿ ಬಾಡಿಗೆ ತೆಗೆದುಕೊಳ್ಳುವುದಕ್ಕೆ ಅಥವಾ ದೊರಕಿಸಿಕೊಡುವುದಕ್ಕೆ ದಂಡ ವಿಧಿಸಲಾಗುವುದು. ಮತದಾನ ಕೇಂದ್ರದ ಸಮೀಪದ ಆಯುಧವನ್ನು ತೆಗೆದುಕೊಂಡುವುದು ಹೋಗುವುದು ಚುನಾವಣಾ ಅಪರಾಧವಾಗಿದೆ ಎಂದು ಮಾಹಿತಿ ನೀಡಿದರು.
ಯಾವುದೇ ಕಾರಣಕ್ಕೂ ಮತದಾನ ಕೇಂದ್ರದಿಂದ ಮತಪತ್ರಗಳನ್ನು ಸ್ಥಳಾಂತರಿಸುವಂತಿಲ್ಲ. ಜತೆಗೆ ಮತಪೆಟ್ಟಿಗೆ, ಮತಪತ್ರ, ದಸ್ತಾವೇಜುಗಳು, ಬ್ಯಾಲೆಟ್ ಪೇಪರ್ಗಳನ್ನು ಅನಧಿಕೃತವಾಗಿ ನಾಶಗೊಳಿಸಿದ್ದೇ ಆದಲ್ಲಿ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಚುನಾವಣೆ ವೇಳೆ ಲಂಚ ನೀಡುವುದು, ಇನ್ನೊಬ್ಬನಂತೆ ನಟಿಸುವುದು, ಸುಳ್ಳು ಹೇಳಿಕೆ ನೀಡುವುದು, ಚುನಾವಣೆಗೆ ಸಂಬಂಧಿಸಿದ ಲೆಕ್ಕಗಳನ್ನು ಇಡದೇ ಎಥೇಚ್ಛವಾಗಿ ಖರ್ಚು ಮಾಡುವುದು ಭಾರತೀಯ ದಂಡ ಸಂಹಿತೆ ಪ್ರಕಾರ ಅಪರಾಧವಾಗಿರುತ್ತದೆ ಎಂದರು.
ಧರ್ಮ, ಮೂಲ ವಂಶ, ಜಾತಿ, ಸಮುದಾಯ ಅಥವಾ ಭಾಷೆಯ ಆಧಾರದ ಮೇಲೆ ನಾಗರಿಕರ ಭಿನ್ನ ಭಿನ್ನ ವರ್ಗಗಳ ನಡುವೆ ದ್ವೇಷ ಭಾವನೆ ಬೆಳೆಸು ವಂತಹ ಹೇಳಿಕೆ, ಹಾವಭಾವ ತೋರುವಂತಿಲ್ಲ. ಅಭ್ಯರ್ಥಿಯ ವೈಯಕ್ತಿಕ ಚಾರಿತ್ರ ಹರಣ, ಆತನ ನಡವಳಿಕೆಯ ಸಂಬಂಧದಲ್ಲಿ ಸುಳ್ಳು ಹೇಳಿಕೆಗಳನ್ನು ಪ್ರಕಟಿಸುವುದು ಶಿಕ್ಷೆಗೆ ಆಹ್ವಾನ ನೀಡಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪಕ್ಷದ ಚಿಹ್ನೆ ಇರುವ ಟಿ-ಶರ್ಟ್ ಬಳಕೆ ನಿಷೇಧ
ಯಾವುದೇ ಪಕ್ಷವನ್ನು ಪ್ರತಿನಿಧಿಸುವ ಚಿಹ್ನೆ, ಗುರುತು ಅಥವಾ ಬರಹಗಳಿರುವ ಟೀ-ಶರ್ಟ್ಗಳಲ್ಲಿ ಧರಿಸಿ ಮತದಾನ ಕೇಂದ್ರಕ್ಕೆ ಬರುವಂತಿಲ್ಲ. ಇದು ಪ್ರಚಾರವಲ್ಲ, ಆದರೆ ಆಮಿಷ ಒಡ್ಡುವುದಾಗಿದೆ. ಮತದಾನ ಕೇಂದ್ರದಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದಲ್ಲಿ ಚುನಾವಣಾ ಅಧಿಕಾರಿಗಳನ್ನು ಅಥವಾ ಅವರು ನೇಮಿಸಿದ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಚುನಾವಣಾಧಿಕಾರಿಗಳನ್ನು ಸಂಪರ್ಕಿಸಿದ 10 ನಿಮಿಷದಲ್ಲಿ ಅಧಿಕಾರಿಗಳು ಸ್ಥಳದಲ್ಲಿರುತ್ತಾರೆ. ಇದರ ಹೊರತಾಗಿ ಮತದಾನ ಕೇಂದ್ರದ ಒಳಗೆ ಅಥವಾ ಹೊರಗೆ ಯಾವುದೇ ರೀತಿಯ ಗಲಾಟೆ ಮಾಡಿದ್ದೇ ಆದಲ್ಲಿ ಕಾನೂನುನ್ನು ಕೈಗೆ ತೆಗೆದು ಕೊಂಡಂತಾಗುತ್ತದೆ. ಅಂತಹವರ ವಿರುದ್ಧ ಕೇಸು ದಾಖಲಿಸಿ, ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.
ವೋಟರ್ಸ್ ಸ್ಲಿಪ್ ದಾಖಲೆ ಅಲ್ಲ
ಎ.18ರಂದು ನಡೆಯುವ ಚುನಾವಣೆಗೆ ಮತದಾರರಿಗೆ ನೀಡಿರುವ ಭಾವಚಿತ್ರ ಇರುವ ಗುರುತಿನ ಚೀಟಿ ಹಾಜರಿಪಡಿಸಿ, ಮತದಾನ ಮಾಡಬೇಕಿದೆ. ಇದನ್ನು ಕಳೆದುಕೊಂಡವರು ಆಯೋಗ ನಿಗದಿಪಡಿಸಿರುವ 11ರಲ್ಲಿ ಯಾವುದಾದರೂ ಒಂದು ದಾಖಲೆ ಹಾಜರುಪಡಿಸಿ ಮತದಾನ ಮಾಡಬಹುದು. ಚುನಾವಣೆಗೆ ಮುನ್ನ ವಿತರಿಸುವ ವೋಟರ್ಸ್ ಸ್ಲಿಪ್ ಮತದಾನ ಮಾಡಲು ಅಗತ್ಯ ದಾಖಲೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.