ಏಕದಿನ ಕ್ರಿಕೆಟ್ ಪಂದ್ಯಾಟ: ಇಬ್ಬರು ಬುಕ್ಕಿಗಳ ಬಂಧನ
ಪಣಂಬೂರು ಪೊಲೀಸರ ಕಾರ್ಯಾಚರಣೆ
ಮಂಗಳೂರು, ಮಾ.29: ನಗರದ ಮೀನಕಳಿಯ ಸಮುದ್ರ ಕಿನಾರೆಯಲ್ಲಿ ಮೊಬೈಲ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಪಣಂಬೂರು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಕುಳಾಯಿ ನಿವಾಸಿ ಭರತೇಶ್ ಎಸ್. ಶ್ರೀಯಾನ್ (38), ಕದ್ರಿ ನಿವಾಸಿ ಮಹಾಂತೇಶ್ ಅಮೀನ್ (38) ಬಂಧಿತ ಆರೋಪಿಗಳು.
ಘಟನೆ ವಿವರ: ಪಣಂಬೂರು ಸಮೀಪದ ಮೀನಕಳಿಯ ಸಮುದ್ರ ಕಿನಾರೆಯಲ್ಲಿ ಭರತೇಶ್ ಮತ್ತು ಮಹಾಂತೇಶ್ ಎಂಬವರು ಬ್ರಿಝ್ಝಿ ಸ್ಪೋರ್ಟ್ಸ್ (Brizze Sport) ಮತ್ತು ಡಿಲೈಟ್ ಮೊಬೈಲ್ ಆ್ಯಪ್ ಬಳಸಿ ಪಾಕಿಸ್ತಾನ ಮತ್ತು ಆಸ್ಟೇಲಿಯಾ ನಡುವೆ ಅಬುದಾಬಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದರು. ಈ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ನಗರ ಉತ್ತರ ಉಪವಿಭಾಗ ರೌಡಿ ನಿಗ್ರಹ ದಳ ಹಾಗೂ ಪಣಂಬೂರು ಪೊಲೀಸರು ನ್ಯಾಯಾಯಲದಿಂದ ಅನುಮತಿ ಪಡೆದು ಸ್ಥಳಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಅಕ್ರಮ ದಂಧೆಗೆ ಉಪಯೋಗಿಸುತ್ತಿದ್ದ 43 ಸಾವಿರ ಮೌಲ್ಯದ ಮೂರು ಮೊಬೈಲ್, ಸಾರ್ಜನಿಕರಿಂದ ಅಕ್ರಮ ಬೆಟ್ಟಿಂಗ್ ದಂಧೆಗೆ ಸಂಗ್ರಹಿಸಿದ್ದ ನಗದನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಕ್ಕೆ ಪಡೆದ ಸೊತ್ತುಗಳ ಮೌಲ್ಯ 68 ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನಿರ್ದೇಶನದಂತೆ ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್ ಮಾರ್ಗದರ್ಶನದಂತೆ ಮಂಗಳೂರು ನಗರ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ್ ಆರ್. ಗೌಡ ನೇತೃತ್ವದಲ್ಲಿ ಪಣಂಬೂರು ಪೊಲೀಸ್ ನಿರೀಕ್ಷಕ ಕೆ.ಸತ್ಯನಾರಾಯಣ, ಮಂಗಳೂರು ಉತ್ತರ ಉಪವಿಭಾಗ ರೌಡಿ ನಿಗ್ರಹದಳದ ಪೊಲೀಸ್ ಉಪನಿರೀಕ್ಷಕ ಶೀತಲ್ ಅಲಗೂರು, ರೌಡಿ ನಿಗ್ರಹದಳದ ಎಎಸ್ಐ ಮುಹಮ್ಮದ್, ಕುಶಲ ಮಣಿಯಾಣಿ, ಸತೀಶ್ ಎಂ., ವಿಜಯ ಕಾಂಚನ್, ಇಸಾಕ್, ಶರಣ್ ಕಾಳಿ ಭಾಗವಹಿಸಿದ್ದರು.
ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.