ಹೊರರಾಜ್ಯ, ಹೊರಜಿಲ್ಲೆಗಳ 27 ಮಂದಿ ವಾರಂಟುದಾರರ ಬಂಧನ
ಉಡುಪಿ, ಮಾ.29: ಮುಂಬರುವ ಲೋಕಸಭಾ ಚುನಾವಣಾ ಪ್ರಯುಕ್ತ ವಿಶೇಷ ಕಾರ್ಯಾಚರಣೆ ನಡೆಸಿ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಗೆ ಸಂಬಂಧಿಸಿದಂತೆ, ಒಟ್ಟು 27 ವಾರಂಟು ಆಸಾಮಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ತಂಡ ಪತ್ತೆ ಹಚ್ಚಿ ಬಂಧಿಸಿದೆ.
ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಜಾರಿಯಾಗದೇ ಬಾಕಿ ಇರುವ ವಾರಂಟುಗಳ ಪರಾಮರ್ಶೆಯನ್ನು ನಡೆಸಿದ ತಂಡ, ಅವುಗಳನ್ನು ಪತ್ತೆ ಹಚ್ಚುವ ಸಲುವಾಗಿ ಹೊರರಾಜ್ಯಗಳಿಗೆ ಪೊಲೀಸ್ ಉಪನಿರೀಕ್ಷಕರ ನೇತೃತ್ವದ ಮೂರು ತಂಡಗಳನ್ನು ಹಾಗೂ ಹೊರಜಿಲ್ಲೆಗಳಿಗೆ ಎಎಸ್ಐ ನೇತೃತ್ವದ 5 ತಂಡಗಳನ್ನು ರಚಿಸಿ, ಕಳುಹಿಸಲಾಗಿತ್ತು.
ಹೊರರಾಜ್ಯಗಳಿಗೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಇಂದೋರ್ನಿಂದ ಇಬ್ಬರು,ಮಹಾರಾಷ್ಟ್ರದ ಸಾಂಗ್ಲಿಯಿಂದ ಓರ್ವ ಮತ್ತು ಕೇರಳದಿಂದ ಮೂವರನ್ನು ಪಿಎಸ್ಐ ನೇತೃತ್ವದ ತಂಡ ಪತ್ತೆ ಹಚ್ಚಿದೆ. ಅದೇ ರೀತಿ ಹೊರಜಿಲ್ಲೆಗಳಿಗೆ ತೆರಳಿದ 5 ತಂಡಗಳು ಒಟ್ಟು 21 ವಾರಂಟು ಆಸಾಮಿಗಳನ್ನು ಬಂಧಿಸಿದ್ದು, ಒಟ್ಟಾರೆಯಾಗಿ 27 ಮಂದಿ ವಾರಂಟು ಆಸಾಮಿಗಳನ್ನು ಪತ್ತೆ ಹಚ್ಚಿ ಸಂಬಂಧ ಪಟ್ಟ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಈ ಪೈಕಿ ಕೇರಳದ ಕಾಸರಗೋಡಿನಲ್ಲಿ ಬಂಧಿಸಲ್ಪಟ್ಟ ಆರೋಪಿ ಅಮೀರ್ ಆಲಿ ಎಂಬಾತ ಕಳೆದ 26 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಬೈಂದೂರು ಠಾಣೆಗೆ ಸಂಬಂಧಿಸಿದ ಕಳವು ಪ್ರಕರಣದ ಪ್ರಧಾನ ಆರೋಪಿಯಾಗಿದ್ದಾನೆ. ಈತನನ್ನು ಮಣಿಪಾಲ ಠಾಣಾ ಪಿಎಸ್ಐ ಶ್ರೀಧರ ನಂಬಿಯಾರ್ ನೇತೃತ್ವದ ತಂಡ ಕಾಸರಗೋಡಿನಲ್ಲಿ ಬಂಧಿಸಿತು.
ಇದೇ ಪ್ರಕರಣದ ಇನ್ನೋರ್ವ ಆರೋಪಿ ಕೆ.ಪಿ. ಯೂಸುಫ್ ಎಂಬಾತನು ಮೃತಪಟ್ಟಿರುವ ಬಗ್ಗೆ ಖಚಿತ ಪಡಿಸಿಕೊಂಡ ತಂಡ, ಆತನ ಮರಣ ಪ್ರಮಾಣ ಪತ್ರವನ್ನು ಪಡಕೊಳ್ಳುವಲ್ಲಿ ಯಶಸ್ವಿಯಾಯಿತು.
ತಂಡಗಳ ನಿರ್ವಹಣೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.