ಜನರ ವಿಶ್ವಾಸಕ್ಕೆ ಪಾತ್ರವಾಗುವಂತೆ ಕಾರ್ಯನಿರ್ವಹಿಸಿ: ಯುವ ಇಂಜಿನಿಯರ್ ಗಳಿಗೆ ಸುಶೀಲ್ ಚಂದ್ರ ಕಿವಿಮಾತು
ಬಿಐಟಿ-ಬೀಡ್ಸ್ ಉತ್ಸವ್ 2019
ಮಂಗಳೂರು, ಮಾ.30: ಜ್ಞಾನ ಅನುಭವದೊಂದಿಗೆ ಉತ್ತಮ ಸಂವಹನ ಕಲೆಯೂ ಇಂಜಿನಿಯರುಗಳಿಗೆ ಅಗತ್ಯ. ಅದೇರೀತಿ ಜನರ ವಿಶ್ವಾಸಕ್ಕೆ ಪಾತ್ರವಾಗುವಂತೆ ಕಾರ್ಯನಿರ್ವಹಿಸುವುದು ಮುಖ್ಯ ಎಂದು ಎಂಆರ್ ಪಿಎಲ್(ಕಾರ್ಪೊರೇಟ್ ಸ್ಟ್ರ್ಯಾಟಜೀಸ್) ಗ್ರೂಪ್ ಜನರಲ್ ಮ್ಯಾನೇಜರ್ ಸುಶೀಲ್ ಚಂದ್ರ ಯುವ ಇಂಜಿನಿಯರ್ ಗಳಿಗೆ ಕಿವಿಮಾತು ಹೇಳಿದ್ದಾರೆ.
ಬ್ಯಾರೀಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ), ಬಿಐಟಿ ಪಾಲಿಟೆಕ್ನಿಕ್ ಮತ್ತು ಬ್ಯಾರೀಸ್ ಎನ್ವೀರೊ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್(ಬೀಡ್ಸ್) ವತಿಯಿಂದ ಆಯೋಜಿಸಲಾಗಿದ್ದ ‘ಬಿಐಟಿ ಮತ್ತು ಬಿಡ್ಸ್ ಉತ್ಸವ-2019’ನ್ನು ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್ ನಲ್ಲಿಂದು ಉದ್ಘಾಟಿಸಿ, ಸಂಸ್ಥೆಯ ಮಾಹಿತಿ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಇಂಜಿನಿಯರ್ ಪದವಿ ಪಡೆದು ಮುಂದಿನ ಉದ್ಯೋಗದಲ್ಲಿ ತೊಡಗುವ ಸಂದರ್ಭದಲ್ಲಿ ಜನರ ವಿಶ್ವಾಸ ಗಳಿಸುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಒಂದು ಕ್ಷೇತ್ರ ವನ್ನು ಆಯ್ಕೆ ಮಾಡಿಕೊಂಡು ಆ ಕ್ಷೇತ್ರದ ಬಗ್ಗೆ ಸಮರ್ಪಕವಾದ ರೀತಿಯಲ್ಲಿ ಅಧ್ಯಯನ ಮಾಡಿದಾಗ ಆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ಬಿಐಟಿ ಕ್ಯಾಂಪಸ್ ಹಸಿರು ಪರಿಸರ ದಿಂದ ಕೂಡಿದ ಅಧ್ಯಯನಕ್ಕೆ ಸೂಕ್ತ ವಾದ ಪ್ರದೇಶ ಎಂದು ಬಿಐಟಿ ಕ್ಯಾಂಪಸ್ ಬಗ್ಗೆ ಸುಶೀಲ್ ಚಂದ್ರ ಮೆಚ್ಚುಗೆ ವ್ಯಕ್ತ ಪಡಿಸಿದರು.
ಎಂಆರ್ ಪಿಎಲ್ ರಾಜ್ಯದ ಮುಕುಟ ಮಣಿಯಂತೆ ಇರುವ ದೇಶ ಸಾರ್ವಜನಿಕ ವಲಯದ ಪ್ರಮುಖ ಸಂಸ್ಥೆಯಾಗಿದೆ ಸಂಸ್ಥೆ ರೂಪ್ ಡಾಪ್ ಸೋಲಾರ್ ಶಕ್ತಿ ಯ ಉತ್ಪಾದನೆಯ ಪ್ರಪಂಚದಲ್ಲಿಯೇ 6ನೇ ಅತ್ಯಂತ ದೊಡ್ಡ ಘಟಕವನ್ನು ಹೊಂದಿದೆ. ಸಾವಯವ ತ್ಯಾಜ್ಯದಿಂದ ಎಥನಾಲ್ ಉತ್ಪಾದನೆಯಲ್ಲಿ ತೊಡಗುವ ಮೂಲಕ ಪರ್ಯಾಯ ಇಂಧನ ಉತ್ಪಾದನೆಯಲ್ಲಿ ಸಾಧನೆ ಮಾಡಿದೆ ಎಂದು ಸುಶೀಲ್ ಚಂದ್ರ ತಿಳಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾರೀಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ, ಉತ್ತಮ ಯೋಚನೆಯೊಂದಿಗೆ ಜ್ಞಾನ ಸಂಪಾದನೆ ಇಂದಿನ ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಥೆ ವಿಶ್ವವಿದ್ಯಾನಿಲಯವಾಗಿ ಬೆಳೆಯುತ್ತಿರುವ ಹಂತದಲ್ಲಿ ಫ್ಯಾಷನ್ ಡಿಸೈನ್ ವಿಭವವನ್ನು ಆರಂಭಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.
ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ ಗೌಡ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಲು ತಮ್ಮ ಬದುಕಿನಲ್ಲಿ ಸೋಲನ್ನು ಸವಾಲಾಗಿ ಸ್ವೀಕರಿಸಬೇಕು ಎನ್ನುವುದಕ್ಕೆ ಮಹಾತ್ಮ ಗಾಂಧಿ ನಮ್ಮ ಮುಂದಿರುವ ಉದಾಹರಣೆಯಾಗಿದೆ ಎಂದರು.
ಕೋಡಿ ಬ್ಯಾರೀಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಬ್ಯಾರಿ, ಬ್ಯಾರೀಸ್ ಅಕಾಡಮಿ ಆಫ್ ಲರ್ನಿಂಗ್ ಟ್ರಸ್ಟ್ ನ ಟ್ರಸ್ಟಿ ಮಝರ್ ಎಸ್. ಬ್ಯಾರಿ, ಬೀಟ್-ಬೀಡ್ಸ್ ಉತ್ಸವದ ಕಾರ್ಯಕ್ರಮ ಸಂಯೋಜಕ ಅಬೂಬಕರ್ ಸಮೀಝ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿಐಟಿ ಪ್ರಾಂಶುಪಾಲ ಡಾ.ಮಹಾಬಲೇಶ್ವರಪ್ಪ ಬಿಐಟಿ ವರದಿ ನೀಡಿದರು. ಬೀಡ್ಸ್ ಪ್ರಾಂಶುಪಾಲ ಅಶೋಕ್ ಮೆಂಡೋನ್ಸಾ ಬೀಡ್ಸ್ ವರದಿ ವಾಚಿಸಿದರು. ಬಿಐಟಿ ಪಾಲಿಟೆಕ್ನಿಕ್ ಸಂಸ್ಥೆಯ ಪ್ರಾಂಶುಪಾಲ ಡಾ.ಅಝೀಝ್ಗ ಮುಸ್ತಫ ವರದಿ ವಾಚಿಸಿದರು. ಡಾ.ಮುಸ್ತಫ ಬಸ್ತಿಕೋಡಿ ಸ್ವಾಗತಿಸಿದರು. ಪ್ರೊ.ಅಬೂಬಕರ್ ಶಮೀಝ್ ವಂದಿಸಿದರು.
ಬಿಐಟಿ ಆ್ಯಂಡ್ ಬೀಡ್ಸ್ ಉತ್ಸವದಲ್ಲಿ ವಿವಿಧ ವಿಭಾಗಗಳ ಪ್ರತಿಭಾವಂತರಿಗೆ ಹಾಗೂ ಉತ್ಸವದ ಅಂಗವಾಗಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.