ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ
ಉಡುಪಿ, ಮಾ.30: ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಕಾಯ್ದೆ 2018ರ ಮಾ.3ರಿಂದ ಜಾರಿಗೆ ಬಂದಿದ್ದು, ಈ ದಿನದ ನಂತರ ನೆರವೇರಿ ಸಲಾದ ಪ್ರತಿಯೊಂದು ಬಾಲ್ಯ ವಿವಾಹವು ಅನೂರ್ಜಿತವಾಗಿರುತ್ತದೆ.
ಪ್ರತಿಯೊಬ್ಬ ಪೊಲೀಸ್ ಅಧಿಕಾರಿ, ತನ್ನ ಅಧಿಕಾರಿ ವ್ಯಾಪ್ತಿಯಲ್ಲಿ ನಡೆದ ಅಪರಾಧದ ಸಂಜ್ಞೆಯತೆಯನ್ನು ಗಮನಿಸಿ, ಈ ನಿಯಮದಡಿ ತಾನಾಗಿಯೇ ಕ್ರಮ ಕೈಗೊಳ್ಳಬೇಕು. ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಮಹಿಳೆಯರೂ ಕೂಡ ಸೆರೆವಾಸದ ಶಿಕ್ಷೆಗೆ ಅರ್ಹರಾಗಿರುತ್ತಾರೆ. ತಿದ್ದುಪಡಿಯಂತೆ ಸೆಕ್ಷನ್ 9 ಮತ್ತು 13ರ ಪ್ರಕಾರ ತಪ್ಪಿತಸ್ಥ ವಯಸ್ಕ ಪತಿ, ತಡೆಯಾಜ್ಞೆ ಉಲ್ಲಂಘಿಸಿದವರು ಕನಿಷ್ಟ ಒಂದು ವರ್ಷ, ಆದರೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಕಠಿಣ ಕಾರಾಗೃಹವಾಸ ಅಥವಾ ಒಂದು ಲಕ್ಷ ರೂ.ವರೆಗೆ ಜುಲ್ಮಾನೆ ಅಥವಾ ಇವೆರಡು ಶಿಕ್ಷೆಗೆ ಗುರಿಯಾಗಬಹುದಾಗಿದೆ.
ಬಾಲ್ಯ ವಿವಾಹ ನಿಷೇಧ ಕಾಯ್ದೆ ತಿದ್ದುಪಡಿ ಸೆಕ್ಷನ್ 10,11ರ ಪ್ರಕಾರ ಬಾಲ್ಯ ವಿವಾಹ ನಡೆಸಿದ ಮತ್ತು ಉತ್ತೇಜಿಸಿದ ತಪ್ಪಿತಸ್ಥರು ಕನಿಷ್ಟ ಒಂದು ವರ್ಷದಿಂದ ಗರಿಷ್ಟ 2 ವರ್ಷಗಳವರೆಗೆ ಕಾರಾವಾಸ ಮತ್ತು ಒಂದು ಲಕ್ಷ ರೂ.ವರೆಗೆ ದಂಡದ ಶಿಕ್ಷೆಗೆ ಗುರಿಯಾಗುವರು ಎಂದು ಜಿಲ್ಲಾಧಿಕಾರಿ ಹಾಗೂ ಬಾಲ್ಯ ವಿವಾಹ ಗಳನ್ನು ತಡೆಯುವ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿಯ ಅಧ್ಯಕ್ಷೆ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.