‘ಎಸ್.ಡಿ.ಎಂ. ಕಾವೈಭವ’ ಸಾಂಸ್ಕೃತಿಕ ಕಾರ್ಯಕ್ರಮ
ಉಡುಪಿ, ಮಾ. 30: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ‘ಎಸ್.ಡಿ.ಎಂ. ಕಲಾವೈಭವ’ವು ಇತ್ತೀಚೆಗೆ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಭಾವಪ್ರಕಾಶ ಸಭಾಂಗಣದಲ್ಲಿ ನಡೆಯಿತು.
ಸುಮಾರು 180 ಮಕ್ಕಳು ಭರತನಾಟ್ಯದ ಮೂಲಕ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯನ್ನು ಸಭಿಕರಿಗೆ ಸಾರಿ, ಮೋಹಿನಿ ಅಟ್ಟಂ, ಡಾಂಡಿಯ, ಯಕ್ಷಗಾನ, ಕಥಕ್, ಫ್ಲಾಮೆಂಕೊ ಇತ್ಯಾದಿ ಕಲೆಗಳನ್ನು ಪ್ರದರ್ಶಿಸಿದರು.
ಮುಖ್ಯ ಅತಿಥಿಯಾಗಿ ಮಂಗಳೂರು ತೇಜಸ್ವಿನಿ ಆಸ್ಪತ್ರೆ ವಿಭಾಗ ಮುಖ್ಯಸ್ಥ, ಮೂಳೆ ತಜ್ಞ ಡಾ.ಭಾಸ್ಕರಾನಂದ ಕುಮಾರ್ ಮಾತನಾಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಶ್ರೀನಿವಾಸ ಆಚಾರ್ಯ ವಹಿಸಿದ್ದರು. ಕಲಾವಿದೆ ಡಾ. ರಶ್ಮಿ ಕಲ್ಕೂರ, ಉಜಿರೆ ಎಸ್ಡಿಎಂ ಎಜುಕೇಶನಲ್ ಸೊಸೈಟಿಯ ಟೀಮ್ ಮ್ಯಾನೇಜ್ ಸೋಮಶೇಖರ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಮಮತಾ ಕೆ.ವಿ. ಸರ್ಟಿಫಿಕೇಟ್ ಕೋರ್ಸ್ ಇನ್ ಕೋಸ್ಮೆಟೋಲಜಿಯ ಮುಖಪತ್ರಿಕೆಯನ್ನು ಅನಾವರಣ ಗೊಳಿಸಿದರು. ಕಾಲೇಜಿನ ಶಲ್ಯತಂತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಪ್ರಶಾಂತ್ ಸ್ವಾಗತಿಸಿದರು. ಡಾ.ಶ್ರೀನಿಧಿ ಧನ್ಯ ವಂದಿಸಿದರು. ಡಾ.ರಾಕೇಶ್ ಕಾರ್ಯಕ್ರಮ ನಿರೂಪಿಸಿದರು. ಸಹ ಪ್ರಾಧ್ಯಾಪಕರಾದ ಡಾ.ವಿಜೇಂದ್ರ ಭಟ್, ಡಾ.ಯೋಗೇಶ್ ಆಚಾರ್ಯ ಸಹಕರಿಸಿದರು.