ಮಹಿಳೆಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಸಾಜಿದುನ್ನಿಸಾ
ಕಾಪು, ಮಾ. 30: ಸಮಾಜದಲ್ಲಿರುವ ಕೆಡುಕನ್ನು ಅಳಿಸುವ ಪ್ರಯತ್ನ ಮಹಿಳೆ ಯರಿಂದ ಪ್ರಾರಂಭವಾದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಈ ಸಮಾಜವು ಮಹಿಳೆಯರಿಂದ ಮುನ್ನಡೆಯುತ್ತಿದೆ. ಮಹಿಳೆಯರು ಉತ್ತಮ ರಾಗಿದ್ದರೆ ಸಮಾಜ ಉತ್ತಮವಾಗುತ್ತದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ರಾಜ್ಯ ಸಂಚಾಲಕಿ ಮೊಹತರಮಾ ಸಾಜಿದುನ್ನಿಸಾ ಹುಬ್ಬಳ್ಳಿ ಹೇಳಿದ್ದಾರೆ.
ಜಮಾಅತೆ ಇಸ್ಲಾಮೀ ಹಿಂದ್ ಕಾಪು ಮಹಿಳೆ ವರ್ತುಲ ವತಿಯಿಂದ ಕೊಪ್ಪಲಂಗಡಿ ಕಮ್ಯುನಿಟಿ ಹಾಲ್ನಲ್ಲಿ ಮಹಿಳೆಯರಿಗಾಗಿ ಇತ್ತೀಚೆಗೆ ಆಯೋಜಿಸಲಾದ ಸಮಾಜದಲ್ಲಿ ಒಳಿತಿನ ಬೆಳಕನ್ನು ಹರಡಿರಿ ಎಂಬ ಮಹಿಳಾ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಮಾನವನು ಸಮಾಜದಲ್ಲಿರುವ ಕೆಡುಕನ್ನು ಅಳಿಸಿ, ಒಳಿತನ್ನು ಸಂಸ್ಥಾಪಿಸುತ್ತ ಜನರಿಗಾಗಿ ಬದುಕಿ ಬಾಳಬೇಕು. ಈ ಬಗ್ಗೆ ಮಹಿಳೆಯರು ತಮ್ಮ ಮನೆಯ ಪುರುಷರಿಗೆ ಪ್ರೇರೇಪಣೆ ನೀಡಬೇಕು. ಮಹಿಳೆಯರಾದ ನಾವು ಸಮಾಜದಲ್ಲಿ ಲೋಟಿಕೋರಿತನ, ಲಂಚ, ಅನ್ಯಾಯ, ಅಕ್ರಮ, ಅತ್ಯಾಚಾರಗಳನ್ನು ವಿರೋಧಿಸಬಲ್ಲೆವು, ಒಳಿತನ್ನು ಹರಡಬಲ್ಲೆವು, ನಾವು ಇದನ್ನು ಸಾಧಿಸಬಲ್ಲೆವು ಎಂಬ ದೃಢ ನಿರ್ಧಾರದೊಂದಿಗೆ ಮುಂದುವರಿಯಬೇಕೆಂದರು.
ಮಹಿಳಾ ವಿಭಾಗ ರಾಜ್ಯ ಸಹಸಂಚಾಲಕಿ ಕುಲ್ಸೂಮ್ ಅಬೂಬಕರ್ ಉಡುಪಿ ಮಾಧ್ಯಮಗಳ ಪ್ರಭಾವ ಮತ್ತು ಮಕ್ಕಳ ತರಬೇತಿಯ ಬಗ್ಗೆ ಮಾತನಾ ಡಿದರು. ಇಸ್ಲಾಮಿನ ಕೌಟುಂಬಿಕ ವಿಷಯಗಳ ವಿಷಯದಲ್ಲಿ ಮಾಜಿದಾ ಮಲ್ಪೆ ಉಪನ್ಯಾಸ ನೀಡಿದರು. ಸಾಮಾಜಿಕ ಕೆಡುಕುಗಳು ಮತುತಿ ಅಪಪ್ರಚಾರ ಎಂಬ ವಿಷಯದಲ್ಲಿ ಮೆಹರುನ್ನಿಸಾ ಮಣಿಪಾಲ ವಿಷಯ ಮಂಡಿಸಿದರು.
ತನ್ವೀರ್ ಕಾರ್ಕಳ ಕುರಾನ್ ಪಠಿಸಿದರು. ಮಹಿಳಾ ವಿಭಾಗದ ಜಿಲ್ಲಾ ಸಂಚಾಲಕಿ ಜಮೀಲಾ ಸದೀದಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಹಮತುನ್ನಿಸಾ ವಂದಿಸಿದರು. ಮಹಿಳಾ ವರ್ತುಲದ ಸಂಚಾಲಕಿ ಶೆಹನಾಝ್ ಕಾಪು ಕಾರ್ಯಕ್ರಮ ನಿರೂಪಿಸಿದರು.