ಲೋಕಸಭಾ ಚುನಾವಣೆ: ಜಿಲ್ಲೆಯಿಂದ 17 ಮಂದಿ ಗಡಿಪಾರು
ಪ್ರತಿಬಂಧಕ ಕಾಯ್ದೆಯಡಿ 1,533 ಪ್ರಕರಣ ದಾಖಲು
ಮಂಗಳೂರು, ಮಾ. 30: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ 17 ಮಂದಿ ಗಡಿಪಾರಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಪ್ರತಿಬಂಧಕ ಕಾಯ್ದೆಯಡಿ 1,533 ಪ್ರಕರಣ ದಾಖಲಿಸಲಾಗಿದ್ದು, ಕಾನೂನು ಬಾಹಿರ ಕೃತ್ಯಗಳಲ್ಲಿ ಹಾಗೂ ಕೆಲವೊಂದು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾ ದವರ ಬಗ್ಗೆ ಮಾಹಿತಿ ಸಂಗ್ರಹಿಸಿ ಗಡಿಪಾರು ಆದೇಶ ಹೊರಡಿಸಲಾಗಿದೆ.
ತಪಾಸಣೆಗೆ ಈಗಾಗಲೇ 21 ಚೆಕ್ಪೋಸ್ಟ್ಗಳನ್ನು ತೆರೆಯಲಾಗಿದ್ದು, ದಿನಂಪ್ರತಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಈವರೆಗೆ 13,79,000 ರೂ. ಜಫ್ತಿ ಮಾಡಲಾಗಿದೆ. ನಗರಕ್ಕೆ ಈಗಾಗಲೇ 1 ಸಿಆರ್ಪಿಎಫ್ ತುಕಡಿ ಆಗಮಿಸಿದ್ದು, 29 ಸೂಕ್ಷ್ಮ ಪ್ರದೇಶಗಳಲ್ಲಿ ಪಥಸಂಚಲನ ನಡೆಸಲಾಗಿದೆ. ವಾರೆಂಟ್ ಗಳ ಪೈಕಿ 2,996 ಮಂದಿಗೆ ಜಾಮೀನು ರಹಿತ ವಾರಂಟ್ಗಳನ್ನು ಜಾರಿ ಮಾಡಲಾಗಿದೆ.
ಕಮಿಷನರೇಟ್ ವ್ಯಾಪ್ತಿಯಲ್ಲಿರುವ 2,011 ಆಯುಧಗಳ ಪೈಕಿ 1,952 ಆಯುಧಗಳನ್ನು ಡೆಪಾಸಿಟ್ ಮಾಡಲಾಗಿದ್ದು, ಉಳಿದ 58 ಆಯುಧಗಳಿಗೆ ವಿನಾಯಿತಿ ನೀಡಲಾಗಿದೆ. ಇದು ಮಾತ್ರವಲ್ಲದೆ, ಎಲ್ಲ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಚುನಾವಣಾ ಕರ್ತವ್ಯದ ಬಗ್ಗೆ ತರಬೇತಿ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತರ ಪ್ರಕಟನೆ ತಿಳಿಸಿದೆ.