ಕಾಂಗ್ರೆಸ್ನಿಂದ ಜಾತಿ ರಾಜಕಾರಣ: ಬಿಜೆಪಿ ಆರೋಪ
ಮಂಗಳೂರು, ಮಾ.30: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ, ಸಂಸದ ನಳಿನ್ ಕುಮಾರ್ರ ಸಾಧನೆ, ಜನಪ್ರಿಯತೆಯನ್ನು ಸಹಿಸದ ಕಾಂಗ್ರೆಸ್ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಟಿವಿ ವಾಹಿನಿಯೊಂದನ್ನು ಬಳಸಿ ಅಪಪ್ರಚಾರದಲ್ಲಿ ತೊಡಗಿದೆ. ಜಾತ್ಯತೀತ ಪಕ್ಷ ಎನ್ನುವ ಕಾಂಗ್ರೆಸ್ಸಿಗರು ಅಪಪ್ರಚಾರಕ್ಕೆ ಜಾತಿಯ ಹೆಸರು ಬಳಸಿ ಹಿಂದೂ ಸಮಾಜವನ್ನು ಒಡೆಯುವ ಷಡ್ಯಂತ್ರ ನಡೆಸಿದ್ದಾರೆ ಎಂದು ಬಿಜೆಪಿ ದ.ಕ. ಚುನಾವಣಾ ಕಾನೂನು ವಿಭಾಗದ ಪ್ರಮುಖ್ ಕೆ. ಶಂಭು ಶರ್ಮ ಆರೋಪಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನಾಯಕರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈಯ ಹೆಸರಿನಲ್ಲಿ ಕರಪತ್ರವೊಂದನ್ನು ಮುದ್ರಿಸಿ, ಜಾತಿ ಹೆಸರಿನಲ್ಲಿ ಮತ ನೀಡುವಂತೆ ತಿಳಿಸಿದ್ದರು.
ನಳಿನ್ ಕುಮಾರ್ ಕಟೀಲು ಸಹಿತ ಕೆಲ ನಾಯಕರ ಹೆಸರನ್ನು ಅದರಲ್ಲಿ ನಮೂದಿಸಿದ್ದರು. ತಮ್ಮ ಹೆಸರಿನಲ್ಲಿ ಇಂತಹ ಕರಪತ್ರ ಮುದ್ರಣವಾಗಿದೆ ಎಂದು ತಿಳಿಯುತ್ತಿದ್ದಂತೆ ಮಾಲಾಡಿ ಪೊಲೀಸ್ ಆಯುಕ್ತರಿಗೆ ದೂರು ನೀಡಿ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದರು. ಮಾಧ್ಯಮಗಳಲ್ಲೂ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಅಜಿತ್ ಕುಮಾರ್ ಮಾಲಾಡಿ ಪೊಲೀಸ್ ಆಯುಕ್ತರಿಗೆ ನೀಡಿದ ದೂರನ್ನು ತಿರುಚಿ ಖಾಸಗಿ ಟಿವಿ ವಾಹಿನಿಯೊಂದು ಸುಳ್ಳು ಸುದ್ದಿ ಸೃಷ್ಟಿಸಿ ಪ್ರಸಾರ ಮಾಡಿದೆ. ಮಾಲಾಡಿ ಅವರು ನಳಿನ್ ವಿರುದ್ಧ ದೂರು ನೀಡಿದ್ದಾರೆ ಎಂಬ ಸುಳ್ಳು ಸುದ್ದಿ ಪ್ರಸಾರ ಮಾಡಿದೆ. ಬಿಜೆಪಿ ಅಭ್ಯರ್ಥಿ ಮಾಲಾಡಿ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಕಪೋಲಕಲ್ಪಿತ ವರದಿಯನ್ನು ಚುನಾವಣೆ ಸಂದರ್ಭ ಸ್ಥಾಪಿತ ಹಿತಾಸಕ್ತಿ ಉದ್ದೇಶ ಇಟ್ಟುಕೊಂಡು ಪ್ರಸಾರ ಮಾಡಿದ್ದು ಸಂಶಯಕ್ಕೆ ಎಡೆ ಮಾಡಿದೆ. ಮಾಲಾಡಿಯವರು ನಳಿನ್ ವಿರುದ್ಧ ಯಾವುದೇ ದೂರು ನೀಡಿಲ್ಲ. ಆದರೂ ಖಾಸಗಿ ವಾಹಿನಿ ಕಾಂಗ್ರೆಸ್ ಅಭ್ಯರ್ಥಿಗೆ ಸಹಾಯ ಮಾಡುವ ಉದ್ದೇಶದಿಂದ ಸುಳ್ಳು ಸುದ್ದಿ ಪ್ರಸಾರ ಮಾಡಿ ಆ ಪಕ್ಷದ ಕೈಗೊಂಬೆಯಾಗಿ ವರ್ತಿಸುತ್ತಿರುವುದು ಕಂಡು ಬಂದಿದೆ. ಇದು ಪತ್ರಿಕಾಧರ್ಮಕ್ಕೆ ಎಸಗಿದ ಅಪಚಾರವಾಗಿದ್ದು, ಇಂತಹ ನೀಚ ರಾಜಕಾರಣ ಖಂಡನೀಯ ಎಂದರಲ್ಲದೆ ಸುಳ್ಳು ಸುದ್ದಿಯನ್ನು ಹಬ್ಬಿಸಿ ಸಮಾಜವನ್ನು ಒಡೆಯಲು ಯತ್ನಿಸುತ್ತಿರುವ ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗ ಮತ್ತು ಮಂಗಳೂರು ಪೊಲೀಸ್ ಕಮೀಷನರ್ಗೆ ದೂರು ನೀಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಕಾನೂನು ಪ್ರಕೋಷ್ಠದ ಪ್ರಮುಖರಾದ ಸುಧಾಕರ ಜೋಷಿ, ಜಗದೀಶ ಶೇಣವ, ಸಂತೋಷ್ ನಾಯಕ್, ರಾಮಕೃಷ್ಣ ಶೆಟ್ಟಿ, ಪುರಂದರ ರೈ ಉಪಸ್ಥಿತರಿದ್ದರು.