ಪುತ್ತೂರು ಜೆಡಿಎಸ್ ಕಾರ್ಯಾಧ್ಯಕ್ಷ ಸ್ಥಾನದಿಂದ ಅಬ್ದುಲ್ ರಹಿಮಾನ್ ಯುನಿಕ್ ವಿಮುಕ್ತಿ
ಕಾರ್ಯಕರ್ತರ ಆಕ್ರೋಶ: ಆದೇಶ ಹಿಂಪಡೆಯದಿದ್ದಲ್ಲಿ ಸಾಮೂಹಿಕ ರಾಜೀನಾಮೆ ಎಚ್ಚರಿಕೆ
ಪುತ್ತೂರು: ಪುತ್ತೂರು ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಾಧ್ಯಕ್ಷರಾಗಿದ್ದ ಅಬ್ದುಲ್ ರಹಿಮಾನ್ ಯುನಿಕ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಮುಕ್ತಿಗೊಳಿಸಿ ಜೆಡಿಎಸ್ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ ವಿಟ್ಲ ಆದೇಶಿಸಿದ್ದಾರೆ.
ಅಬ್ದುಲ್ ರಹಿಮಾನ್ ಅವರನ್ನು ಕಾರ್ಯಾಧ್ಯಕ್ಷ ವಿಮುಕ್ತಿಗೊಳಿಸಿರುವುದರ ವಿರುದ್ಧ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾಗಿದೆ. ತಕ್ಷಣವೇ ಆದೇಶವನ್ನು ಹಿಂಪಡೆಯದಿದ್ದಲ್ಲಿ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಕಾರ್ಯಕರ್ತರು ಎಚ್ಚರಿಸಿದ್ದಾರೆ.
ಪಕ್ಷದ ಗಮನಕ್ಕೆ ತಾರದೆ ಹಾಗೂ ಪಕ್ಷದ ನಿಲುವಿಗೆ ವಿರುದ್ದವಾಗಿ ಮಾ. 28ರಂದು ಪದಾಧಿಕಾರಿಗಳನ್ನು ಸೇರಿಸಿಕೊಂಡು ದರ್ಬೆ ಬುಶ್ರಾ ಟವರ್ಸ್ನ ಮಹಡಿಯಲ್ಲಿ ಸಭೆ ನಡೆಸಿರುವ ಅಬ್ದುಲ್ ರಹಿಮಾನ್ ಯುನಿಕ್ರವರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದಲ್ಲಿ ತಟಸ್ಥರಾಗಿರುವುದಾಗಿ ಹೇಳಿಕೆ ನೀಡಿರುವ ಕಾರಣ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ. ಮುಂದೆ ಅವರು ಯಾವುದೇ ರೀತಿಯ ಹೇಳಿಕೆ, ಪ್ರತಿಕ್ರಿಯೆಯನ್ನು ಬಹಿರಂಗವಾಗಿ ನೀಡದಿರುವಂತೆಯೂ ಜಿಲ್ಲಾಧ್ಯಕ್ಷರು ಸೂಚನೆ ನೀಡಿದ್ದಾರೆ.
ಕಾರ್ಯಕರ್ತರಿಂದ ವಿರೋಧ: ಸಾಮೂಹಿಕ ರಾಜೀನಾಮೆ ಎಚ್ಚರಿಕೆ
ಪಕ್ಷದ ಮುಖಂಡರ ಗಮನಕ್ಕೆ ತಾರದೇ ಸಭೆ ನಡೆಸಿದ್ದಾರೆ ಎಂದು ಜೆಡಿಎಸ್ ಪುತ್ತೂರು ತಾಲೂಕು ಕಾರ್ಯಧ್ಯಕ್ಷ ಅಬ್ದುಲ್ ರಹಿಮಾನ್ ಯುನಿಕ್ ರನ್ನು ಪಕ್ಷದ ಹುದ್ದೆಯಿಂದ ವಿಮುಕ್ತಿಗೊಳಿಸಿರುವ ಪಕ್ಷದ ಜಿಲ್ಲಾಧ್ಯಕ್ಷರ ನಿಲುವಿಗೆ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿದೆ.
27 ವರ್ಷದಿಂದ ಜೆಡಿಎಸ್ ಪಕ್ಷವನ್ನು ತಾಲೂಕಿನಲ್ಲಿ ಕಟ್ಟಿ ಬೆಳೆಸಿದ ಹಾಗೂ ಗ್ರಾಮೀಣ ಮಟ್ಟದಲ್ಲಿ ಪಕ್ಷಕ್ಕಾಗಿ ನಿಸ್ವಾರ್ಥ ಸೇವೆ ಮಾಡುತ್ತಿರುವ ಅಬ್ದುಲ್ ರಹಿಮಾನ್ ಯುನಿಕ್ ರನ್ನು ಪಕ್ಷದ ಸ್ಥಾನದಿಂದ ವಿಮುಕ್ತಿಗೊಳಿಸುವ ಮೂಲಕ ಅವಮಾನ ಮಾಡಲಾಗಿದೆ. ಈ ಮೂಲಕ ಜಿಲ್ಲಾಧ್ಯಕ್ಷರು ಸರ್ವಾಧಿಕಾರಿ ದೋರಣೆ ತೋರಿದ್ದಾರೆ. ಇದು ಪಕ್ಷದ ಅವನತಿಗೆ ಕಾರಣವಾಗಬಹುದು ಎಂಬ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ.
ಹಲವಾರು ಜನಪರ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಪಕ್ಷವನ್ನು ತಾಲೂಕಿನಲ್ಲಿ ಕಟ್ಟಿ ಬೆಳೆಸುತ್ತಿರುವ ಅಬ್ದುಲ್ ರಹಿಮಾನ್ ಯುನಿಕ್ ರವರ ವಿರುದ್ಧ ವ್ಯವಸ್ಥಿತ ಷಡ್ಯಂತರವನ್ನು ನಡೆಸಲಾಗುತ್ತಿದೆ, ಪಕ್ಷದಲ್ಲಿ ಜಿಲ್ಲೆಯ ಬಲಿಷ್ಟ ನಾಯಕರಾಗಿ ಬೆಳೆಯುತ್ತಿರುವ ಅಬ್ದುಲ್ ರಹಿಮಾನ್ ಯುನಿಕ್ ವಿರುದ್ಧ ಕೆಲ ನಾಯಕರು ಈ ಮೂಲಕ ಸೇಡು ತೀರಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ. ಪಕ್ಷದ ನಾಯಕರು ನಿಲುವು ಬದಲಿಸಿ ಅಬ್ದುಲ್ ರಹಿಮಾನ್ ಯುನಿಕ್ ಅವರ ವಿಮುಕ್ತಿ ಆದೇಶವನ್ನು ಹಿಂಪಡೆಯದಿದ್ದಲ್ಲಿ ಸಾಮೂಹಿಕ ರಾಜೀನಾಮೆ ನೀಡುವ ಎಚ್ಚರಿಕೆಯನ್ನು ನೀಡಿದ್ದಾರೆ.
ಕಳೆದ 27 ವರ್ಷದಿಂದ ಪಕ್ಷಕ್ಕಾಗಿ ದುಡಿದ್ದಿದ್ದೇನೆ. ಕಾರ್ಯಾಧ್ಯಕ್ಷ ಹುದ್ದೆಗೇರಿದ ಬಳಿಕ ಆ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸುತ್ತಾ ಬಂದಿದ್ದೇನೆ. ಮೈತ್ರಿ ಅಭ್ಯರ್ಥಿಯ ಗೆಲುವಿಗಾಗಿ ನಮ್ಮ ಕಾರ್ಯಕರ್ತರನ್ನೂ ಕಾರ್ಯಪ್ರವೃತಗೊಳಿಸುವ ಉದ್ದೇಶ ದಿಂದ ಇತ್ತೀಚೆಗೆ ಸಭೆ ಕರೆಯಲಾಗಿತ್ತು. ಮೈತ್ರಿ ಧರ್ಮದ ಪಾಲನೆಯಾಗಬೇಕೆಂಬ ಸಲಹೆಯನ್ನು ಮಾತ್ರ ನೀಡಲಾಗಿತ್ತು. ಇದನ್ನೇ ಕೆಲವರು ತಮ್ಮ ದುರುದ್ದೇಶಕ್ಕೆ ಬಳಸಿಕೊಂಡಿದ್ದಾರೆ. ಇದರಿಂದ ನನ್ನನ್ನು ರಾಜಕೀಯವಾಗಿ ಕುಗ್ಗಿಸಬಹುದು ಎಂದು ಕೆಲವರು ಅಂದುಕೊಂಡಿದ್ದರೆ ಅದು ಮೂರ್ಖತನ. ಈ ಎಲ್ಲಾ ಬೆಳವಣಿಗೆ ಹೈಕಮಾಂಡ್ ಗಮನಿಸುತ್ತದೆ ಎಂದು ನಂಬಿದ್ದೇನೆ. ನನ್ನ ಬೆಂಬಲಿಗರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ.
-ಅಬ್ದುಲ್ ರಹಿಮಾನ್ ಯುನಿಕ್