ಉಡುಪಿ ಪ್ರಸಾದ್ ನೇತ್ರಾಲಯದಲ್ಲಿ ಡ್ರೈ ಐ ಕ್ಲಿನಿಕ್ ಉದ್ಘಾಟನೆ
ಉಡುಪಿ, ಮಾ.31: ಉಡುಪಿ ಪ್ರಸಾದ್ ನೇತ್ರಾಲಯ ಸುಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಡ್ರೈ ಐ ಕ್ಲಿನಿಕ್ ಉದ್ಘಾಟನೆ, ಎನ್ಎಬಿಎಚ್ ಮಾನ್ಯತಾ ಪ್ರಮಾಣ ಪತ್ರದ ಅನಾವರಣ ಮತ್ತು ಅಂಬ್ಯುಲೆನ್ಸ್ ಹಸ್ತಾಂತರ ಕಾರ್ಯಕ್ರಮವು ರವಿವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಗುಣಮಟ್ಟದ ಸೇವೆಯೇ ಆಸ್ಪತ್ರೆಯ ಯಶಸ್ವಿಗೆ ಕಾರಣವಾಗುತ್ತದೆ. ಈ ಮೂಲಕ ಪ್ರಸಾದ್ ನೇತ್ರಾಲಯ ಉಡುಪಿ ಯ ಕಣ್ಮಣಿಯಾಗಿ ಕಂಗೊಳಿಸುತ್ತಿದೆ. ಮುಂದೆಯೂ ಇದಕ್ಕೆ ಮತ್ತಷ್ಟು ಕೀರ್ತಿ ಹಾಗೂ ಶ್ರೇಯಸ್ಸು ದೊರೆಯಲಿ ಎಂದು ಹಾರೈಸಿದರು.
ಡ್ರೈ ಐ ಕ್ಲಿನಿಕ್ ಉದ್ಘಾಟಿಸಿದ ಮಣಿಪಾಲ ಮಾಹೆ ಪ್ರೊಚಾನ್ಸೆಲರ್ ಡಾ. ಎಚ್.ಎಸ್.ಬಲ್ಲಾಳ್ ಮಾತನಾಡಿ, ಹವಮಾನ ವೈಪರೀತ್ಯದಿಂದಾಗಿ ಕಣ್ಣಿನ ಒಣಗುವಿಕೆ ಸಮಸ್ಯೆ ಉಂಟಾಗುತ್ತದೆ. ಇದಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದರೆ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ಇರುತ್ತದೆ. ಇದೀಗ ಪ್ರಸಾದ್ ನೇತ್ರಾಲಯದಲ್ಲಿ ಆರಂಭಿಸಲಾಗಿರುವ ಈ ಕ್ಲಿನಿಕ್ ಕಣ್ಣಿನ ಒಣಗುವಿಕೆ ಸಮಸ್ಯೆಗೆ ವರದಾನವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಸಿಂಡಿಕೇಟ್ ಸದಸ್ಯ ಪ್ರೊ.ಯು.ಟಿ. ಇಫ್ತಿಖಾರ್, ಉದ್ಯಮಿ ಪುರು ಷೋತ್ತಮ ಶೆಟ್ಟಿ, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ನಿರ್ದೇಶಕ ಡಾ.ಪಿ.ಎಲ್. ನಟರಾಜ್, ನಿವೃತ್ತ ಪ್ರೊಫೆಸರ್ ಡಾ.ಸುರೇಂದ್ರ ಶೆಟ್ಟಿ, ಕಟಪಾಡಿ ಗ್ಲೋಬಲ್ ಅರ್ಥ್ ಮೂವರ್ನ ದಯಾನಂದ ಶೆಟ್ಟಿ, ತೊಶ್ಬ್ರೊ ಮೆಡಿಕಲ್ಸ್ನ ನಿರ್ದೇಶಕಿ ಶೆಹನಾಜ್ ತಂಹಾನೆ, ನೇತ್ರಾಲಯದ ನಿರ್ದೇಶಕ ಕೆ. ರಘುರಾಮ್ ರಾವ್ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ವಹಿಸಿದ್ದರು. ಈ ಸಂದರ್ಭದಲ್ಲಿ ಎನ್ಎಬಿಎಚ್ ಮಾನ್ಯತಾ ಪ್ರಮಾಣ ಪತ್ರವನ್ನು ಅನಾವರಣ ಗೊಳಿಸಲಾಯಿತು. ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವೈದ್ಯರುಗಳನ್ನು ಅಭಿಂದಿಸಲಾಯಿತು. ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣಪ್ರಸಾದ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ್ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.