ಚುನಾವಣೆಯಲ್ಲಿ ಸ್ಪರ್ಧಿಸುವುದನ್ನೇ ಹವ್ಯಾಸವಾಗಿಸಿಕೊಂಡ ಸುಪ್ರಿತ್ !
ಮಂಗಳೂರು, ಮಾ.31: ನಗರದ ಕಾವೂರು ನಿವಾಸಿಯಾಗಿರುವ ಸುಪ್ರೀತ್ ಕುಮಾರ್ ಪೂಜಾರಿ ಕಳೆದ 10 ವರ್ಷದಿಂದ ಲೋಕಸಭೆ ಅಥವಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನೇ ಹವ್ಯಾಸವಾಗಿಸಿಕೊಂಡಿದ್ದಾರೆ.
42ರ ಹರೆಯದ ಸುಪ್ರಿತ್ ಕುಮಾರ್ ಪೂಜಾರಿ ಡಿಪ್ಲೊಮಾ ಇಲೆಕ್ಟ್ರಾನಿಕ್ಸ್ ಕಲಿತಿದ್ದು, ಸರಕಾರಿ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ಒದಗಿಸಿಕೊಡಲು ಕೇಂದ್ರವೊಂದನ್ನು ತೆರೆದಿದ್ದಾರೆ. ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಮೊದಲ ದಿನವೇ ಲೋಕ್ ತಾಂತ್ರಿಕ್ ಪಕ್ಷದ ಹೆಸರಿನಿಂದ ಸುಪ್ರಿತ್ ಕುಮಾರ್ ಪೂಜಾರಿ ನಾಮಪತ್ರ ಸಲ್ಲಿಸಿ ಗಮನ ಸೆಳೆದಿದ್ದಾರೆ. ಅಂದಹಾಗೆ, ಲೋಕ್ ತಾಂತ್ರಿಕ್ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದರೂ ಬಿಫಾರ್ಮ್ ಸಿಗದ ಕಾರಣ ಹಿಂದೂಸ್ಥಾನ ಜನತಾ ಪಾರ್ಟಿಯಿಂದ ಬಿಫಾರ್ಮ್ ಪಡೆದು ಕಣದಲ್ಲಿದ್ದಾರೆ. ಅಷ್ಟೇ ಅಲ್ಲ ಹೂಕೋಸು ಚಿಹ್ನೆ ಪಡೆದುಕೊಂಡಿದ್ದಾರೆ.
2008ರ ವಿಧಾನಸಭಾ ಚುನಾವಣೆಗೆ ಮಂಗಳೂರು ಉತ್ತರ ಕ್ಷೇತ್ರದಿಂದ ಸಂಯುಕ್ತ ಜನತಾದಳದಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದ ಸುಪ್ರಿತ್, ನಿಯಮ ದಂತೆ ಖರ್ಚು ವೆಚ್ಚಗಳ ಮಾಹಿತಿ ಕೊಟ್ಟಿರಲಿಲ್ಲ. 2009ರಲ್ಲಿ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರೂ ಕೂಡ ಹಿಂದಿನ ಚುನಾವಣೆಯ ಲೆಕ್ಕಪತ್ರ ನೀಡದ ಕಾರಣ ಅವರ ಹೆಸರು ತಿರಸ್ಕೃತಗೊಂಡಿತ್ತು.
2013ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಮಂಗಳೂರು ಉತ್ತರ ಕ್ಷೇತ್ರದಿಂದ ಎನ್ಸಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ನಂತರ ಹೆಬ್ಬಾಳ ಕ್ಷೇತ್ರದ ಉಪಚುನಾವಣೆ ಮತ್ತು 2014ರ ಲೋಕಸಭೆ ಚುನಾವಣೆಗೆ ದಕ್ಷಿಣ ಕನ್ನಡದಿಂದ ಎಚ್ಜೆಪಿಯಿಂದ ಸ್ಪರ್ಧಿಸಿದ್ದರು. 2012ರ ಉಡುಪಿ ಲೋಕಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿ, ಬಳಿಕ ಹಿಂದಕ್ಕೆ ಪಡೆದಿದ್ದರು.
2018ರ ಚುನಾವಣೆಯಲ್ಲಿ ಮಂಗಳೂರು ಉತ್ತರದಿಂದ ಲೋಕ ಅವಾಝ್ ದಳ ಮತ್ತು ದಕ್ಷಿಣ ಕ್ಷೇತ್ರದಿಂದ ಹಿಂದೂಸ್ತಾನ್ ಜನತಾ ಪಾರ್ಟಿ ಹೀಗೆ ಎರಡು ಕ್ಷೇತ್ರದಿಂದ ಎರಡು ಪಕ್ಷದಿಂದ ಸ್ಪರ್ಧಿಸಿ ದಾಖಲೆಯನ್ನೂ ಮಾಡಿದ್ದರು. ಕಳೆದ ಶಿಕಾರಿಪುರ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿ, ಹಿಂದಕ್ಕೆ ಪಡೆದು ಗಮನ ಸೆಳೆದಿದ್ದರು.
ನನಗೆ ನನ್ನದೇ ಆದ ಸ್ನೇಹಿತರ ಬಳಗವಿದೆ. ನಾಮಪತ್ರದ ಸಲ್ಲಿಕೆಯ ಮೊತ್ತವನ್ನು ಈ ಸ್ನೇಹಿತರೇ ಭರಿಸುತ್ತಾರೆ. ನಾನೇನು ಮತಪ್ರಚಾರಕ್ಕಾಗಿ ಲಕ್ಷ-ಲಕ್ಷ ಹಣ ಸುರಿಯುದಿಲ್ಲ. ಕನಿಷ್ಠ ಹಣದಿಂದ ಗರಿಷ್ಠ ಮತಗಳನ್ನು ಪಡೆಯಲು ಪ್ರಯತ್ನಿಸುತ್ತೇನೆ. ಕ್ಷೇತ್ರ ವ್ಯಾಪ್ತಿಯ ಎಲ್ಲಾ ಮನೆಗೂ ಹೋಗಲಾಗದಿದ್ದರೂ ಕೂಡ ಸಾಧ್ಯವಾದಷ್ಟು ವುನೆಗೆ ತೆರಳಿ ಮತ ಯಾಚಿಸುತ್ತೇನೆ. ಚುನಾವಣೆಯಲ್ಲಿ ಸ್ಪರ್ಧಿಸಲು ಹಣ ಮಾತ್ರ ಮುಖ್ಯವಲ್ಲ. ಹಣವಿಲ್ಲದ ಜನಸಾಮಾನ್ಯರೂ ಸ್ಪರ್ಧಿಸಬಹುದು.
ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಮಾತ್ರ ಸಮರ್ಥ ಅಭ್ಯರ್ಥಿಗಳಿರುವುದಲ್ಲ. ಇತರ ಪಕ್ಷ ಅಥವಾ ಪಕ್ಷೇತರರೂ ಕಣದಲ್ಲಿದ್ದಾರೆ ಎಂಬುದನ್ನು ತೋರಿಸಿಕೊಡಬೇಕಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜಿಲ್ಲೆಯ ಜನರು ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡುತ್ತೇನೆ’ ಎಂದು ಸುಪ್ರೀತ್ ಕುಮಾರ್ ಪೂಜಾರಿ ಹೇಳುತ್ತಾರೆ.
ಒಟ್ಟಿನಲ್ಲಿ ಕಳೆದ 10 ವರ್ಷದಲ್ಲಿ 7 ಬಾರಿ ಕಣಕ್ಕಿಳಿದು ದಾಖಲೆ ನಿರ್ಮಿಸಲು ಮುಂದಾಗಿರುವ ಸುಪ್ರಿತ್ ಕುಮಾರ್ ಪೂಜಾರಿ ಮಿತಭಾಷಿಯೂ ಹೌದು.