ಇಸ್ಲಾಮ್ನಲ್ಲಿ ಅಸಮಾನತೆಗೆ ಆದ್ಯತೆ ಇಲ್ಲ: ಮೊಯಿದ್ದೀನ್ ಬಾವ
ಉಚ್ಚಿಲ: ಉರೂಸ್ ಪ್ರಯುಕ್ತ ಸೌಹಾರ್ದ ಸಮಾವೇಶ
ಉಳ್ಳಾಲ, ಮಾ. 31: ಮನುಷ್ಯ ಯಾವ ರೀತಿ ಜೀವಿಸಬೇಕು ಎಂದು ಕಲಿಸಿರುವ ಇಸ್ಲಾಂನಲ್ಲಿ ಅಸಮಾನತೆಗೆ ಆದ್ಯತೆ ಇಲ್ಲ, ನಮಾಝ್ ಸಂದರ್ಭ ಶ್ರೀಮಂತ, ಬಡವ, ಮಾಲಕ, ಕಾರ್ಮಿಕ ಎನ್ನುವ ಭೇದವಿಲ್ಲದೆ ಒಂದೇ ಸಾಲಲ್ಲಿ ನಿಲ್ಲುವುದು, ವ್ಯವಹಾರ ಲಾಭದಲ್ಲಿ ಕಡ್ಡಾಯ ದಾನ, ರಂಝಾನ್ ತಿಂಗಳ ಉಪವಾಸ ಸಮಾನತೆಯನ್ನು ಪ್ರತಿಪಾದಿಸುತ್ತದೆ ಎಂದು ಮಾಜಿ ಶಾಸಕ ಮೊಯಿದ್ದೀನ್ ಬಾವ ಅಭಿಪ್ರಾಯಪಟ್ಟರು.
ಸೋಮೇಶ್ವರ ಉಚ್ಚಿಲ 407 ಜುಮಾ ಮಸೀದಿ ಸೈಯದ್ ಶರೀಫ್ ಅಲ್ ಅರಬಿ ವಲಿಯುಲ್ಲಾಹಿ (ಖ.ಸ) ಉರೂಸ್ ನೇರ್ಚೆ ಪ್ರಯುಕ್ತ ರವಿವಾರ ನಡೆದ ಸೌಹಾರ್ದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಎಸ್ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಮಾತನಾಡಿ, ಭಾರತ ಸುಂದರ ದೇಶವಾಗಿದ್ದು 1,600 ಭಾಷೆಗಳನ್ನು ಇಲ್ಲಿ ಮಾತನಾಡಲಾಗು ತ್ತದೆ. ನಮ್ಮ ದೇಶ ಸಂಪದ್ಭರಿತವಾಗಿದ್ದರೂ ಇನ್ನೂ ಬಡತನದಲ್ಲಿರಲು ಸೌಹಾರ್ದತೆಯ ಕೊರತೆ ಕಾರಣ. ಜಗತ್ತೇ ಒಂದು ದೇಶ ಎಂದು ನಾವು ಪರಿಗಣಿಸಿದರೆ ಸೌಹಾರ್ದತೆಗೆ ಯಾವುದೇ ಕೊರತೆ ಬಾರದು. ನ್ಯೂಝಿಲೆಂಡ್ ಮಸೀದಿಯಲ್ಲಿ ದಾಳಿ ನಡೆದ ಬಳಿಕ ಅಲ್ಲಿನ ಪ್ರಧಾನಿಯ ಪ್ರತಿಕ್ರಿಯೆ ಜನರನ್ನು ಮೋಡಿ ಮಾಡುವಲ್ಲಿ ಸಫಲವಾಗಿದೆ ಎಂದು ಹೇಳಿದರು.
ಸೋಮೇಶ್ವರ ಗ್ರಾಪಂ ಉಪಾಧ್ಯಕ್ಷ ರಾಜೇಶ್ ಉಚ್ಚಿಲ್ ಮಾತನಾಡಿ, ಧಾರ್ಮಿಕ ಉತ್ಸವ ಸಂದರ್ಭ ತೊಡಕುಗಳು ಎದುರಾದರೆ ಸರ್ವರೂ ಸೇರಿ ಸರಿಪಡಿಸಬೇಕಿದೆ. ಉಚ್ಚಿಲ ದರ್ಗಾ ಉರೂಸ್ ಊರಿನ ಹಬ್ಬವಾಗಿ ಹೆಸರು ಪಡೆದಿದೆ. ಕಾರ್ಯಕ್ರಮ ಹಾಳುಮಾಡಲು ಯಾರಾದರೂ ಮುಂದಾದರೆ ಊರಿನ ವರೆಲ್ಲರೂ ಸೇರಿ ಪಾಠ ಕಲಿಸಬೇಕು ಎಂದರು.
ಎಸ್ವೈಎಸ್ ರಾಜ್ಯಾಧ್ಯಕ್ಷ ಡಾ.ಎಂ.ಎಸ್.ಎಂ.ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಮುಖ್ಯ ಭಾಷಣ ಮಾಡಿದರು.
ಮಸೀದಿಯ ಮುದರ್ರಿಸ್ ಅಲ್-ಹಾಜ್ ಎಂ.ಪಿ.ಇಬ್ರಾಹಿಮುಲ್ ಫೈಝಿ ಉದ್ಯಾವರ ದುವಾ ಮಾಡಿದರು. ಅಧ್ಯಕ್ಷ ಪಿ.ಎ.ಅಬ್ಬಾಸ್ ಹಾಜಿ ಪೆರಿಬೈಲ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ನ್ಯಾಯವಾದಿ ಮುಝಪ್ಫರ್ ಅಹ್ಮದ್, ಪಂಪ್ವೆಲ್ ತಖ್ವಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಮ್ತಾಝ್ ಅಲಿ, ಫಲಾಹ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯು.ಬಿ.ಮುಹಮ್ಮದ್ ಹಾಜಿ, ಕೋಶಾಧಿಕಾರಿ ಇಸ್ಮಾಯೀಲ್ ನಾಗತೋಟ, ಉದ್ಯಮಿ ಮಜೀದ್ ಹಾಜಿ, ಗ್ರಾಪಂ ಅಧ್ಯಕ್ಷ ರಾಜೇಶ್ ಉಚ್ಚಿಲ್, ಸದಸ್ಯ ಎನ್.ಇಸ್ಮಾಯೀಲ್, ಯು.ಆರ್.ಫುಟ್ಬಾಲ್ ಅಕಾಡಮಿ ಅಧ್ಯಕ್ಷ ಉಮೇಶ್ ಉಚ್ಚಿಲ್, ವಕ್ಫ್ ಸಲಹಾ ಸಮಿತಿ ಸದಸ್ಯ ಉಸ್ಮಾನ್ ಕೊಮರಂಗಳ, ಹೈದರ್ ಪರ್ತಿಪ್ಪಾಡಿ, ಕಿನ್ಯ ಗ್ರಾಪಂ ಉಪಾಧ್ಯಕ್ಷ ಸಿರಾಜ್ ಕಿನ್ಯ ಉಪಸ್ಥಿತರಿದ್ದರು.
ಕಡಬ ರಹ್ಮಾನಿಯಾ ಟೌನ್ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಸ್ವಾಗತಿಸಿದರು. ಉಚ್ಚಿಲ ಮಸೀದಿಯ ಉಪಾಧ್ಯಕ್ಷ ಯು.ಅಬ್ದುಲ್ ಸಲಾಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಯು.ಅಬೂಬಕ್ಕರ್ ಹಾಜಿ ವಂದಿಸಿದರು. ಉರೂಸ್ ಸಮಿತಿಯ ಪ್ರ.ಕಾ.ಅಬ್ದುಲ್ ಸಲಾಂ ಉಚ್ಚಿಲ ಕಾರ್ಯಕ್ರಮ ನಿರೂಪಿಸಿದರು.