ಶಾಲಾ ಬಸ್ನಲ್ಲಿ ದಿಢೀರ್ ಬೆಂಕಿ: ತಪ್ಪಿದ ಸಂಭಾವ್ಯ ಭಾರೀ ದುರಂತ
ಅಪಾಯದಿಂದ ಪಾರಾದ ಮಕ್ಕಳು, ಶಿಕ್ಷಕರು
ಚಿಕ್ಕಮಗಳೂರು, ಎ.1: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಶಾಲಾ ಬಸ್ನಲ್ಲಿ ದಿಢೀರ್ ಬೆಂಕಿ ಕಾಣಸಿಕೊಂಡಿದ್ದು, ಶಿಕ್ಷಕರು, ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಶಾಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾದ ಘಟನೆ ಮೂಡಿಗೆರೆ ತಾಲೂಕಿನ ಮುದ್ದಿನಕೊಪ್ಪ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಕಳಸ ಸಮೀಪದ ಬಸರೀಕಟ್ಟೆ ಗ್ರಾಮದಲ್ಲಿರುವ ಸದ್ಗುರು ವಿದ್ಯಾ ಸಮಿತಿ ಶಾಲೆಗೆ ಸೇರಿರುವ ಬಸ್ನಲ್ಲಿ ತಾಂತ್ರಿಕ ದೋಷದಿಂದ ಹಠಾತ್ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಬಸ್ನ ಮುಂಭಾಗ ಹಾಗೂ ಕೆಲ ವಿದ್ಯಾರ್ಥಿಗಳ ಶಾಲಾ ಬ್ಯಾಗ್ಗಳು, ಪುಸ್ತಕಗಳು ಬೆಂಕಿಗಾಹುತಿಯಾಗಿವೆ ಎಂದು ತಿಳಿದು ಬಂದಿದೆ. ಸೋಮವಾರ ಬೆಳಗ್ಗೆ ಎಂದಿನ ಖಾಸಗಿ ಬಸ್ ಬಾರದ ಕಾರಣ ಸದ್ಗುರು ವಿದ್ಯಾ ಸಮಿತಿ ತಮ್ಮ ಸಂಸ್ಥೆಗೆ ಸೇರಿದ ಕಳಸ, ಹಳುವಳ್ಳಿ, ತಲಗೋಡು, ಬಾಳೆಹೊಳೆ, ತೋಟದೂರು ಮತ್ತಿತರ ಗ್ರಾಮಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಕರೆತರಲು ಶಾಲಾ ವಾಹನವನ್ನು ಕಳಿಸಿತ್ತು. ಅದರಂತೆ ಶಾಲಾ ಬಸ್ ಈ ಮಾರ್ಗದ ಶಾಲಾ ಮಕಳು ಹಾಗೂ ಶಿಕ್ಷಕರನ್ನು ಕರೆದೊಯ್ಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಬಸರೀಕಟ್ಟೆ ಸಮೀಪದ ಮುದ್ದಿನಕೊಪ್ಪಗ್ರಾಮದ ಸಮೀಪ ಬಸ್ ತಲುಪುತ್ತಿದ್ದಂತೆ ಚಾಲಕನ ಪಕ್ಕದಲ್ಲೇ ಹಠಾತ್ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ವಿಚಲಿತನಾದ ಚಾಲಕ ಇಳಿಜಾರು ರಸ್ತೆಯಲ್ಲೇ ಬಸ್ಸನ್ನು ನಿಲ್ಲಿಸಿ ಕೆಳಗೆ ಹಾರಿದ್ದಾನೆ. ಈ ಸಂದರ್ಭ ಬೆಂಕಿ ಬಸ್ನ ಮುಂಭಾಗಕ್ಕೂ ವ್ಯಾಪಿಸಿತ್ತಲ್ಲದೆ ಚಾಲಕನಿಲ್ಲದ ಕಾರಣ ಹಿಮ್ಮುಖವಾಗಿ ಚಲಿಸಲಾರಂಭಿಸಿತ್ತು. ಬಳಿಕ ಕೆಲ ಮೀಟರ್ಗಳ ಅಂತರದಲ್ಲಿದ್ದ ಬಸ್ ನಿಲ್ದಾಣವೊವೊಂದಕ್ಕೆ ಢಿಕ್ಕಿ ಹೊಡೆದು ನಿಂತಿದೆ. ಬಸ್ಸಿನೊಳಗಿಂದ ಮಕ್ಕಳ ಬೊಬ್ಬೆ ಕೇಳಿ ಸ್ಥಳೀಯರು ಸ್ಥಳಕ್ಕಾಗಮಿಸಿದ್ದಾರೆ. ಅಷ್ಟರಲ್ಲಿ ಬಸ್ನಲ್ಲಿದ್ದ ಶಿಕ್ಷಕರು ಕೆಳಗೆ ಹಾರಿ ಕೈಗೆ ಸಿಕ್ಕ ಸೊಪ್ಪಗಳಿಂದ ಬೆಂಕಿಯನ್ನು ನಂದಿಸಿ ಮಕ್ಕಳನ್ನು ಕೆಳಗಿಳಿಸಿದ್ದರಿಂದ ಸಂಭಾವ್ಯ ಭಾರೀ ಅನಾಹುತ ತಪ್ಪಿದೆ ಎಂದು ತಿಳಿದು ಬಂದಿದೆ.
ಬೆಂಕಿ ಅವಘಡದಲ್ಲಿ ಬಸ್ನ ಮುಂಬಾಗ ಸುಟ್ಟು ಕರಕಲಾಗಿದೆ. ಅಲ್ಲದೆ ಶಾಲಾ ಮಕ್ಕಳ ಬ್ಯಾಗ್ಗಳು, ಪುಸ್ತಕಗಳು ಬೆಂಕಿಗೆ ಆಹುತಿಯಾಗಿವೆ. ಬಸ್ ನಿಲ್ದಾಣದ ಹಿಂಬದಿ ಸುಮಾರು 150 ಅಡಿ ಆಳದ ಕಂದಕವಿದ್ದು, ಬಸ್ ನಿಲ್ದಾಣಕ್ಕೆ ಢಿಕ್ಕಿ ಹೊಡೆಯದಿದ್ದಲ್ಲಿ ಕಂದಕಕ್ಕೆ ಉರುಳುವ ಸಾಧ್ಯತೆ ಇತ್ತು. ಸದ್ಯ ಶಾಲಾ ಮಕ್ಕಳು ಬೆಂಕಿ ಅವಘಡದ ಭೀತಿಯಿಂದ ತಲ್ಲಣಗೊಂಡಿದ್ದಾರೆ. ಆದರೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಕೆಲ ಮಕಳು ಹಾಗೂ ಶಿಕ್ಷಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸ್ಥಳೀಯರು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
ಸುದ್ದಿ ತಿಳಿದ ಕಳಸ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆಂದು ತಿಳಿದು ಬಂದಿದೆ.