ಉಡುಪಿ ನಗರದಲ್ಲಿ ಹಣ ಲೂಟಿಗಾಗಿ ನೀರಿನ ಸಮಸ್ಯೆ ಸೃಷ್ಠಿ: ಮಾಸ್ ಇಂಡಿಯಾದಿಂದ ಮತದಾನ ಬಹಿಷ್ಕರಿಸುವ ಎಚ್ಚರಿಕೆ
ಉಡುಪಿ, ಎ.1: ನಗರಕ್ಕೆ ನೀರು ಪೂರೈಸುವ ಬಜೆ ಅಣೆಕಟ್ಟೆಯಲ್ಲಿ ನೀರಿನ ಕೊರತೆ ಇಲ್ಲದಿದ್ದರೂ ಅಧಿಕಾರಿಗಳು ವಿನಾಕಾರಣ ನೀರಿನ ಸಮಸ್ಯೆಯನ್ನು ಹುಟ್ಟುಹಾಕಿ ನಗರಸಭೆಯನ್ನು ಲೂಟಿ ಮಾಡುತ್ತಿದ್ದಾರೆ. ಜಿಲ್ಲಾಡಳಿತ ತಕ್ಷಣ ನಗರದಲ್ಲಿ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸಲಾಗುವುದು ಎಂದು ಮಾಸ್ ಇಂಡಿಯಾ ಎಚ್ಚರಿಕೆ ನೀಡಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಸ್ ಇಂಡಿಯಾ ಕರ್ನಾಟಕ ಅಧ್ಯಕ್ಷ ಜಿ.ಎ.ಕೋಟೆಯಾರ್, ನಗರಸಭೆ ವ್ಯಾಪ್ತಿಯ ಪುತ್ತೂರು ಗ್ರಾಮದ ಕೊಡಂಕೂರು ಪರಿಸರದಲ್ಲಿ 500ಕ್ಕೂ ಅಧಿಕ ಮನೆಗಳಿದ್ದು, ಮೂರು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಜನ ನೀರಿನಲ್ಲಿ ತೊಂದರೆ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಗರಸಭೆ ವ್ಯಾಪ್ತಿಯಲ್ಲಿರುವ ಬಾವಿಗಳನ್ನು ಪುನರುಜ್ಜೀವನಗೊಳಿಸುವುದಾಗಿ ಪೌರಾಯುಕ್ತರು ಹೇಳಿದರೂ ಈವರೆಗೆ ಎಲ್ಲ ಬಾವಿಗಳನ್ನು ಪುನರುಜ್ಜೀವನ ಗೊಳಿಸುವ ಕೆಲಸ ಮಾಡಿಲ್ಲ. ಇದರಿಂದ ಕೆಲವು ಬಾವಿಗಳು ಉಪಯೋಗಕ್ಕೆ ಬಾರದೆ ಹಾಗೆಯೇ ಉಳಿದುಕೊಂಡಿವೆ. ಆದುದರಿಂದ ಈ ಬಾವಿಯ ನೀರನ್ನು ಸ್ವಚ್ಛಗೊಳಿಸಿ ಪರಿಸರದ ಮನೆಗಳಿಗೆ ನೀರು ಪೂರೈಕೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ನಗರಸಭೆ ಕಳೆದ ವರ್ಷ ಸುಮಾರು 95 ಲಕ್ಷ ರೂ. ನೀರಿಗಾಗಿ ಹಣ ಖರ್ಚು ಮಾಡಿದೆ. ಆದರೆ ಕೊಡಂಕೂರು ವಾರ್ಡ್ಗೆ ಕೇವಲ 5ರಿಂದ 6 ಟ್ಯಾಂಕರು ನೀರು ಮಾತ್ರ ಬಂದಿದೆ. ನಮ್ಮ ತೆರಿಗೆ ಹಣವನ್ನು ನಗರಸಭೆ ದುಂದುವೆಚ್ಚ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದುದರಿಂದ ಜಿಲ್ಲಾಧಿ ಕಾರಿಗಳು ನೀರಿನ ಸಮಸ್ಯೆ ಬಗ್ಗೆ ಪರಿಶೀಲಿಸಿ ಬಜೆ ಅಣೆಕಟ್ಟೆಗೆ ಭೇಟಿ ನೀಡಿ ಎರಡು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಕೊಡಂಕೂರು ಮಾಸ್ ಇಂಡಿಯಾ ಅಧ್ಯಕ್ಷ ರವಿರಾಜ್ ಶೆಟ್ಟಿ ಮಾತನಾಡಿ, ನಮ್ಮ ಮನೆಗಳಲ್ಲಿ ನೀರು ಸಂಗ್ರಹಕ್ಕೆ 500-1000 ಲೀಟರ್ ಸಾಮರ್ಥ್ಯದ ಟ್ಯಾಂಕ್ಗಳು ಮಾತ್ರ ಇವೆ. ಆದುದರಿಂದ ಮೂರು ದಿನಗಳಿಗೊಮ್ಮೆ ಐದಾರು ಗಂಟೆಗಳ ಕಾಲ ನೀರು ಬಿಡುವ ಬದಲು ದಿನ ಬಿಟ್ಟು ದಿನ ಎರಡು ಗಂಟೆ ನೀರು ಒದಗಿಸಿದರೆ ಉತ್ತಮ. ನಮಗೆ ನೀರು ಒದಗಿಸಲು ಸಾಧ್ಯವಾಗದವರಿಗೆ ನಾವು ಯಾಕೆ ಮ ಹಾಕಬೇಕು ಎಂದು ಪ್ರಶ್ನಿಸಿದರು.
ನಿಟ್ಟೂರಿನ ಶುದ್ದೀಕರಣ ಘಟಕದಿಂದ ತ್ಯಾಜ್ಯ ನೀರನ್ನು ನೇರವಾಗಿ ಕಲ್ಮಾಡಿಗೆ ಹೊಳೆಗೆ ಬೀಡಲಾಗುತ್ತಿದೆ. ಇದರಿಂದ ಇಡೀ ಪರಿಸರ ದುರ್ನಾತ ಬೀರುತ್ತಿದೆ. ಅಲ್ಲದೆ ಕೊಡಂಕೂರು ಸಾಯಿಬಾಬಾ ದೇವಸ್ಥಾನ ಸಮೀಪದ ಕಂಬಳಕಟ್ಟದಲ್ಲಿ ರುವ ಕಿಂಡಿ ಅಣೆಕಟ್ಟಿನ ಹಲಗೆಯನ್ನು ಬೇಸಿಗೆಯಾದರೂ ತೆಗೆಯದ ಕಾರಣ ಪರಿಸರದಲ್ಲಿ ಸಾಂಕ್ರಾಮಿಕ ರೋಗ ಹರಡುವ ಬೀತಿ ಎದುರಾಗಿದೆ. ಈ ಬಗ್ಗೆ ಸ್ಥಳೀಯ ನಗರಸಭೆ ಸದಸ್ಯರಲ್ಲಿ ಪ್ರಶ್ನಿಸಿದರೆ ಅವರು ಅಸಹಾಯಕರಂತೆ ಉತ್ತ ರಿಸುತ್ತಾರೆ ಎಂದು ಸ್ಥಳೀಯರಾದ ಅಶೋಕ್ ಪೂಜಾರಿ ಕೊಡಂಕೂರು ದೂರಿದರು.
ಸುದ್ದಿಗೋಷ್ಟಿಯಲ್ಲಿ ಮಾಸ್ ಇಂಡಿಯಾ ಮಹಿಳಾ ಪ್ರತಿನಿಧಿ ಗೀತಾ ಸುವರ್ಣ, ರಾಜೇಶ್ ಬ್ರಹ್ಮಾವರ ಉಪಸ್ಥಿತರಿದ್ದರು.