ಅಲೋಶಿಯಸ್ ಕಾಲೇಜಿನಲ್ಲಿ ‘ವಿಶೇಷ ಮಕ್ಕಳಿಗೆ ಈಜು’ ಜಾಗೃತಿ ಕಾರ್ಯಕ್ರಮ
ಮಂಗಳೂರು, ಎ.1: ಸಂತ ಅಲೋಶಿಯಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದಿಂದ ಶಕ್ತಿನಗರದ ‘ಅರಿವು’ ಇಂಟರ್ವೆನ್ಶನ್ ಸೆಂಟರ್ನಲ್ಲಿ ‘ವಿಶೇಷ ಮಕ್ಕಳಿಗಾಗಿ ಈಜು’ ಎಂಬ ವಿಷಯದಲ್ಲಿ ಶಕ್ತಿನಗರದ ‘ಅರಿವು’ ಇಂಟರ್ವೆನ್ಶನ್ ಸೆಂಟರ್ನಲ್ಲಿ ಹೆತ್ತವರಿಗಾಗಿ ಜಾಗೃತಿ ಕಾರ್ಯಕ್ರಮವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಈಜು ಕೋಚ್ ಶರತ್ ಕುಮಾರ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ‘ನೀರಿನಲ್ಲಿ ಆಟ ಆಡುವುದರಿಂದ ಮನಸ್ಸಿಗೆ ಉಲ್ಲಾಸವಾಗುತ್ತದೆ. ಈಜುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ವಿಶೇಷ ಮಕ್ಕಳಿಗೆ ಈಜು ಔಷಧವಿದ್ದಂತೆ. ಅವರ ಮಾನಸಿಕ ಮತ್ತು ಸಾಮಾಜಿಕ ವರ್ತನೆಯನ್ನು ಸುಧಾರಿಸಲು ಈಜು ತುಂಬಾ ಸಹಾಯಕಾರಿಯಾಗುತ್ತದೆ. ಸಂತ ಅಲೋಶಿಯಸ್ ಕಾಲೇಜಿನ ಈಜುಕೊಳದಲ್ಲಿ ವಾರಕ್ಕೆ ಎರಡು ಬಾರಿ ವಿಶೇಷ ಮಕ್ಕಳಿಗಾಗಿ ವಿಶೇಷ ಸೆಷನ್ಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು. ‘ಅರಿವು’ ಸಂಸ್ಥೆಯ ನಿರ್ದೇಶಕಿ ಡಾ.ಪೂರ್ಣಿಮ ಭಟ್ ಮಾತನಾಡಿ, ‘ಈಜು ನಮ್ಮ ಪಂಚೇಂದ್ರಿಯಗಳ ವರ್ಧನೆಗೆ ಕಾರಣವಾಗುತ್ತದೆ. ಹೈಡ್ರೋಥೆರಫಿಯಿಂದ ಮಕ್ಕಳಿಗೆ ಸರಿಯಾದ ತರಬೇತಿ ಸಿಗುತ್ತದೆ. ಮಂಗಳೂರಿನ ಜನತೆಗೆ ಇದೇ ಮೊದಲ ಬಾರಿಗೆ ಇಂತಹ ವಿನೂತನ ಕಾರ್ಯಕ್ರಮ ನಡೆಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ‘ಅರಿವು’ ಸಂಸ್ಥೆಯ ಕೋಶಾಧಿಕಾರಿ ಡಾ.ರಾಧಾಕೃಷ್ಣ ಭಟ್, ಸಂಯೋಜಕಿ ತಿಯಾ ಬೋಬನ್ ಮತ್ತಿತರರು ಉಪಸ್ಥಿತರಿದ್ದರು.