ಬ್ಯಾಂಕ್ ಆಫ್ ಬರೋಡ: ವಿಜಯ ಬ್ಯಾಂಕ್, ದೇನಾ ಬ್ಯಾಂಕ್ ವಿಲೀನ ಪ್ರಕ್ರೆಯೆಗೆ ಚಾಲನೆ
ಮಂಗಳೂರು, ಎ.1: ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ಎಪ್ರಿಲ್ 1ರಿಂದ ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನಗೊಂಡು ದೇಶಾದ್ಯಂತ ಕಾರ್ಯನಿರ್ವಹಿಸಲಿದೆ.
ಮೂರು ಬ್ಯಾಂಕ್ಗಳ ಗ್ರಾಹಕರು ತಮ್ಮ ಬ್ಯಾಂಕ್ ವ್ಯವಹಾರ ನಡೆಸಲು ಈ ವಿಲೀನ ಪ್ರಕ್ರಿಯೆಯಿಂದ ಯಾವೂದೇ ಸಮಸ್ಯೆಯಾಗುವುದಿಲ್ಲ ಎಂದು ಬರೋಡಾ ಬ್ಯಾಂಕ್ನ ಡಿಜಿಎಂ ಲಲಿತ್ ತ್ಯಾಗಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ನಗರದ ಲೈಟ್ ಹೌಸ್ ಹಿಲ್ ರಸ್ತೆಯಬಳಿಯ ಜ್ಯೋತಿ ಟಾಕೀಸ್ ಬಳಿ ಇರುವ ವಿಜಯ ಬ್ಯಾಂಕ್ ಸಂಸ್ಥಾಪಕರ ಕಚೇರಿಯಲ್ಲಿಂದು ಹಮ್ಮಿಕೊಂಡ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಆರ್ಬಿಐ ಸೂಚನೆಯ ಪ್ರಕಾರ ಎ. 1, 2019ರಿಂದ ವಿಜಯ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್ನ ಶಾಖೆಗಳು ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಂಡ ಕಾರ್ಯ ನಿರ್ವಹಿಸ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ವಿಲೀನ ಪ್ರಕ್ರೀಯೆಯ ಬಳಿಕ ಬ್ಯಾಂಕ್ನ ಜಾಲ ಮತ್ತು ಗ್ರಾಹಕರ ಸಂಖ್ಯೆಯ ಆಧಾರದಲ್ಲಿ ದೇಶದ ಸಾರ್ವಜನಿಕ ಸ್ವಾಮ್ಯದ ಅತ್ಯಂತ ದೊಡ್ಡ ಬ್ಯಾಂಕ್ಗಳ ಪೈಕಿ ಬ್ಯಾಂಕ್ ಆಫ್ ಬರೋಡಾಎರಡನೆ ಸ್ಥಾನ ಪಡೆಯಲಿದೆ. ವಿಲೀನದ ಬಳಿಕ ಬ್ಯಾಂಕ್ ನೌಕರರ ಹಿತರಕ್ಷಣೆಗೆ ಯಾವೂದೇ ಸಮಸ್ಯೆಯಾಗುವುದಿಲ್ಲ. ಮೂರು ಬ್ಯಾಂಕ್ಗಳ ಶಾಖೆಗಳು ಸೇರಿದರೆ 9,500 ಶಾಖೆಗಳು,13,400 ಎಟಿಎಂಗಳು, 85 ಸಾವಿರಕ್ಕೂ ಅಧಿಕ ನೌಕರರು, ಸುಮಾರು 12 ಕೋಟಿ ಗ್ರಾಹಕರನ್ನು ಹೊಂದಿರುವ ಬೃಹತ್ ಜಾಲವನ್ನು ಬ್ಯಾಂಕ್ ಹೊಂದಲಿದೆ. ಮೂರು ಬ್ಯಾಂಕ್ಗಳಲ್ಲಿ ಇರುವ ಉತ್ತಮ ಯೋಜನೆಗಳನ್ನು ಬ್ಯಾಂಕ್ ಆಫ್ ಬರೋಡಾದ ಮೂಲಕ ಗ್ರಾಹಕರಿಗೆ ನೀಡಲಿದೆ ಎಂದು ಲಲಿತ್ ತ್ಯಾಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಿಲೀನಗೊಂಡ ವಿಜಯ ಬ್ಯಾಂಕ್ನ ಜಿ.ಎಂ ಶ್ರೀಧರ ಮೂರ್ತಿ, ದೇನಾ ಬ್ಯಾಂಕ್ನ ಪ್ರಧಾನ ವ್ಯವಸ್ಥಾಪಕ ನಾಗರಾಜು,ವಿಜಯ ಬ್ಯಾಂಕ್ ಎಜಿಎಂ ರಂಗರಾಜು ಉಪಸ್ಥಿತರಿದ್ದರು.