ಬಹುಮುಖ ಪ್ರತಿಭೆಯ ಕಮಲಾರನ್ನು ಕನ್ನಡಿಗರು ಮರೆತಿದ್ದಾರೆ: ಪ್ರಸನ್ನ
ಉಡುಪಿ, ಎ. 1: ಕರಕುಶಲ, ಕಲಾ ರಂಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಹುಮುಖಿ ಕೊಡುಗೆಗಳನ್ನು ಸಲ್ಲಿಸಿದ ಕರಾವಳಿ ಮೂಲದ ಕಮಲಾದೇವಿ ಚಟ್ಟೋಪಾಧ್ಯಾಯರನ್ನು ಕನ್ನಡಿಗರು ಮರೆತು ಬಿಟ್ಟಿದ್ದಾರೆ ಎಂದು ಖ್ಯಾತ ರಂಗಕರ್ಮಿ ಹೆಗ್ಗೋಡಿನ ಪ್ರಸ್ನ ತೀವ್ರ ಖೇದ ವ್ಯಕ್ತಪಡಿಸಿದ್ದಾರೆ.
ಮಣಿಪಾಲದ ಹೆರಿಟೇಜ್ ವಿಲೇಜ್ನಲ್ಲಿ ಸೋಮವಾರ ಕಮಲಾ ಗ್ಯಾಲರಿ ಯನ್ನು ಉದ್ಘಾಟಿಸಿದ ಬಳಿಕ ವಿಜಯನಾಥ ಶೆಣೈ ಸ್ಮಾರಕ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಮಲಾದೇವಿ ಅವರು ಕರಾವಳಿ ಹಾಗೂ ಕರ್ನಾಟಕದ ಅತ್ಯಂತ ಉನ್ನತಮಟ್ಟದ ರಾಷ್ಟ್ರೀಯ ನಾಯಕರಾಗಿದ್ದರು. ಜವಾಹರಲಾಲ್ ನೆಹರೂ ಅವರಿಗೆ ಆತ್ಮೀಯರಾಗಿದ್ದರು. ಹೊಸದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆಯನ್ನು ಪ್ರಾರಂಭಿಸಿದ್ದೆ ಕಮಲಾದೇವಿ ಅವರು. ಭೂದಾನ ಚಳವಳಿಯ ವೇಳೆ ವಿನೋಬಾ ಬಾವೆ ಕೊಂಚಪಲ್ಲಿಯಲ್ಲಿ ಸ್ವೀಕರಿಸಿದ 500 ಎಕ್ರೆ ಭೂಮಿಯನ್ನು ಅಗತ್ಯವುಳ್ಳವರಿಗೆ ಹಂಚುವ ಹೊಣೆಯನ್ನು ಯಶಸ್ವಿಯಾಗಿ ಹೊತ್ತವರು ಕಮಲಾದೇವಿ ಎಂದರು.
ಕರಕುಶಲ ಕಲೆ ಇಂದು ದೇಶದಲ್ಲಿ ಸಮಸ್ಯೆಯನ್ನೆದುರಿಸುತ್ತಿದೆ. ಭಾರತದಲ್ಲಿ ಅದು ಉದ್ಯೋಗಸೃಷ್ಟಿಯ ಮೂಲ ಸೆಲೆಯಾಗಿದೆ. ಆದರೆ ಇಂದು ನಾವು ಚೀನ ಮಾದರಿಯನ್ನು ಅಳವಡಿಸಿಕೊಂಡು ಕಲೆಯನ್ನು ಯಾಂತ್ರೀಕರಣಗೊಳಿಸಿದ್ದೇವೆ. ನಮ್ಮ ಶ್ರೀಮಂತರಿಗೆ ಇಂದು ಕೈಮಗ್ಗದ ಸೀರೆಯೂ ಸೇರಿದಂತೆ ವಿವಿಧ ಕಲಕುಶಲವಸ್ತುಗಳು ಪ್ರದರ್ಶನದ ಸಾಮಗ್ರಿಗಳಾಗಿವೆ ಎಂದವರು ಹೇಳಿದರು.
ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಕೈಮಗ್ಗದ ನೇಕಾರಿಕೆ ಸೇರಿದಂತೆ ಇತರ ಕರಕುಶಲ ವಸ್ತುಗಳ ತಯಾರಿ ಮಹಿಳೆಯರ ಉದ್ಯೋಗದ ಮೂಲವಾಗಿದೆ. ಅದನ್ನು ಯಾಂತ್ರೀಕರಣಗೊಳಿಸುವುದರಿಂದ ಅವರ ಉದ್ಯೋಗವನ್ನೇ ಕಸಿದುಕೊಂಡಂತೆ. ಹೀಗಾಗಿ ನಾವು ಚೀನದ ಮಾದರಿಯನ್ನು ಕೈಬಿಟ್ಟು, ಗಾಂಧಿ ಹೇಳಿದ ಮಾರ್ಗದಲ್ಲಿ ಸಾಗಬೇಕಾಗಿದೆ ಎಂದು ಪ್ರಸ್ನ ನುಡಿದರು.
ಕರಕುಶಲ ಕಲೆಯನ್ನು ಉಳಿಸುವ ನೈತಿಕ ಜವಾಬ್ದಾರಿಯೂ ನಮ್ಮ ಮೇಲಿದೆ. ಅಲ್ಲದೇ ಇವುಗಳ ಯಾಂತ್ರೀಕರಣದಿಂದ ಹಂತ ಹಂತವಾಗಿ ನಾವು ವಾಪಸು ಬರಬೇಕೆಂದು ವಿಜ್ಞಾನಿಗಳೂ ಹೇಳುತಿದ್ದಾರೆ. ಮುಂದಿನ ಪೀಳಿಗೆಗೆ ಶುದ್ಧ ಗಾಳಿ, ಶುದ್ಧ ವಾತಾವರಣವನ್ನು ನೀಡಬೇಕಾಗಿದೆ. ಕರಕುಶಲ ಕ್ಷೇತ್ರದ ಅಭಿವೃದ್ಧಿಯಿಂದ ನಿಸರ್ಗದ ಮೇಲೆ ಕಡಿಮೆ ಪ್ರತಿಕೂಲ ಪರಿಣಾಮ, ಕಡಿಮೆ ಹಿಂಸೆ ಸಾಧ್ಯ ಎಂದರು.
ಭಾರತದಲ್ಲಿ ಕರಕುಶಲ ಉತ್ಪನ್ನಗಳು ಮಾನವ ನಿರ್ಮಿತವಾಗಿದ್ದರೆ ಚೀನಾದಲ್ಲಿ ಯಾಂತ್ರಿಕ ಆಧಾರಿತವಾಗಿದೆ. ಈಗ ಮಡಿಕೆ, ದಾರು ಉತ್ಪನ್ನಗಳು ಸಿರಿವಂತರ ಮನೆಗಳನ್ನು ಸೇರುತ್ತಿದ್ದರೂ ಅದು ಪ್ರದರ್ಶನ ವಸ್ತುವಾಗುತ್ತಿದೆ. ಇದಾಗದೆ ಕರಕುಶಲ ಕ್ಷೇತ್ರ ಕುಶಲಕರ್ಮಿಗಳಿಗೆ ಜೀವನೋಪಯೋಗಿ ಆಗಬೇಕು. ಖರೀದಿದಾರರ ಸಹಜಜೀವನದಲ್ಲಿ ಬಳಕೆಯ ವಸ್ತುವಾಗಬೇಕು. ಸಿರಿವಂತರು ತಮ್ಮ ಜೀವನ ಶೈಲಿಯನ್ನು ಬದಲಾಯಿಸಬೇಕಾಗಿದೆ ಎಂದು ಪ್ರಸನ್ನ ನುಡಿದರು.
ಹಸ್ತಶಿಲ್ಪ ಟ್ರಸ್ಟ್ನ ಟ್ರಸ್ಟಿಗಳಾದ ಟಿ.ರಾಜೇಶ್ ಪೈ, ಹರೀಶ್ ಪೈ, ಕಾರ್ಯ ದರ್ಶಿ ಶ್ರೀನಿವಾಸ ಶೆಣೈ, ಭಾರತೀಯ ಕರಕುಶಲ ಮಂಡಳಿ ಅಧ್ಯಕ್ಷೆ ಗೀತಾ ರಾಮ್ ಮುಂತಾದವರು ಉಪಸ್ಥಿತರಿದ್ದರು.