ರಾ.ಕರಕುಶಲ ಮಂಡಳಿಯ ರಾಷ್ಟ್ರೀಯ ಸಮಾವೇಶ ಉದ್ಘಾಟನೆ
ಮಣಿಪಾಲ, ಎ.1: ಕೃಷಿಯ ನಂತರ ದೇಶದಲ್ಲಿ ಕರಕುಶಲ ಕಲೆ ಗ್ರಾಮೀಣ ಭಾರತದ ಜನರ ಅತಿ ದೊಡ್ಡ ಆರ್ಥಿಕ ಮೂಲವಾಗಿದೆ. ದೇಶದಲ್ಲಿ ಕರಕುಶಲ ಕರ್ಮಿಗಳು ಉತ್ಪಾದಿಸುವ ಉತ್ಪನ್ನಗಳಿಗೆ ಬೇಡಿಕೆ ಏರುತ್ತಿದೆ. ಆದರೆ ದಿನದಿಂದ ದಿನಕ್ಕೆ ಕರಕುಶಲಕರ್ಮಿಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಭಾರತ ಕರಕುಶಲ ಮಂಡಳಿ (ಕ್ರಾಪ್ಟ್ ಕೌನ್ಸಿಲ್ ಆಪ್ ಇಂಡಿಯ- ಸಿಸಿಐ) ಕಳವಳ ವ್ಯಕ್ತಪಡಿಸಿದೆ.
ಮಣಿಪಾಲದ ಹೆರಿಟೇಜ್ ವಿಲೇಜ್ನ ವಿಜಯನಾಥ ಶೆಣೈ ಸ್ಮಾರಕ ಸಭಾಂಗಣದಲ್ಲಿ ಸೋಮವಾರ ಪ್ರಾರಂಗೊಂಡ ಸಿಸಿಐನ ಎರಡು ದಿನಗಳ 30ನೇ ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷೆ ಗೀತಾರಾಮ್ ಈ ವಿಷಯ ತಿಳಿಸಿದರು. ದೇಶದ ವಿವಿಧೆಡೆ ಸಿಸಿಐ ಸಂಯೋಜಿತ 10 ಘಟಕಗಳಿವೆ. ಇದೀಗ 11ನೇ ಘಟಕ ಇಲ್ಲಿ ಪ್ರಾರಂಭಗೊಂಡಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಸಿಐನ ಸದಸ್ಯೆ ಸುಧಾ ಶಿವಕುಮಾರ್ ಅವರು, 2022ರ ಸುಮಾರಿಗೆ ದೇಶದಲ್ಲಿ ಸುಮಾರು 1.8 ಕೋಟಿ ಕರಕುಶಲ ಕರ್ಮಿಗಳಿರಬಹುದೆಂದು ಅಂದಾಜಿಸಲಾಗಿದೆ. ಆದರೆ ಅನಧಿಕೃತ ಮೂಲಗಳ ಪ್ರಕಾರ ಕರಕುಶಲ ಉತ್ಪಾದಕರು, ಮಾರುಕಟ್ಟೆ ಮಾಡುವವರು ಸೇರಿ ಸುಮಾರು 20 ಕೊೀಟಿ ಜನರು ಇದ್ದಾರೆಂದು ನುಡಿದರು.
ಕರಕುಶಲ ಕ್ಷೇತ್ರದ ಆದಾಯ 302.57 ಬಿಲಿಯ ರೂ. ಎಂದು ಅಂದಾಜಿಸ ಲಾಗಿದೆ. ಇದರಲ್ಲಿ 168.58 ಬಿಲಿಯನ್ ರೂ. ಕರಕುಶಲ ವಸ್ತು ಹಾಗೂ ಕೈಮಗ್ಗ ಉತ್ಪನ್ನಗಳ ರಫ್ತಿನಿಂದ ದೊರೆಯುತ್ತಿದೆ. ಇದು ಬೇಡಿಕೆ ಹೆಚ್ಚುತ್ತಿರುವುದಕ್ಕೆ ಉದಾಹರಣೆಯಾಗಿದೆ. ಅಸಂಘಟಿತ ವಲಯ, ಕಚ್ಚಾ ಸಾಮಗ್ರಿಗಳ ಕಳಪೆ ಗುಣಮಟ್ಟ, ಸೀಮಿತಿ ಮಾರುಕಟ್ಟೆ ಸಾಮರ್ಥ್ಯ, ಹಣಕಾಸು ಒತ್ತಡ, ಮಾರುಕಟ್ಟೆ ಮತ್ತು ಗ್ರಾಹಕರ ನಡುವೆ ಸಂಪರ್ಕದ ಕೊರತೆ ಇತ್ಯಾದಿ ಸವಾಲುಗಳು ಈ ಕ್ಷೇತ್ರವನ್ನು ಬಾಧಿಸುತ್ತಿವೆ ಎಂದು ಸುಧಾ ಶಿವಕುಮಾರ್ ತಿಳಿಸಿದರು.
ವಿಶ್ವಸಂಸ್ಥೆ ವರದಿ ಪ್ರಕಾರ 30 ವರ್ಷಗಳ ಬಳಿಕ ಬಾರತೀಯ ಕರಕುಶಲಕರ್ಮಿಗಳ ಸಂಖ್ಯೆ ಶೇ.30ರಷ್ಟು ಇಳಿಮುಖವಾಗಲಿದೆ. ಇದರರ್ಥ ಕರಕುಶಲ ಕಲಾವಿದರ ಮೇಲೆ ಮರು ಹೂಡಿಕೆ ಮಾಡಬೇಕಾದ, ಇತಿಹಾಸ, ಸಂಸ್ಕೃತಿ, ಮುಖ್ಯವಾಗಿ ಜೀವನೋಪಯೋಗಿ ಮೂಲದ ರಕ್ಷಣೆ ಮಾಡಬೇಕಾಗಿದೆ ಎಂದು ಸುಧಾ ಅಭಿಪ್ರಾಯಪಟ್ಟರು.
ಸಿಸಿಐ ಕರ್ನಾಟಕದ ಅಧ್ಯಕ್ಷೆ ಭಾರತಿ ಗೋವಿಂದರಾಜ್ ಸ್ವಾಗತಿಸಿದರು. ರಂಗಕರ್ಮಿ ಪ್ರಸನ್ನ ಹೆಗ್ಗೋಡು, ಹಸ್ತಶಿಲ್ಪ ಟ್ರಸ್ಟ್ ಟ್ರಸ್ಟಿ ಟಿ.ರಾಜೇಶ್ ಪೈ, ಕಾರ್ಯದಶಿರ್ ಶ್ರೀನಿವಾಸ ಶೆಣೈ ಉಪಸ್ಥಿತರಿದ್ದರು.