ಎ.3: ಡಾ.ರಾಜೇಂದ್ರ ಕುಮಾರ್ ‘ಸಹಕಾರಿ ಭೂಷಣ’ ಕೃತಿ ಬಿಡುಗಡೆ
ಮಂಗಳೂರು, ಎ.1: ‘ಸಹಕಾರ ರತ್ನ’ ಡಾ.ಎಂ.ಎನ್.ರಾಜೇಂದ್ರಕುಮಾರ್ ಅವರು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷರಾಗಿ ಸಾರ್ಥಕ 25 ವರ್ಷ ಪೂರೈಸಿದ ಸವಿನೆನಪಿಗಾಗಿ ರಚನೆಯಾದ ‘ಸಹಕಾರಿ ಭೂಷಣ’ ಕೃತಿ ಬಿಡುಗಡೆ ಕಾರ್ಯಕ್ರಮ ಎಪ್ರಿಲ್ 3ರಂದು ಪೂರ್ವಾಹ್ನ 11 ಗಂಟೆಗೆ ಧರ್ಮಸ್ಥಳದಲ್ಲಿ ನಡೆಯಲಿದೆ.
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ‘ಸಹಕಾರಿ ಭೂಷಣ’ ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಕಾರ್ಕಳ ತಾಲೂಕಿನಲ್ಲಿ ಹುಟ್ಟಿ ಬೆಳೆದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸಹಕಾರಿ ರಂಗದಲ್ಲಿ ಮಾಡಿರುವ ಸಾಧನೆ ಅದ್ವಿತೀಯ. ಒಬ್ಬ ಸಹಕಾರಿಯಾಗಿ, ಉದ್ಯಮಿಯಾಗಿ, ಸಹಕಾರಿ ರಂಗದ ಹಲವು ಸಂಸ್ಥೆಗಳ ಆಡಳಿತ ಜವಾಬ್ದಾರಿ ವಹಿಸಿ, ಮುಖ್ಯವಾಗಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಹಾಗೂ ರಾಜ್ಯ ಸಹಕಾರ ಮಾರಾಟ ಮಹಾಮಂಡಳದಂತಹ ಪ್ರತಿಷ್ಠಿತ ಸಂಸ್ಥೆಗಳ ಅಧ್ಯಕ್ಷರಾಗಿ ಇವರು ಗೈದ ಸಾಧನೆ ಸಾರ್ವಕಾಲಿಕ ಮಾದರಿಯಾಗಿದೆ. ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೂ ಪಾತ್ರರಾದ ಇವರ ಜೀವನದ ಎಲ್ಲ ಚಿತ್ರಣಗಳು ‘ಸಹಕಾರಿ ಭೂಷಣ’ ಕೃತಿಯಲ್ಲಿದೆ.