ನೋಟಾ ಅಭಿಯಾನ ಮಾಡಿದ್ರೆ ಕೇಸ್ : ಉಡುಪಿ ಡಿಸಿ ಹೆಪ್ಸಿಬಾ ರಾಣಿ ಎಚ್ಚರಿಕೆ
ಉಡುಪಿ, ಎ.1: ಸಾಮಾಜಿಕ ಜಾಲತಾಣದಲ್ಲಿ, ಸಾರ್ವಜನಿಕವಾಗಿ ನೋಟಾ ಅಭಿಯಾನ ಮಾಡಿದ್ರೆ ಮೊಕದ್ದಮೆ ದಾಖಲಿಸುವುದಾಗಿ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಎಚ್ಚರಿಕೆ ನೀಡಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೋಟಾಕ್ಕೆ ಮತ ಹಾಕುವಂತೆ ಪ್ರಭಾವ ಬೀರುವುದು ಅಪರಾಧ. ನೋಟಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಕೊಡುವಂತಿಲ್ಲ. ಮತದಾರರಿಗೆ ನೋಟ ಒಂದು ಆಯ್ಕೆ ಮಾತ್ರ. ನೋಟಕ್ಕೆ ಮತಹಾಕಿ ಅನ್ನುವುದು ಕಾನೂನು ಬಾಹಿರ ಎಂದು ಖಡಕ್ ಸೂಚನೆ ನೀಡಿದರು.
ಸಾಮಾಜಿಕ ಜಾಲತಾಣದಲ್ಲಿ ನೋಟಾ ಅಭಿಯಾನ ಮಾಡುವಂತಿಲ್ಲ. ನೋಟಾ ದೇಶದ ಮತದಾರರ ವೈಯಕ್ತಿಕ ಹಕ್ಕು. ನೋಟಾ ಬಗ್ಗೆ ಯಾರೂ ಎಲ್ಲೂ ಪ್ರಚಾರ ಮಾಡಬಾರದು. ನೋಟಾ ಬಗ್ಗೆ ಬೇಕಿದ್ದರೆ ಮಾಹಿತಿ ನೀಡುವ ಅವಕಾಶ ಇದೆ ಎಂದವರು ವಿವರಿಸಿದರು.
ಉಡುಪಿಯಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ನೋಟಾ ಅಭಿಯಾನ ನಡೆಯುತ್ತಿದ್ದು, ಫೇಸ್ಬುಕ್, ವಾಟ್ಸಾಪ್ನಲ್ಲಿ ಅಭಿಯಾನ ನಡೆಯುತ್ತಿದೆ. ಪ್ರಮೋದ್ ಮಧ್ವರಾಜ್ಗೆ ಜೆಡಿಎಸ್ ಟಿಕೆಟ್ ಸಿಕ್ಕಿದ ಕೂಡಲೇ ಮೂಲ ಕಾಂಗ್ರೆಸಿಗರಿಂದ ಅಸಮಾಧಾನ ವ್ಯಕ್ತವಾಗಿತ್ತು. ನಮ್ಮದು ಈ ಬಾರಿ ನೋಟಾ ಎಂದವರು ಬಹಿರಂಗ ಹೇಳಿಕೆ ನೀಡಿದ್ದರು.
ಈ ಬಗ್ಗೆ ಸಾಮಾಜಿಕ ಜಾಲತಾಣ ದಲ್ಲೂ ಚರ್ಚೆಯಾಗುತ್ತಿದೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಡಿಸಿ ಹೆಪ್ಸಿಬಾ ರಾಣಿ ಮೇಲಿನ ಎಚ್ಚರಿಕೆ ನೀಡಿದ್ದಾರೆ.