ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು ಬಿಜೆಪಿಯನ್ನು ಸೋಲಿಸುವ ಪಣ ತೊಡಬೇಕು: ಡಿ.ಕೆ. ಶಿವಕುಮಾರ್
ಬೆಳ್ತಂಗಡಿ: ಜನರನ್ನು ಭಯದ ವಾತಾವರಣದಲ್ಲಿಟ್ಟು ಚುನಾವಣೆ ಗೆಲ್ಲುವ ಪ್ರಯತ್ನ ಬಿಜೆಪಿ ಮಾಡುತ್ತಿದೆ. ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ಈ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕಾದ ಅನಿವಾರ್ಯತೆ ಇದೆ. ಜಿಲ್ಲೆಯ ಪ್ರಜ್ಞಾವಂತ ಮತದಾರರು ಇದಕ್ಕೆ ಸಜ್ಜಾಗಬೇಕಾಗಿದೆ ಎಂದು ರಾಜ್ಯ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ಅವರು ಸೋಮವಾರ ಬೆಳ್ತಂಗಡಿಯಲ್ಲಿ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪಕ್ಷದ ದ.ಕ.ಜಿಲ್ಲೆಯ ಪ್ರಥಮ ಪ್ರಚಾರ ಸಭೆಯನ್ನು ಉದ್ಘಾಟಿಸಿ ಪ್ರಚಾರಕ್ಕೆ ಚಾಲನೆ ನೀಡಿದರು.
ನಾವು ಹಿಂದೂಗಳೇ, ನಾವೂ ದೇವರ ಭಕ್ತರೇ. ಆದರೆ ಧರ್ಮದ ಆಧಾರದಲ್ಲಿ ಭಾವನೆ ಕೆರಳಿಸಿ ದ್ವೇಷವನ್ನು ಬಿತ್ತುವ ಕೆಲಸ ಬಿಜೆಪಿ ಮಾಡುತ್ತಿದೆ. ನಾವು ಎಲ್ಲರಲ್ಲೂ ಗೌರವಿಸುತ್ತಾ ಧರ್ಮವನ್ನು ಪಾಲಿಸುತ್ತೇವೆ. ಇದೇ ನಮಗೂ ಅವರಿಗೂ ಇರುವ ವ್ಯತ್ಯಾಸ ಎಂದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಲೋಕಸಭಾ ಸದಸ್ಯನಿಲ್ಲದೆ ಇಪ್ಪತ್ತೆಂಟು ವರ್ಷಗಳಾಗಿದ್ದು ಈ ಕೊರತೆಯನ್ನು ನೀಗಿಸಲು ಕಾರ್ಯಕರ್ತರೆಲ್ಲರೂ ಸಜ್ಜಾಗಿ ಪ್ರತಿ ಮನೆಮನೆಗೆ ಹೋಗಿ ಮತ್ತೆ ಕಾಂಗ್ರೇಸ್ನ ಅಸ್ತಿತ್ವವನ್ನು ಜಿಲ್ಲೆಯಲ್ಲಿ ಸ್ಥಾಪಿಸಬೇಕಾಗಿದೆ ಎಂದ ಅವರು ಜಿಲ್ಲೆಯಲ್ಲಿ ಅನೇಕ ನಾಯಕರಿದ್ದರೂ, ಯುವಕರಿಗೆ ಆದ್ಯತೆ ನೀಡಬೇಕು ಎನ್ನುವ ನೆಲೆಯಲ್ಲಿ ಎಲ್ಲಾ ನಾಯಕರು ಒಮ್ಮತದಿಂದ ಮಿಥುನ್ ರೈ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದು, ಇವರ ಗೆಲುವಿಗೆ ಎಲ್ಲರೂ ಸಹಕರಿಸಬೇಕಿದೆ ಎಂದರು.
ಸಚಿವ ಯು.ಟಿ. ಖಾದರ್ ಅವರು, ಭವಿಷ್ಯದ ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಪಣ ತೊಡಬೇಕು. ವಿದ್ಯಾವಂತ ಸಂಸದನನ್ನು ಆರಿಸುವ ಮೂಲಕ ಜಿಲ್ಲೆಯ ಧ್ವನಿ ಸಂಸತ್ತಿನಲ್ಲಿ ಮೊಳಗುವಂತೆ ಮಾಡಬೇಕಾಗಿದೆ. ಹೀಗಾಗಿ ಪ್ರತಿಯೊಬ್ಬ ನಾಯಕರು ಕೂಡ ಪ್ರತಿ ಬೂತ್ನಲ್ಲಿ ಕಾಂಗ್ರೆಸ್ ಪಕ್ಷವನ್ನು ಲೀಡ್ಗೆ ತರಬೇಕಿದೆ ಎಂದರು.
ಮಾಜಿ ಸಚಿವರಾದ ರಮಾನಾಥ ರೈ, ಐದು ವರ್ಷದ ಆಡಳಿತದಲ್ಲಿ ಮೋದಿ ಸರಕಾರಕ್ಕೆ ಕೊಟ್ಟ ಭರವಸೆ ಈಡೇರಿಸಲು ಸಾಧ್ಯವಾಗಿಲ್ಲ. ಕೇವಲ ಪ್ರಚಾರದ ಮೂಲಕ ಜನರನ್ನು ಮೋಸಗೊಳಿಸುವ ಕಾರ್ಯ ಬಿಜೆಪಿಯಿಂದ ಆಗುತ್ತಿದೆ. ಈ ಕುರಿತು ಮತದಾರರು ಎಚ್ಚರದಿಂದ ಮತ ಚಲಾಯಿಸಿ ಎಂದರು.
ಮಾಜಿ ಶಾಸಕ ಕೆ.ವಸಂತ ಬಂಗೇರ ಅವರು ಮಾತನಾಡಿ, ನರೇಂದ್ರ ಮೋದಿ, ಬಿಎಸ್ವೈ ಹಾಗೂ ನಳಿನ್ ಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಜನರ ಬೇಡಿಕೆಗಳನ್ನು, ಪ್ರಣಾಳಿಕೆಯಲ್ಲಿನ ಆಶ್ವಾಸನೆಗಳನ್ನು ಶೇ. ನೂರರಷ್ಟು ಈಡೇರಿಸಿದ ದೇಶದ ಏಕೈಕ ಪಕ್ಷವೆಂದರೆ ಅದು ಕಾಂಗ್ರೆಸ್ ಪಕ್ಷ ಎಂದರು.
ಅಭ್ಯರ್ಥಿ ಮಿಥುನ್ ರೈ ಅವರು, ಪಕ್ಷದ ಹಿರಿಯ ನಾಯಕರ ಆಶೀರ್ವಾದವೇ ನನಗೆ ಶ್ರೀರಕ್ಷೆ. ಜನರ ಸೇವೆಯ ಸಂಕಲ್ಪ ಮಾಡಿರುವ ನನಗೆ ಜಿಲ್ಲೆಯ ಜನತೆಯ ಹರಕೆ ನನ್ನ ಮೇಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ಕೆ.ಗಂಗಾಧರ ಗೌಡ, ವಿಧಾನ ಪರಿಷತ್ ಸದಸ್ಯ ಐವನ್ ಡಿ.ಸೋಜ, ಎಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭ ಬಿಜೆಪಿಯ ಬೆಳ್ತಂಗಡಿ ಮಂಡಲದ ಮಾಜಿ ಅಧ್ಯಕ್ಷ ರಂಜನ್ ಜಿ. ಗೌಡ ಅವರನ್ನು ಕಾಂಗ್ರೇಸ್ ಪಕ್ಷದ ಧ್ವಜ ನೀಡುವ ಮೂಲಕ ಪಕ್ಷದ ನಾಯಕರು ಬರಮಾಡಿಕೊಂಡರು.
ಕಾಂಗ್ರೆಸ್ ಮುಖಂಡರಾದ ಜಿ.ಎ. ಬಾವಾ, ಕೃಪಾ ಆಳ್ವ, ಕಣಚೂರು ಮೋನು, ನವೀನಚಂದ್ರ ಶೆಟ್ಟಿ, ಶಾಲೆಟ್ ಪಿಂಟೋ, ಪೀತಾಂಬರ ಹೇರಾಜೆ, ರಾಮಚಂದ್ರ ಗೌಡ, ಸುಂದರ ಗೌಡ, ರಾಜಶೇಖರ ಅಜ್ರಿ, ಉಷಾ ಶರತ್,ವಸಂತ ಬಿ.ಕೆ., ಬೆಳಪು ದೇವಿಪ್ರಸಾದ್ ಶೆಟ್ಟಿ, ಬಿ.ಎಚ್.ಖಾದರ್, ಧನಂಜಯ ಅಡ್ಪಂಗಾಯ, ಜೆಡಿಎಸ್ ಮುಂಖಂಡರಾದ ರಾಜಶ್ರೀ ಎಸ್.ಹೆಗ್ಡೆ, ಪ್ರವೀಣಚಂದ್ರ ಜೈನ್, ಜಗನ್ನಾಥ ಗೌಡ, ಸುಮತಿ ಹೆಗ್ಡೆ. ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳು, ಜಿಪಂ., ತಾಪಂ., ಗ್ರಾಪಂ ಸದಸ್ಯರುಗಳು ಉಪಸ್ಥಿತರಿದ್ದರು.
ಬ್ಲಾಕ್ ಗ್ರಾಮೀಣ ಅಧ್ಯಕ್ಷ ಶ್ರೀನಿವಾಸ ಕಿಣಿ ಸ್ವಾಗತಿಸಿದರು. ರಾಜಶೇಖರ ಶೆಟ್ಟಿ, ಕೇಶವ ಬೆಳಾಲು ಹಾಗೂ ಸಾಹುಲ್ ಹಮೀದ್ ಕಾರ್ಯಕ್ರಮ ನಿರ್ವಹಿಸಿದರು. ಅಭಿನಂದನ್ ಹರೀಶ ವಂದಿಸಿದರು.