ಬಿಜೆಪಿಗರು ದೇಶಪ್ರೇಮಿಗಳಲ್ಲ, ಧ್ವೇಷ ಪ್ರೇಮಿಗಳು: ಡಿಕೆಶಿ
ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ
ಪುತ್ತೂರು: ದೇಶಪ್ರೇಮಿಗಳೆಂದು ಹೇಳುತ್ತಿರುವ ಬಿಜೆಪಿಗರು ಜಾತಿ ವೈಷಮ್ಯ ಬೆಳೆಸಿಕೊಳ್ಳುತ್ತಾ, ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜನೆ ಮಾಡುತ್ತಿದ್ದು, ಇವರು ದೇಶಪ್ರೇಮಿಗಳಲ್ಲ, ಧ್ವೇಷ ಪ್ರೇಮಿಗಳು ಎಂದು ರಾಜ್ಯ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ಅವರು ಸೋಮವಾರ ಸಂಜೆ ನಗರದ ದರ್ಬೆ ಮೈದಾನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶವು ಅನೇಕ ಭಾಷೆ, ಜಾತಿ, ಜನಾಂಗವನ್ನು ಹೊಂದಿದ್ದು, ಅನೇಕತೆಯಲ್ಲಿ ಏಕತೆಯ ಸಂಸ್ಕøತಿಯೇ ದೇಶದ ದೊಡ್ಡ ಆಸ್ತಿ, ದೇಶಪ್ರೇಮದ ಬಗ್ಗೆ ಮಾತನಾಡುವ ಬಿಜೆಪಿಗರು ಈ ದೇಶದ ಐಕ್ಯತೆ ಮತ್ತು ಸಮಗ್ರತೆಯ ಬಗ್ಗೆ ಮಾತನಾಡುತ್ತಿಲ್ಲ. ಎಲ್ಲಕ್ಕೂ ಮೀರಿದ್ದು ಮಾನವ ಧರ್ಮವಾಗಿದ್ದು, ದೇಶದ ಎಲ್ಲಾ ವರ್ಗದ ಸಮಾಜದ ರಕ್ಷಣೆ ಜನನಾಯಕರ ಮೇಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಎಲ್ಲಾ ವರ್ಗದ ಜನರು ಅಧಿಕಾರವನ್ನು ಪಡೆದುಕೊಂಡಂತೆ ಎಂದು ಹೇಳಿದರು.
ಅಚ್ಚೇದಿನ್ ಯಾವುದು ಎಂಬುದನ್ನು ಬಿಜೆಪಿಯ ನಾಯಕರು ಹೇಳಬೇಕು. ಇಲ್ಲಿನ ರೈತರು, ಕಾರ್ಮಿಕರು, ಬಡವರಿಗೆ ಎಲ್ಲಿ ಅಚ್ಚೇ ದಿನ್ ಬಂದಿದೆ. ಯುವಕರು ಉದ್ಯೋಗವನ್ನು ಕೇಳಿದರೆ ನೀವು ಪಕೋಡ ಮಾರಿ ಎಂದು ಹೇಳುವ ಪ್ರಧಾನಿ ಮತ್ತು ಅದನ್ನು ಬೆಂಬಲಿಸಿ ಮಾತನಾಡುವ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರು ಅಚ್ಚೇ ದಿನ್ ಎಂದರೆ ಪಕೋಡ ಮಾರುವುದೇ ಎಂಬುದನ್ನು ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ಪತ್ರಕರ್ತರೊಂದಿಗೆ ಎಂದೂ ಮಾತನಾಡದ ಪ್ರಧಾನಿಯವರು ಮನ್ ಕೀ ಬಾತ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಮನ್ಕೀ ಬಾತ್ ಮಾಡುತ್ತಿಲ್ಲ. ಕಾಮ್ ಕೀ ಬಾತ್ ಮಾಡುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಸಂಸದರಾದಲ್ಲಿ ನಿಮ್ಮ ಮನೆಯ ಆಳಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.
ಯಡಿಯೂರಪ್ಪ ಅವರು ಅಪರೇಶನ್ ಕಮಲ ಮಾಡುವ ಮೂಲಕ ಪ್ರಜಾಪ್ರಭುತ್ವನ್ನು ಕೊಂದಿದ್ದಾರೆ. ಇದಕ್ಕೆ ತಡೆಯಾಗಿದ್ದ ನನ್ನ ಮೇಲೆ ಇದೀಗ ಧ್ವೇಷಪೂರಿತವಾಗಿ ಹಲವಾರು ಕೇಸುಗಳನ್ನು ಹಾಕಿದ್ದಾರೆ. ಐಟಿ ರೈಡ್ ಮಾಡಿಸಿದ್ದಾರೆ. ಇದಕ್ಕೆಲ್ಲಾ ನಾನು ಹೆದರುವುದಿಲ್ಲ. ನ್ಯಾಯಾಲಯದಿಂದ ನನಗೆ ನ್ಯಾಯ ಸಿಗುತ್ತದೆ ಎಂಬ ಭರವಸೆಯಿದೆ ಎಂದರು.
ಜಿಲ್ಲೆಯ ಹೆಮ್ಮೆಯ ಬ್ಯಾಂಕ್ ಆಗಿದ್ದ ವಿಜಯ ಬ್ಯಾಂಕ್ ಮರ್ಜಿ ಮಾಡುವುದನ್ನು ತಡೆಯುವ ಬಗ್ಗೆ ಇಲ್ಲಿನ ಸಂಸದರಾಗಿದ್ದ ಡಿ.ವಿ. ಸದಾನಂದ ಗೌಡ, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್ ಯಾವುದೇ ಮಾತುಗಳನ್ನಾಡಿಲ್ಲ. ತವರಿನಲ್ಲಿ ಬೆಳೆದ ಬ್ಯಾಂಕ್ನ್ನು ಉಳಿಸುವ ಕೆಲಸ ಅವರಿಂದಾಗಿಲ್ಲ. ಇವರಿಗೆ ಸಂಸದರಾಗುವ ಯಾವುದೇ ಅರ್ಹತೆಯಿಲ್ಲ. ಈ ಮೂವರ ರಾಜಕೀಯ ಅವಧಿ ಈ ಬಾರಿ ಕೊನೆಯಾಗಲಿದೆ. ಈ ಚುನಾವಣೆಯ ಬ್ಯಾಲೆಟ್ ತೀರ್ಪು ಅಂತಿಮ ತೀರ್ಪು ಆಗಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮಾತನಾಡಿ ಬಿಜೆಪಿ ದೇಶಕ್ಕೆ ಅತ್ಯಂತ ದ್ರೋಹ ಮಾಡಿದೆ. ಪ್ರಧಾನಿ ದೇಶಕ್ಕೆ ಗೌರವ ತರುವ ಕೆಲಸ ಮಾಡಿಲ್ಲ. ಈ ಬಾರಿಯ ಚುನಾವಣೆಯ ದೇಶದ ಗೆಲುವಿಗಾಗಿ ನಡೆಯಲಿದ್ದು, ಮತದಾರರು ಯಾವುದೇ ಭಾವನಾತ್ಮಕತೆಗೆ ಬಲಿಯಾಗದೆ ಆತ್ಮಾವಲೋಕನ ಮಾಡಿ ಮತದಾನ ಮಾಡಬೇಕು ಎಂದರು.
ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ ವಿಜಯ ಬ್ಯಾಂಕ್ ವಿಲೀನದಿಂದ ಜಿಲ್ಲೆಯ ಸ್ವಾಭಿಮಾನಿ ನಾಗರಿಕರು ಕರಾಳ ದಿನ ಆಚರಿಸುವಂತಾಗಿದೆ. ಕೇವಲ ಸ್ಥಳಾಂತರವನ್ನು ಹೊರತುಪಡಿಸಿ ಜಿಲ್ಲೆಗೆ ಬಿಜೆಪಿಯ ಕೊಡುಗೆ ಯಾವುದೂ ಇಲ್ಲ. ಬ್ಯಾಂಕ್ ವಿಲೀಕರಣ ಖಂಡನೀಯವಾಗಿದ್ದು, ರಾಹುಲ್ ಗಾಂಧಿಯವರು ಬ್ಯಾಂಕ್ ಉಳಿಸಿಕೊಡುವ ಭರವಸೆ ನೀಡಿದ್ದಾರೆ. ಮಿಥುನ್ ರೈ ಸಂಸದರಾಗಿ ಈ ಬಗ್ಗೆ ಹೋರಾಟ ನಡೆಸಲಿದ್ದಾರೆ ಎಂದು ಹೇಳಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ ಮಾತನಾಡಿ ದೇಶದ ಪ್ರಜಾಪ್ರಭುತ್ವವು ಅಪಾಯದಲ್ಲಿದೆ. ಮತೀಯ ಶಕ್ತಿಯನ್ನು ಒದ್ದೋಡಿಸಲು ಜಾತ್ಯಾತೀತ ಶಕ್ತಿಗಳು ಒಂದಾಗಬೇಕಾಗಿರುವ ಅನಿವಾರ್ಯತೆಯಿದೆ. ಹಿಂದಿ ಮತ್ತು ಇಂಗ್ಲೀಷ್ ಭಾಷೆಯನ್ನು ಸುಲಲಿತವಾಗಿ ಮಾತನಾಡಬಲ್ಲವರಾದ ಮಿಥುನ್ ರೈ ಅವರು ಸಂಸದರಾದಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವಿದೆ ಎಂದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಹಲವಾರು ಮಂದಿ ಕಾಂಗ್ರೆಸ್ಗೆ ಸೇರ್ಪಡೆಗೊಂಡರು. ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ವೇದಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ, ಮಾಜಿ ಸಚಿವ ಅಮರನಾಥ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ ವಿಟ್ಲ. ಮಾಜಿ ಶಾಸಕ ಮೊಯ್ದಿನ್ ಬಾವಾ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕಣಚ್ಚೂರು ಮೋನು, ಕೆಪಿಸಿಸಿ ಸದಸ್ಯ ಡಾ. ರಘು, ಮುಖಂಡರಾದ ಶಾಲೆಟ್ ಪಿಂಟೋ, ಭರತ್ ಮುಂಡೋಡಿ, ಎಂ.ಎಸ್. ಮಹಮ್ಮದ್, ಧನಂಜಯ ಅಡ್ಪಂಗಾಯ, ಹೇಮನಾಥ ಶೆಟ್ಟಿ ಕಾವು, ಅನಿತಾ ಹೇಮನಾಥ ಶೆಟ್ಟಿ, ಮಂಜುಳಾ ಮಾವೆ, ವೆಂಕಪ್ಪ ಗೌಡ ಸುಳ್ಯ, ಅಶ್ರಫ್ ಕಲ್ಲೇಗ, ಮುರಳೀಧರ ರೈ ಮಠಂತಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ಸಮಾವೇಶಕ್ಕೆ ಮೊದಲು ಬೊಳುವಾರಿನಿಂದ ದರ್ಬೆಯ ತನಕ ಕಾಲ್ನಡಿ ಜಾಥಾ ನಡೆಸಿ ಮತಯಾಚನೆ ಮಾಡಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಸ್ವಾಗತಿಸಿದರು. ನ್ಯಾಯವಾದಿ ದುರ್ಗಾಪ್ರಸಾದ್ ಕುಂಬ್ರ ನಿರೂಪಿಸಿದರು.