ಮಿಥುನ್ ರೈಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಜೀನಾಮೆ
ಮಂಗಳೂರು, ಎ. 2: ಬಿಲ್ಲವರನ್ನು ನಿರ್ಲಕ್ಷಿಸಿ ಕಾಂಗ್ರೆಸ್ ಪಕ್ಷವು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದಲ್ಲಿ ಮಿಥುನ್ ರೈಯವರಿಗೆ ಟಿಕೆಟ್ ನೀಡಿದೆ ಎಂದು ಆರೋಪಿಸಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಕಾರ್ತಿಕ್ ಪೂಜಾರಿ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಸ್ಪಷ್ಟನೆಯನ್ನು ನೀಡಿರುವ ಅವರು, ಕಳೆದ ಎರಡು ವರ್ಷಗಳಿಂದ ನಾನು ಮಂಗಳೂರು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದೇನೆ. ಕಳೆದ ಆರು ತಿಂಗಳ ಹಿಂದೆ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಮಿಥುನ್ ರೈಯನ್ನು ಪಕ್ಷ ಸಂಘಟನೆ ಮಾಡದೆ ಇರುವುದರಿಂದ ಅಮಾನತು ಮಾಡಲಾಗಿತ್ತು. ತನ್ನ ಅಧಿಕಾರ ಅವಧಿಯಲ್ಲಿ ಆಪ್ತರನ್ನು ಬಿಟ್ಟು ಬಡ ಯುವಕರಿಗೆ ಯಾವುದೇ ರೀತಿಯಲ್ಲಿ ಸಹಕಾರ ನೀಡಲಿಲ್ಲ. ಬಿಲ್ಲವ ಸಮುದಾಯದವರಿಗೆ ಈ ಬಾರಿ ಜಿಲ್ಲೆಯಲ್ಲಿ ಲೋಕಸಭಾ ಟಿಕೆಟ್ ನೀಡಬೇಕಾಗಿತ್ತು ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಹಿರಿಯ ನಾಯಕ ಜನಾರ್ದನ ಪೂಜಾರಿಯವರು ಕೆಲವೊಂದು ಹೇಳಿಕೆ ನೀಡಿದಾಗ ಅವರ ಬಗ್ಗೆ ಲಘುವಾಗಿ ಪರಿಗಣಿಸಲಾಗಿದೆ. ಅವರನ್ನು ಎನ್ಕೌಂಟರ್ ಮಾಡುವ ಹೇಳಿಕೆಯೂ ನೀಡಲಾಗಿತ್ತು. ಆ ಸಂದರ್ಭ ಯಾವ ನಾಯಕನೂ ಮಾತನಾಡಿಲ್ಲ. ಟಿಕೆಟ್ ನೀಡುವ ಸಂದರ್ಭ ಸೌಜನ್ಯಕ್ಕೂ ಪೂಜಾರಿಯವರಿಗೆ ಮರ್ಯಾದೆ ನೀಡಲಿಲ್ಲ. ಈಗ ಅವರ ಕಾಲು ಹಿಡಿಯುತ್ತಾರೆ. ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಿಂದ ಹಿಂದೂಗಳು ಹೇಳಿದ ಯಾವುದೇ ಕೆಲಸವಾಗುತ್ತಿಲ್ಲ. ಈ ವಿಚಾರ ಬಹಳ ನೋವು ಕೊಟ್ಟಿದೆ ಎಂದು ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಆಕ್ಷೇಪಿಸಿದ್ದಾರೆ.
ಮಿಥುನ್ರೈಗಾಗಿ ಪೂಜಾರಿಯವರು ಆತ ಸೋತರೆ ದೇವಸ್ಥಾನಕ್ಕೆ ಹೋಗುವುದಿಲ್ಲ ಎಂದು ನೀಡಿರುವ ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕು. ಮಿಥುನ್ ರೈಗಾಗಿ 70 ವರ್ಷದ ಅವರು ತಮ್ಮ ದೈವತ್ವದ ನಂಬಿಕೆಗೆ ಅವಮಾನ ಮಾಡಬಾರದು ಎಂದು ಕೇಳಿಕೊಳ್ಳುತ್ತೇನೆ. ಇಂದು ಇಡೀ ದೇಶ ಹೆಮ್ಮೆ ಪಡುವ ಹಾಗೆ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ಇಂತಹ ವ್ಯಕ್ತಿ ಈ ದೇಶಕ್ಕೆ ಬೇಕು. ಅವರಿಗೆ ಬೆಂಬಲವಾಗಿ ನಾನು ಯುವ ಕಾಂಗ್ರೆಸ್ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಾರ್ತಾಭಾರತಿ ಜತೆ ಮಾತನಾಡಿರುವ ಕಾರ್ತಿಕ್ ಪೂಜಾರಿ, ‘‘ನಾನು ಬಿಲ್ಲವರಿಗೆ ಆಗಿರುವ ಅನ್ಯಾಯವನ್ನು ವಿರೋಧಿಸಿ ನನ್ನ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ಸದ್ಯ ಮೋದಿಯನ್ನು ಬೆಂಬಲಿಸಲು ನಿರ್ಧರಿಸಿದ್ದೇನೆ. ಬಿಜೆಪಿ ಪಕ್ಷ ಸೇರುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಆ ಬಗ್ಗೆ ಮುಂದೆ ನಿರ್ಧರಿಲಾಗುವುದು’’ ಎಂದು ಹೇಳಿದ್ದಾರೆ.