ದೇಶಕ್ಕೆ ಮೋದಿ ಸರಕಾರ ಅನಿವಾರ್ಯ: ಅನ್ವರ್ ಮಾಣಿಪ್ಪಾಡಿ
ಮಂಗಳೂರು, ಎ. 2: ಸರ್ವ ಜನರ ಒಳಿತು ಮತ್ತು ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯ ಸರಕಾರ ದೇಶಕ್ಕೆ ಅನಿವಾರ್ಯ ಎಂದು ರಾಜ್ಯ ಬಿಜೆಪಿ ಸಹ ವಕ್ತಾರ ಅನ್ವರ್ ಮಾಣಿಪ್ಪಾಡಿ ಹೇಳಿದ್ದಾರೆ.
ನಗರದ ಬಂಟ್ಸ್ ಹಾಸ್ಟೆಲ್ ಬಳಿಯ ದ.ಕ.ಲೋಕಸಭಾ ಕ್ಷೇತ್ರದ ಚುನಾವಣಾ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ದೇಶದ ಚಿತ್ರಣವೇ ಬದಲಾಗಿದೆ. ವಿದೇಶದಲ್ಲೂ ದೇಶದ ಜನತೆಗೆ ಮನ್ನಣೆ ಸಿಗುತ್ತದೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಸಹಿತ ಎಲ್ಲರೂ ಮೋದಿ ಸರಕಾರವನ್ನು ಮತ್ತೆ ಅಧಿಕಾರಕ್ಕೇರಿಸಬೇಕು ಎಂದರು.
ರಾಜ್ಯಾದ್ಯಂತ ಅನೇಕ ಕಡೆ ವಕ್ಫ್ ಆಸ್ತಿಗಳ ಅತಿಕ್ರಮಣವಾಗಿದೆ. ನಾನು ನೀಡಿದ ವರದಿಯ ಆಧಾರದ ಮೇಲೆ ಅವುಗಳ ವಶಕ್ಕೆ ಸುಪ್ರೀಂ ಕೋರ್ಟ್ ಕೂಡ ಆದೇಶ ಹೊರಡಿಸಿದೆ. ಆದಾಗ್ಯೂ ಕಾಂಗ್ರೆಸ್-ಜೆಡಿಎಸ್ ಸರಕಾರ ಅವುಗಳನ್ನು ಮರಳಿ ಪಡೆಯಲು ಆಸಕ್ತಿ ವಹಿಸುತ್ತಿಲ್ಲ. ವಕ್ಫ್ ಆಸ್ತಿ ಅತಿಕ್ರಮಣದಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷದಲ್ಲಿರುವ ಮುಸ್ಲಿಂ ನಾಯಕರು ಕೂಡ ಭಾಗಿಯಾಗಿದ್ದು, ಆ ಭಯದಿಂದಲೇ ಈ ಎರಡೂ ಪಕ್ಷಗಳು ಈ ವಿಚಾರದಲ್ಲಿ ಮೌನ ತಾಳಿದೆ ಎಂದು ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಮೋನಪ್ಪ ಭಂಡಾರಿ, ಸಂತೋಷ್ ಕುಮಾರ್ ರೈ ಬೋಳಿಯಾರು, ರಾಮಚಂದರ್ ಬೈಕಂಪಾಡಿ, ಸಾಮಾಜಿಕ ಜಾಲತಾಣಗಳ ಜಿಲ್ಲಾ ಸಂಚಾಲಕ ಸೂರಜ್ ಉಪಸ್ಥಿತರಿದ್ದರು.