ಮಂಗಳೂರು: ಪೊಲೀಸ್ ಧ್ವಜ-ಕಲ್ಯಾಣ ದಿನಾಚರಣೆ
ಮಂಗಳೂರು, ಎ.2: ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ, ದ.ಕ.ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಕೆಎಸ್ಆರ್ಪಿ 7ನೆ ಪಡೆ ಮಂಗಳೂರು ಇದರ ವತಿಯಿಂದ ಮಂಗಳವಾರ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಧ್ವಜ-ಕಲ್ಯಾಣ ದಿನಾಚರಣೆ ಕಾರ್ಯಕ್ರಮ ಜರುಗಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಪೊಲೀಸ್ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಎಸ್ಪಿ ಉದಯ ಎಂ.ನಾಯಕ್ ‘ನಾವು ಪೊಲೀಸ್ ಇಲಾಖೆಯ ಸೇವೆಗೆ ಸೇರಲ್ಪಟ್ಟಾಗ ಪರಿಸ್ಥಿತಿ ಇಷ್ಟೊಂದು ಕಷ್ಟಕರವಾಗಿರಲಿಲ್ಲ. ಆದರೆ, ತಂತ್ರಜ್ಞಾನದಲ್ಲಾದ ಬೆಳವಣಿಗೆಯ ಮಧ್ಯೆ ಪೊಲೀಸ್ ಕೆಲಸವೂ ಕಷ್ಟಕರವಾಗುತ್ತಿದೆ, ಸಂಕೀರ್ಣವಾಗುತ್ತಿದೆ. ದೂರುದಾರರು ಅಥವಾ ಕಕ್ಷಿದಾರರನ್ನು ಸಮಾಧಾನ ಪಡಿಸುವ ಅಥವಾ ವಸ್ತುಸ್ಥಿತಿ ಮನವರಿಕೆ ಮಾಡಿಕೊಳ್ಳಬಹುದು. ಆದರೆ, ಅದರ ಹಿಂದಿರುವ ಶಕ್ತಿಗಳನ್ನು ಸಮಾಧಾನಪಡಿಸಲು ಸಾಧ್ಯವಿಲ್ಲ. ಇದನ್ನು ಎಲ್ಲರೂ ಮನದಟ್ಟು ಮಾಡಿಕೊಳ್ಳಬೇಕು’ ಎಂದರು.
ನಿವೃತ್ತ ಪೊಲೀಸರು ಅಥವಾ ಅಧಿಕಾರಿಗಳು ಕಾರ್ಯನಿಮಿತ್ತ ಠಾಣೆಗಳಿಗೆ ಆಗಮಿಸಿದಾಗ ಸಹಾನುಭೂತಿ ತೋರಿ. ಅವರ ಅಹವಾಲುಗಳನ್ನು ಆಲಿಸಿ. ಗೌರವ ಕೊಟ್ಟು ಉಪಚರಿಸಿ. ಯಾಕೆಂದರೆ ಒಂದಲ್ಲೊಂದು ದಿನ ಎಲ್ಲರೂ ನಿವೃತ್ತರಾಗುವವರಾಗಿದ್ದಾರೆ. ಈಗ ಕರ್ತವ್ಯದಲ್ಲಿರುವವರು ನಿವೃತ್ತರನ್ನು ಆದರಿಂದ ಕಂಡರೆ, ಮುಂದೆಯೂ ಆ ಗೌರವವು ತಮಗೂ ಪ್ರಾಪ್ತಿಯಾಗಬಹುದು ಎಂದು ಉದಯ ನಾಯಕ್ ನುಡಿದರು.
ಪಶ್ಚಿಮ ವಲಯ ಐಜಿಪಿ ಜೆ. ಅರುಣ್ ಚಕ್ರವರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸ್ವಾಗತಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಲಕ್ಷ್ಮಿಪ್ರಸಾದ್ ವರದಿ ವಾಚಿಸಿದರು. ಕೆಎಸ್ಆರ್ಪಿ 7ನೆ ಪಡೆಯ ಕಮಾಂಡೆಂಟ್ ಜನಾರ್ದನ ಆರ್. ಉಪಾಯುಕ್ತರಾದ ಹನುಮಂತರಾಯ, ಉಮಾ ಪ್ರಶಾಂತ್ ಮತ್ತಿತರರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಕಳೆದೊಂದು ವರ್ಷದಲ್ಲಿ ನಿವೃತ್ತರಾದ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ 31, ಜಿಲ್ಲಾ ಪೊಲೀಸ್ ವ್ಯಾಪ್ತಿಯ 19, ಕೆಎಸ್ಆರ್ಪಿ ಪಡೆಯ 14 ಹೀಗೆ 64 ಮಂದಿ ಪೊಲೀಸ್ ಅಧಿಕಾರಿ-ಸಿಬ್ಬಂದಿ ವರ್ಗವನ್ನು ಸನ್ಮಾನಿಸಲಾಯಿತು.