ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲರಾಗಿ ಡಾ.ಎ.ಪಿ.ಭಟ್
ಉಡುಪಿ, ಎ. 2: ಈ ವರ್ಷ ಸ್ಥಾಪನೆಯ ವಜ್ರಮಹೋತ್ಸವದಲ್ಲಿರುವ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ 18ನೇ ಪ್ರಾಂಶುಪಾಲರಾಗಿ ಖಗೋಳ ವಿಜ್ಞಾನಿ ಡಾ.ಎ.ಪಿ.ಭಟ್ (ಸೂರಾಲು ಅನಂತಪದ್ಮನಾಭ ಭಟ್) ಇಂದು ಅಧಿಕಾರ ಸ್ವೀಕರಿಸಿದರು.
33 ವರ್ಷಗಳಿಗೂ ಅಧಿಕ ಕಾಲ ಭೌತಶಾಸ್ತ್ರ ಉಪನ್ಯಾಸಕರಾಗಿ ಈ ಕಾಲೇಜಿ ನಲ್ಲಿ ಸೇವೆ ಸಲ್ಲಿಸಿರುವ ಡಾ.ಭಟ್, 1982ರಲ್ಲಿ ಮೈಸೂರು ವಿವಿಯಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ 1997ರಲ್ಲಿ ಮಂಗಳೂರು ವಿವಿಯಿಂದ ಎಂಫಿಲ್ ಹಾಗೂ 2004ರಲ್ಲಿ ಅದೇ ವಿವಿಯಿಂದ ಡಾಕ್ಟರೇಟ್ ಪದವಿ ಗಳಿಸಿದ್ದರು. ಇವರ 8 ಸಂಶೋಧನಾ ಪ್ರಬಂಧಗಳು ಅಂತಾರಾಷ್ಟ್ರೀಯ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅಲ್ಲದೇ ಇವರು 30ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ, ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.
ತಮ್ಮ ಸಂಶೋಧನೆಗಾಗಿ ದೆಹಲಿಯ ನ್ಯೂಕ್ಲಿಯರ್ ಸಯನ್ಸ್ ಸೆಂಟರ್, ಅಹ್ಮದಾಬಾದ್ನ ಫಿಸಿಕಲ್ ರೀಸರ್ಚ್ ಲ್ಯಾಬೊರೇಟರೀಸ್, ಕೊಚ್ಚಿನ್ ಯೂನಿವರ್ಸಿಟಿ ಆಫ್ ಸಯನ್ಸ್ ಆಂಡ್ ಟೆಕ್ನಾಲಜಿ ಕೊಚ್ಚಿ, ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರ ಹಾಗೂ ಮಂಗಳೂರು ವಿವಿಗಳಲ್ಲಿ ಸಂಶೋಧನಾ ಪ್ರಯೋಗಗಳನ್ನು ಮಾಡಿದ್ದರು.
ತಮ್ಮ ಆಸಕ್ತಿಯ ಆಕಾಶ ಅಧ್ಯಯನಕ್ಕಾಗಿ ಬೆಂಗಳೂರಿನ ತಾರಾಲಯ, ಪೂನಾದ ಇಂಟರ್ ಯೂನಿವರ್ಸಿಟಿ ಸೆಂಟರ್ ಫಾರ್ ಆಸ್ಟ್ರೋನೋಮಿ ಆಸ್ಟ್ರೋ ಫಿಜಿಕ್ಸ್ಗಳಿಂದ ಖಗೋಳ ವಿಜ್ಞಾನದಲ್ಲಿ ವಿಶೇಷ ತರಬೇತಿಯನ್ನು ಪಡೆದಿದ್ದರು. ಕರ್ನಾಟಕ ರಾಜ್ಯಾದ್ಯಂತ ಸುಮಾರು 300ಕ್ಕೂ ಹೆಚ್ಚು ಆಕಾಶ ವೀಕ್ಷಣೆ ಶಿಬಿರ ಗಳನ್ನು ಏರ್ಪಡಿಸಿದ್ದಾರೆ.
ಮೂಲತಃ ಉಡುಪಿ ತಾಲೂಕಿನ ಸೂರಾಲಿನವರಾದ ಡಾ. ಭಟ್, ವೇದಮೂರ್ತಿ ಜನಾರ್ದನ ಭಟ್ ಇವರ ಪುತ್ರ.