ಸಹಕಾರಿ ಕ್ಷೇತ್ರ ಪ್ರಜಾಪ್ರಭುತ್ವದ ತೊಟ್ಟಿಲು: ಸತೀಶ್ಚಂದ್ರ
ಉಡುಪಿ, ಎ.2: ದೇಶ ನಿರ್ಮಾಣಕ್ಕೆ ಸಹಕಾರಿ ರಂಗದ ಕೊಡುಗೆ ಮಹತ್ವದ್ದಾಗಿದೆ. ರಾಜ್ಯದಲ್ಲಿ 44ಸಾವಿರ ಮತ್ತು ದೇಶದಲ್ಲಿ 8ಲಕ್ಷ ಸಹಕಾರಿ ಸಂಘಗಳಿವೆ. ಆದುದರಿಂದ ಸಹಕಾರಿ ಕ್ಷೇತ್ರವು ಪ್ರಜಾಪ್ರಭುತ್ವದ ತೊಟ್ಟಿಲು ಆಗಿದೆ ಎಂದು ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷ ಹಾಗೂ ಸಹಕಾರ ಭಾರತಿಯ ರಾಜ್ಯಾಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಹೇಳಿದ್ದಾರೆ.
ಉಡುಪಿ ಜಿಲ್ಲಾ ಸಹಕಾರ ಭಾರತಿ ವತಿಯಿಂದ ಉಡುಪಿಯ ಕಿನ್ನಿಮುಲ್ಕಿಯ ವೀರಭದ್ರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಲಾದ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಹಕಾರ ಭಾರತಿ ರಾಷ್ಟ್ರೀಯ ಸಹ ಸಂಘಟನಾ ಪ್ರಮುಖ್ ಕೊಂಕೋಡಿ ಪದ್ಮನಾಭ ಮಾತನಾಡಿ, ಮುಂದಿನ ದಿನಗಳಲ್ಲಿ ಸಹಕಾರಿ ರಂಗದಲ್ಲೂ ಹಣದ ಆಮಿಷದ ಜೊತೆಗೆ ರಾಜಕೀಯ ಪ್ರವೇಶದ ಭೀತಿ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಹಿರಿಯ ಪ್ರಚಾರಕ ದಾ.ಮಾ.ರವೀಂದ್ರ, ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ರಾಜ್ಯ ಮಹಿಳಾ ಪ್ರಕೋಷ್ಟ ಪ್ರಮುಖ್ ಸುಮನಾ ಶರಣ್, ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಮಧುಸೂದನ ನಾಯಕ್, ರಾಜ್ಯ ಸಮಿತಿ ಸದಸ್ಯ ಅಶೋಕ್ ಕುಮಾರ್ ಶೆಟ್ಟಿ, ಸಹಕಾರ ಭಾರತಿಯ ರಾಜ್ಯ ಸಂಘಟನಾ ಪ್ರಮುಖ್ ನವೀನ್ಕುಮಾರ್ ಉಪಸ್ಥಿತರಿದ್ದರು.
ಸಹಕಾರ ಭಾರತಿ ತಾಲೂಕು ಅಧ್ಯಕ್ಷ ದಿನೇಶ್ ಹೆಗ್ಡೆ ಆತ್ರಾಡಿ ಸ್ವಾಗತಿಸಿದರು. ರಾಜ್ಯ ಕಾನೂನು ಪ್ರಕೋಷ್ಟದ ಮಂಜುನಾಥ ಎಸ್.ಕೆ. ವಂದಿಸಿದರು. ನರಸಿಂಹ ಕಾಮತ್ ಕಾರ್ಯಕ್ರಮ ನಿರೂಪಿಸಿದರು.