ಯಾವುದೇ ಆಮಿಷಕ್ಕೊಳಗಾಗದೇ ಮತ ಚಲಾಯಿಸಿ: ಹೆಪ್ಸಿಬಾ ರಾಣಿ
ಉಡುಪಿ, ಎ.2: ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ 5 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮತದಾರರ ಭಾವಚಿತ್ರವಿರುವ ಪೋಟೋ ವೋಟರ್ಸ್ಲಿಪ್ಗಳನ್ನು ಮುದ್ರಣ ಮಾಡಿ ಬಿಎಲ್ಓಗಳ ಮೂಲಕ ಮತದಾರರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಜಿಲ್ಲೆಯ ಮತದಾರರು ಮತದಾರರ ಭಾವಚಿತ್ರವಿರುವ ವೋಟರ್ಸ್ಲಿಪ್ ಗಳು ಸಿಗದೇ ಇದ್ದಲ್ಲಿ ತಕ್ಷಣವೇ ಸಂಬಂಧಪಟ್ಟ ಮತಗಟ್ಟೆ ಅಧಿಕಾರಿ ಗಳಿಂದ ಪಡೆಯಬಹುದು ಹಾಗೂ ಮತದಾನ ದಿನದಂದು ಎಪಿಕ್ ಕಾರ್ಡ್ ಅಥವಾ 11 ನಿಗದಿತ ಗುರುತಿನ ಚೀಟಿಗಳಲ್ಲಿ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ತಪ್ಪದೇ ಮತಗಟ್ಟೆಗೆ ತೆಗೆದುಕೊಂಡು ಹೋಗಲು ಸೂಚಿಸಿದ್ದಾರೆ.
ಎ.18ರಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ (ಕುಂದಾಪುರ, ಉಡುಪಿ, ಕಾಪು ಮತ್ತು ಕಾರ್ಕಳ ವಿಧಾನಸಭಾ ಕ್ಷೇತ್ರಗಳಲ್ಲಿ) ಹಾಗೂ ಎ.23ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ (ಬೈಂದೂರು ವಿಧಾನಸಬಾ ಕ್ಷೇತ್ರ) ನಡೆಯಲಿದೆ.
ಚುನಾವಣೆಯ ವೇಳೆ ಇವಿಎಂನಲ್ಲಿ ಮತದಾನ ಮಾಡುವ ಬ್ಯಾಲೆಟ್ ಯುನಿಟ್ನಲ್ಲಿ ಅ್ಯರ್ಥಿಗಳ ಹೆಸರುಗಳಲ್ಲದೇ ಕೊನೆಯ ಅವಕಾಶ ನೋಟಾ (ಮೇಲ್ಕಂಡ ಯಾರೂ ಅಲ್ಲ) ದಾಖಲಾತಿಯು ಇರುತ್ತದೆ.ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನದ ಸಂದರ್ಭದಲ್ಲಿ ಮತದಾರರಿಗೆ ತಮ್ಮ ಆಯ್ಕೆಯ ಸೂಕ್ತ ಅ್ಯರ್ಥಿಗಳು ಇಲ್ಲದೇ ಇದ್ದಲ್ಲಿ ನೋಟಾ ಆಯ್ಕೆ ಮಾಡಲು ಮತದಾನ ದಿನದಂದು ಅವಕಾಶವನ್ನು ಕಲ್ಪಿಸಲಾಗಿದೆ.
ಚುನಾವಣೆ ಒಂದು ಪ್ರಜಾಪ್ರಭುತ್ವ ಹಬ್ಬವಾಗಿದ್ದು, ಎಲ್ಲಾ ಮತದಾರರು ಭಯ ಅಥವಾ ಬೆದರಿಕೆ ಒಳಗಾಗದೇ, ಜವಾಬ್ದಾರಿಯುತ ಪ್ರಜೆಗಳಾಗಿ ತಪ್ಪದೇ ತಮ್ಮ ಮತದ ಹಕ್ಕನ್ನು ಚಲಾಯಿಸುವಂತೆ ಹಾಗೂ ಈ ಚುನಾವಣೆಯಲ್ಲಿ ಇವಿಎಂನೊಂದಿಗೆ ವಿವಿಪ್ಯಾಟ್ ಸಹ ಇರುವುದರಿಂದ, ಅದರಲ್ಲಿ ಮತದಾರರು ಆಯ್ಕೆ ಮಾಡಿರುವ ಚಿಹ್ನೆ 7 ಸೆಕೆಂಡ್ಗಳು ನೋಡಲು ಅವಕಾಶವಿದೆ. ಆದ್ದರಿಂದ ಚುನಾವಣೆ ದಿನದಂದು ಮತಗಟ್ಟೆಗೆ ತೆರಳಿ ತಮ್ಮ ಮತದ ಹಕ್ಕನ್ನು ನಿರ್ಭೀತವಾಗಿ ಹಾಗೂ ಮುಕ್ತವಾಗಿ ಯಾವುದೇ ಆಮಿಷಕ್ಕೆ ಒಳಗಾಗದೇ ಚಲಾಯಿಸುವಂತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.